ಉಪ್ಪಿನಂಗಡಿ, ಸೆ.15: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ವತಿಯಿಂದ ಉಪ್ಪಿನಂಗಡಿಯಲ್ಲಿ ಇಂದು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರತಿಭಟನಕಾರರು ರಸ್ತೆಯಲ್ಲೇ ಕುಳಿತುಕೊಳ್ಳುವ ಮೂಲಕ ಮಂಗಳೂರು-ಬೆಂಗಳೂರು ಹೆದ್ದಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಯೋಜನೆಯನ್ನು ಕೈಬಿಡಬೇಕೆಂದು ಘೋಷಣೆ ಕೂಗಿದರು.
ಬೆಳಗ್ಗೆ ಆದಿತ್ಯ ಹೊಟೇಲ್ ಬಳಿಯಿಂದ ಹೊರಟ ಜಾಥಾವು 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿ ಉಪ್ಪಿನಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಹಿಂಭಾಗದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಜೊತೆಗೆ ಪೇಟೆಯೊಳಗಡೆಯಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ವಾಹನಗಳನ್ನು ಅಡ್ಡವಾಗಿಟ್ಟು ಬಂದ್ ನಡೆಸಲಾಯಿತು.
ಸಾಕಷ್ಟು ಪೂರ್ವ ಯೋಜನೆಯನ್ನು ರೂಪಿಸಿ ಹಮ್ಮಿಕೊಂಡಿರುವ ಈ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ, ಬಹುತೇಕ ಸಂಘಸಂಸ್ಥೆಗಳು, ಸಾರ್ವಜನಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳ ಸಹಮತದೊಂದಿಗೆ ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿಭಾಗವಹಿಸಿದ್ದಾರೆ.
ಈ ಬೃಹತ್ ಹಾಗೂ ಶಾಂತಿಯುತ ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರು, ಸ್ವಾಮೀಜಿಗಳು, ಸಂಸದ ನಳಿನ್ ಕುಮಾರ್, ಶಾಸಕ ವಸಂತ್ ಬಂಗೇರ ಸೇರಿದಂತೆ ವಿವಿಧ ರಾಜಕೀಯ ನಾಯಕರು,ತುಳು ಸಿನಿಮಾ ನಟ, ನಟಿಯರು, ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ವಿವಿಧ ಮಹಿಳಾ ಘಟಕದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಕಾರರನ್ನುದ್ದೇಶಿಸಿ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ನಿರಂಜನ್ ರೈ ಅವರು ಮಾತನಾಡಿ, ಕರಾವಳಿಯ ಅಳಿವಿಗೆ ಕಾರಣವಾಗಿರುವ ಈ ಯೋಜನೆಯನ್ನು ಯಾವೂದೇ ಕಾರಣಕ್ಕೂ ಅನುಷ್ಟಾನಗೊಳಿಸ ಬಾರದು. ಎತ್ತಿನಹೊಳೆ ಯೋಜನೆ ಅನುಷ್ಠಾನ ಮಾಡುವ ಮೂಲಕ ಕರಾವಳಿಯನ್ನು ಸರ್ವನಾಶಮಾಡುವುದನ್ನು ನಾವು ಸಹಿಸುವುದಿಲ್ಲ. ಸರಕಾರ ಈ ಯೊಜನೆಯನ್ನು ತಕ್ಷಣವೇ ಕೈ ಬಿಡಬೇಕು. ಕರಾವಳಿಯ ಉಳಿವಿಗಾಗಿ ಕೈಗೊಂಡಿರುವ ಈ ನಮ್ಮ ಹೋರಾಟ- ಇದು ಅಂತ್ಯ ಅಲ್ಲ ಆರಂಭ. ನೇತ್ರಾವತಿ ನದಿ ಹಾಗೂ ಪಶ್ಚಿಮ ಘಟ್ಟ ಉಳಿವಿನ ಬಗ್ಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಮುಂದೆ ಉಗ್ರ ಹೋರಾಟಕ್ಕೂ ಸಿದ್ಧ ಎಂದರು.
ಪ್ರತಿಭಟನೆಯಲ್ಲಿ ಪೂರ್ವಯೋಜನೆಯಂತೆ ಪ್ರತಿಯೋರ್ವರು ಹೋರಾಟದ ಜವಾಬ್ದಾರಿ ವಹಿಸಿಕೊಂಡು, ಯಾವುದೇ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ, ಇತರ ಘೋಷಣೆಗಳಿಗೆ ಆಸ್ಪದ ನೀಡದೆ ಬರೀ ನೇತ್ರಾವತಿ ಉಳಿಸಿ, ಪಶ್ಚಿಮ ಘಟ್ಟ ಉಳಿಸಿ ಘೋಷಣೆಗಳನ್ನು ಮಾತ್ರ ಕೂಗುವ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಿದರು.
ರಸ್ತೆ ತಡೆ ನಡೆಸುತ್ತಿದ್ದವರ ಬಂಧನ :
ಇದೇ ಸಂದರ್ಭದಲ್ಲಿ ಶಾಂತಿಯುತವಾಗಿ ಚಳವಳಿ ನಡೆಸುವ ಮೂಲಕ ಎತ್ತಿನಹೊಳೆ ಯೋಜನೆಯನ್ನು ಕೈ ಬಿಡಬೇಕು ಎಂದು ಹಕ್ಕೊತ್ತಾಯ ಮಂಡಿಸುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಹೋರಾಟಗಾರರ ಆಕ್ರೋಷ ಮುಗಿಲು ಮುಟ್ಟಿದ್ದು, ಜೈಲ್ ಭರೋಗೆ ಮುಂದಾದರು. ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವ ಕಟ್ಟಕಡೆಯ ವ್ಯಕ್ತಿ ಕೂಡಾ ಪೊಲೀಸರು ಬಂಧಿಸಿದ ಬಳಿಕವೇ ರಸ್ತೆಯಿಂದ ಎದ್ದೇಳಬೇಕು, ಆಗ ಮಾತ್ರ ನಮ್ಮ ಹೋರಾಟ ಸರಕಾರವನ್ನು ತಲುಪಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಡಾ.ನಿರಂಜನ್ ರೈ ಕರೆ ನೀಡಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್ :
ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಪರಿಸರದಲ್ಲಿ ಭಾರೀ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಸುಮಾರು 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂಧಿಗಳನ್ನು ಸ್ಥಳದಲ್ಲಿ ನಿಯುಕ್ತಿಗೊಳಿಸಲಾಗಿತ್ತು.
ಪಾರ್ಕಿಂಗ್ ವ್ಯವಸ್ಥೆ:
ಹೋರಾಟದಲ್ಲಿ ಭಾಗವಹಿಸುವವರಿಗೆ ವಾಹನಗಳನ್ನು ನಿಲ್ಲಿಸಲು ಉಪ್ಪಿನಂಗಡಿಯ ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ನೆಲ್ಯಾಡಿ ಕಡೆಯಿಂದ ಬರುವವರು ಕೂಟೇಲು ಸೇತುವೆ ಬಳಿಯಿರುವ ಶುಕ್ರಿಯಾ ಅವರ ಜಮೀನಿನಲ್ಲಿ, ಬೆಳ್ತಂಗಡಿ ಕಡೆಯಿಂದ ಬರುವವರು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಾಗೂ ಪುತ್ತೂರು-ಮಂಗಳೂರು ಕಡೆಯಿಂದ ಬರುವವರು ನೆಕ್ಕಿಲಾಡಿ ಸಂತೆ ಮೈದಾನದಲ್ಲಿ ವಾಹನ ನಿಲುಗಡೆಗೊಳಿಸಲು ಸಂಘಟಕರು ವ್ಯವಸ್ಥೆಮಾಡಿದ್ದರು.
—————————————————
ಎತ್ತಿನಹೊಳೆ ವಿರುದ್ಧದ ಹೋರಾಟಕ್ಕೆ ಚಾಲನೆ – ನೇತ್ರಾವತಿ ನದಿ ರಕ್ಷಣೆಗಾಗಿ ಬೀದಿಗಿಳಿದ ಜನತೆ
ವರದಿ ಕೃಪೆ : ವಾಭಾ
ಮಂಗಳೂರು/ಪುತ್ತೂರು, ಸೆ.16: ಎತ್ತಿನಹೊಳೆ ವಿರುದ್ಧದ ಹೋರಾಟಕ್ಕೆ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಉಪ್ಪ್ಪಿನಂಗಡಿ ರಾಷ್ಟ್ರೀಯ ಹೆದ್ದಾ ರಿಗೆ ಹೊಂದಿಕೊಂಡಿರುವ ಸರಕಾರಿ ಶಾಲೆಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನತೆಯ ಸಮ್ಮು ಖದಲ್ಲಿ ಚಾಲನೆ ದೊರೆಯಿತು. ಒಡಿಯೂರು ಗುರುದೇವಾನಂದ ಸ್ವಾಮೀಜಿ, ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಮತ್ತು ಮಂಜಲ್ಪಡ್ಪು ಸುದಾನ ದೇವಾಲಯದ ಧರ್ಮಗುರು ರೆ.ವಿಜಯ ಹಾರ್ವಿನ್ರವರು ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಸಂಘಟನೆಯ ಮುಖ್ಯಸ್ಥರಿಗೆ ಧ್ವಜ ನೀಡುವ ಮೂಲಕ ಧರಣಿಗೆ ಚಾಲನೆ ನೀಡಿದರು.
ಅಲ್ಲಿಂದ ಸುಮಾರು ಒಂದು ಕಿ.ಮೀ.ವರೆಗೆ ಸಾವಿರಾರು ಸಂಖ್ಯೆಯಲ್ಲಿ ಧರಣಿನಿರತರು ಉಪ್ಪಿನಂಗಡಿ ಜಂಕ್ಷನ್ವರೆಗೆ ಮೆರವಣಿಗೆಯ ಮೂಲಕ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಕುಳಿತು ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಭ ಕಣಿಯೂರು ಮಠದ ಮಹಾಬಲೇಶ್ವರ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಸಾಧ್ವಿ ಮಾತಾನಂದಮಯಿ, ಮಾಣಿಲ ಸ್ವಾಮೀಜಿ ರಸ್ತೆಯಲ್ಲಿ ಕುಳಿತು ಧರಣಿನಿರತರನ್ನು ಬೆಂಬಲಿಸಿದರು. ಕೆಲ ಹೊತ್ತು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿ ಸಿದರು. ಆದರೆ ರಾಜಕೀಯ ವ್ಯಕ್ತಿಗಳಿಗೆ ಸಭೆಯಲ್ಲಿ ಮಾತನಾಡುವ ಅವಕಾಶವಿರಲಿಲ್ಲ. ಧರಣಿಯ ಆರಂಭದಲ್ಲಿ ಬಿಸಿಲ ಧಗೆಗೆ ಮೈಯಿಂದ ಬೆವರು ಇಳಿಯಲಾರಂಭಿಸಿದ್ದರೆ, 12 ಗಂಟೆಯ ಸುಮಾರಿಗೆ ಧಾರಾಕಾರ ಧರಣಿನಿರತ ರನ್ನು ತೊಯಿಸಿಬಿಟ್ಟಿತ್ತು. ಆದರೆ ಇದ್ಯಾವುದಕ್ಕೂ ಜಗ್ಗದ ಧರಣಿನಿರತರು ಯೋಜನೆಯ ವಿರುದ್ಧ ಧಿಕ್ಕಾರ ಕೂಗುತ್ತಾ ಮಧ್ಯಾಹ್ನ ಒಂದೂವರೆ ಗಂಟೆಯ ವರೆಗೂ ಧರಣಿ ನಡೆಸಿದರು. ಬಳಿಕ ಸುಮಾರು ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಇಲಾಖೆಯ ವಾಹನ ಹಾಗೂ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಸಾವಿರಾರು ಸಂಖ್ಯೆಯ ಲ್ಲಿದ್ದ ಧರಣಿನಿರತರನ್ನು ವಶಕ್ಕೆ ಪಡೆದು ನೆಕ್ಕಿಲಾಡಿ ಸರಕಾರಿ ಶಾಲೆವರೆಗೆ ಕರೆದೊಯ್ದು ಬಿಡುಗಡೆ ಗೊಳಿಸಿದರು.
ಧರಣಿಯಲ್ಲಿ ಕೇಳಿಬಂದ ಪ್ರಮುಖರ ನುಡಿ…
ನೇತ್ರಾವತಿ ನದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಹೋರಾಟದ ರಣಕಹಳೆಯೊಂದಿಗೆ ಕುದುರೆ (ಮೂಲತಃ ಸಕಲೇಶಪುರದ ಅವಿನಂದ್ ಸಾಕು ಕುದುರೆ ‘ವೀರ’) ಬಿಟ್ಟಿದ್ದೇವೆ. ಸರಕಾರ ತಾಕತ್ತಿದ್ದರೆ ಅದನ್ನು ಕಟ್ಟಿ ಹಾಕಿ ನೋಡಲಿ. -ಎಂ.ಜಿ. ಹೆಗಡೆ, ಕರಾವಳಿ ಜೀವನದಿ- ನೇತ್ರಾವತಿ ರಕ್ಷಣಾ ಸಮಿತಿಯ ಮುಖಂಡ.
ನಾನು ಸಕಲೇಶಪುರ ನಿವಾಸಿ. ಸಕಲೇಶಪುರ ದಲ್ಲಿ ಎತ್ತಿನಹೊಳೆ ಯೋಜನೆ ನಡೆಯುತ್ತಿದ್ದರೂ ಅದರಿಂದ ಹಾನಿಗೊಳಗಾಗುವವರು ದಕ್ಷಿಣ ಕನ್ನಡ ಜಿಲ್ಲೆಯ ಜನತೆ. ಹಾಗಿದ್ದರೂ ಯಾಕೆ ಸುಮ್ಮನಿದ್ದಾರೆ ಎಂಬ ಆತಂಕ ಆರಂಭದಲ್ಲಿ ನನಗಿತ್ತು. ಆದರೆ ಇಂದಿನ ಜನ ಹಾಗೂ ವಿದ್ಯಾರ್ಥಿ ಸಮೂಹ ಆ ಆತಂಕವನ್ನು ನಿವಾರಿಸಿದೆ. ನೇತ್ರಾವತಿ ಉಳಿಸಲು ನಾವು ಸಿದ್ಧ.
-ಅವಿನಂದ್, ತನ್ನ ಸಾಕುಕುದುರೆ ಮೂಲಕ ಜಿಲ್ಲೆಯ ವಿವಿಧೆಡೆ ನೇತ್ರಾವತಿ ಅಭಿಯಾನದಲ್ಲಿ ತೊಡಗಿಸಿಕೊಂಡಿರುವವರು.
ಕರಾವಳಿಯನ್ನು ಬರಡುಗೊಳಿಸುವ ಈ ಯೋಜನೆಯ ವಿರುದ್ಧ ಪ್ರತಿಯೋರ್ವರು ಧ್ವನಿ ಯೆತ್ತಬೇಕಾಗಿದೆ. ಆಕ್ರೋಶಿತ ಜಿಲ್ಲೆಯ ಜನತೆ ಅಧಿಕಾರಿಗಳ ಮನೆಗೆ ನುಗ್ಗಿ ಹಲ್ಲೆ ನಡೆಸುವ ಮುನ್ನ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸಿ.-ವಿಜಯಕುಮಾರ್ ಹೆಗ್ಡೆ ಉಡುಪಿ, ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡ.
ನದಿಯ ರಕ್ಷಣೆಗೆ ನದಿಗಳ ಸಂಗಮ ಕ್ಷೇತ್ರ ವಾದ ಉಪ್ಪಿನಂಗಡಿಯಲ್ಲಿಂದು ಸಮಾಜದ ಸಂಗಮ ವಾಗುವಂತಾಗಿದೆ. ಈ ಹೋರಾಟದ ಕಾವು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೂ ತಲುಪಬೇಕು. -ರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಮಠ, ಗುರುಪುರ.
ಪ್ರಕೃತಿಯನ್ನು ಸಂಸ್ಕೃತಿಯನ್ನಾಗಿ ಮಾಡಬೇಕೇ ಹೊರತು ಅದು ವಿಕೃತಿಯಾದರೆ ಉಳಿಗಾಲವಿಲ್ಲ. ಆದುದರಿಂದ ಈ ಯೋಜನೆಯನ್ನು ಕರಾವಳಿಯ ಪ್ರತಿಯೋರ್ವರು ವಿರೋಧಿಸಬೇಕು. -ಸಾಧ್ವಿ ಮಾತಾನಂದಮಯಿ, ಒಡಿಯೂರು ಸಂಸ್ಥಾನ
ವೈಜ್ಞಾನಿಕ ರೀತಿಯಲ್ಲಿ ಪ್ರಕೃತಿ ಸೃಷ್ಟಿ ಸಾಧ್ಯವಿಲ್ಲ. ಅನಾಹುತಕ್ಕೆ ಕಾರಣವಾಗುವ ಎತ್ತಿನ ಹೊಳೆ ಯೋಜನೆ ಬೇಡ.- ಕಿಶೋರ್ ಶಿರಾಡಿ, ಮಲೆನಾಡು ಹಿತ ರಕ್ಷಣಾ ವೇದಿ ಕೆಯ ಸಂಚಾಲಕ.
ತುಳು ಚಿತ್ರರಂಗದ ಯುವ ನಟರಾದ ಅರ್ಜುನ್ ಕಾಪಿಕಾಡ್ ಮತ್ತು ರೂಪೇಶ್ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ ಹೋರಾಟಗಾರರನ್ನು ಹುರಿದುಂಬಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಜಿಲ್ಲಾ ಫೋಟೊಗ್ರಾಫರ್ಸ್ ಅಸೋಸಿಯೇಶನ್, ಪುತ್ತೂರು ಹಾಗೂ ಉಪ್ಪಿನಂಗಡಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ಜೀಪು ಚಾಲಕರ ಮತ್ತು ಮಾಲಕರ ಸಂಘ, ವಿವಿಧ ಕಾರ್ಮಿಕ ಸಂಘಟನೆಗಳು, ಮಾತೃಭೂಮಿ ರಕ್ಷಣಾ ಸಮಿತಿ, ಕಾವೇರಿ ಹೋರಾಟ ಸಮಿತಿ, ಅರಸು ಫ್ರೆಂಡ್ಸ್ ಮಂಡಳಿ ಮಂಗಳೂರು, ಪುತ್ತೂರು ಜಯಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳು, ಶಾಲಾ-ಕಾಲೇಜುಗಳು ಬ್ಯಾನರ್ ಸಹಿತ ಧರಣಿಗೆ ಆಗಮಿಸಿ ಬೆಂಬಲ ಸೂಚಿಸಿದವು. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾನೂನು ಸಲಹೆಗಾರ ದಿನಕರ್ ಶೆಟ್ಟಿ, ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ರಾಮಚಂದರ್ ಬೈಕಂಪಾಡಿ, ಯೋಗೀಶ್ ಶೆಟ್ಟಿ ಜಪ್ಪಿನಮೊಗರು, ರೊಹರಾ ನಿಸಾರ್, ಮಿಥುನ್ ರೈ, ಚಂದ್ರಹಾಸ್ ಶೆಟ್ಟಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಮಹೇಶ್ ಶೆಟ್ಟಿ ತಿಮರೋಡಿ, ಸುಧೀರ್ ಶೆಟ್ಟಿ ಕಣ್ಣೂರು, ಹಾಜಿ ಮುಸ್ತಫಾ ಕೆಂಪಿ, ಎಂ.ಬಿ.ಹೆಗ್ಡೆ, ಅಝೀಝ್ ನಿನ್ನಿಕಲ್ಲ್, ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷೆ ರತಿ ಎಸ್.ನಾಯ್ಕ, ಉಪಾಧ್ಯಕ್ಷ ಅಸ್ಗರ್ ಅಲಿ, ಲಕುಮಿ ಕಿಶೋರ್ ಡಿ. ಶೆಟ್ಟಿ ಸೇರಿದಂತೆ ಹಲವಾರು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಭಾಗ ವಹಿಸಿದ್ದರು.
ಲೋಕೇಶ್ ಬೆತ್ತೋಡಿ ಹಾಗೂ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಜಯಂತ ಪೊರೋಳಿ ಸ್ವಾಗತಿಸಿದರು.
ಹುರಿದುಂಬಿಸಿದ ನಾದಾ ಮಣಿನಾಲ್ಕೂರು ಹಾಡು!
ಪ್ರತಿಭಟನೆಯಲ್ಲಿ ನಾದಾ ಮಣಿನಾಲ್ಕೂರು ತಂಡ ‘ಎದ್ದು ಬನ್ನಿ.. ತೊಡೆ ತಟ್ಟಿ ನಿಲ್ಲಿ… ಇದು ನಮ್ಮ ಹಕ್ಕಿನ ಹೋರಾಟ…’ ಎಂಬ ಹೋರಾಟ ಗೀತೆಯನ್ನು ಹಾಡುವ ಮೂಲಕ ಧರಣಿನಿರತರನ್ನು ಹುರಿದುಂಬಿಸಿತು.
ಧರಣಿ ಶಾಂತಿಯುತ: ಎಸ್ಪಿ ಡಾ.ಶರಣಪ್ಪ
ಧರಣಿಯ ಹಿನ್ನೆಲೆಯಲ್ಲಿ ಮಂಗಳೂರು ಬೆಂಗಳೂರು ನಡುವೆ ರಸ್ತೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಧರಣಿನಿರತರು ಶಾಂತರೀತಿಯಲ್ಲಿ ಪ್ರತಿಭಟಿಸುವ ಮೂಲಕ ಸಹಕರಿಸಿದ್ದಾರೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಪ್ರತಿಕ್ರಿಯಿಸಿದ್ದಾರೆ. ಬಿಗಿ ಬಂದೋಬಸ್ತ್: ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಾಣಿಯಿಂದ ಉಪ್ಪಿನಂಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾ ಎಸ್ಪಿ, ಹೆಚ್ಚುವರಿ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಬಂಟ್ವಾಳ ಎಎಸ್ಪಿ ರಾಹುಲ್ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸ್ಥಳೀಯ ಪೊಲೀಸರು ಧರಣಿನಿರತ ಸ್ಥಳದಲ್ಲಿ ಜಮಾಯಿಸಿದ್ದರು.
ಜಿಲ್ಲೆ ಹೊತ್ತಿ ಉರಿದರೂ ನೇತ್ರಾವತಿ ಉಳಿಸುವೆವು
ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ನಮಗೆ ಮೋಸ ಮಾಡಿರುವುದು ಸರಕಾರವಲ್ಲ, ಬದಲಿಗೆ ಸ್ಥಳೀಯ ಜನಪ್ರತಿನಿಧಿಗಳು. ಅವರ ನಿಷ್ಕ್ರಿಯತೆಯೇ ನಮ್ಮ ದುರಂತಕ್ಕೆ ಕಾರಣ. ಅವಿಭಜಿತ ಜಿಲ್ಲೆಯಲ್ಲಿನ ನೆಲ ಜಲಗಳ ಮೇಲೆ ಆಗುತ್ತಿರುವ ತೊಂದರೆಗಳಿಗೆ ನಾವೇ ಹೊಣೆಗಾರರು. ನಮ್ಮ ಹಕ್ಕಿಗಾಗಿ ಸಂಘಟಿತ ಹೋರಾಟ ಅನಿವಾರ್ಯ. ಜಿಲ್ಲೆ ಹೊತ್ತಿ ಉರಿದರೂ ಸರಿ, ನೇತ್ರಾವತಿಯನ್ನು ಉಳಿಸಿಕೊಳ್ಳುತ್ತೇವೆ. -ಡಾ. ನಿರಂಜನ ರೈ, ನೇತ್ರಾವತಿ ನದಿ ತಿರುವು ಯೋಜನೆಯ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ
ನೀರಾವರಿ ನಿಗಮದಿಂದ ಸರಕಾರಕ್ಕೆ ಸುಳ್ಳು ವರದಿ
ಎತ್ತಿನಹೊಳೆ ಯೋಜನೆಯಲ್ಲಿ ಕೇವಲ ಒಂದು ಅಡಿ ಹಳ್ಳದ ತೊರೆಗೆ 13 ಸಾವಿರ ಕೋ.ರೂ. ವೆಚ್ಚ ಮಾಡಿ ತಿರುಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಯೋಜನೆಯಿಂದ 24 ಟಿಎಂಸಿ ನೀರು ಸಿಗಲಿದೆ ಎಂದು ಕರ್ನಾಟಕ ನೀರಾವರಿ ನಿಗಮವು ಸರಕಾರಕ್ಕೆ ಸುಳ್ಳು ವರದಿ ನೀಡಿದೆ. ಪರಮಶಿವಯ್ಯ ವರದಿ ಅವೈಜ್ಞಾನಿಕವಾಗಿದ್ದು, ನೇತ್ರಾವತಿಯನ್ನು ಬರಿದು ಮಾಡುವ ಎಲ್ಲಾ ಲಕ್ಷಣಗಳು ಈ ಯೋಜನೆಯಲ್ಲಿವೆ. ಈ ಯೋಜನೆಯ ಮೂಲಕ ನೇತ್ರಾವತಿ ನದಿ ತಿರುವಿಗೆ ಹುನ್ನಾರ ನಡೆಯುತ್ತಿದೆ. ಇದರ ಅನುಷ್ಠಾನಕ್ಕೆ ಮುಂದಾಗಿರುವ ರಾಜಕಾರಣಿಗಳಿಂದಾಗಿ ಸಮೃದ್ಧ ಜಲವಿದ್ದ ನೇತ್ರಾವತಿಯಲ್ಲಿ ಕಣ್ಣೀರು ಹಾಕುವಂತಾಗಿದೆ. ಇದನ್ನು ಅನುಷ್ಠಾನಗೊಳಿಸಲು ಮುಂದಾಗಿರುವವರು ನಮ್ಮ 10 ಪ್ರಶ್ನೆಗಳಿಗೆ ಉತ್ತರಿಸಲಿ. -ದಿನೇಶ್ ಹೊಳ್ಳ, ಸಹ್ಯಾದ್ರಿ ಸಂಚಲನಾ ಸಮಿತಿ ಸಂಚಾಲಕ
ಪ್ರಕೃತಿ- ಮಾನವ ಸಂಬಂಧ ನಾಶವಾದರೆ ಜಗತ್ತು ನಾಶ
ಪ್ರಕೃತಿ ಮತ್ತು ಮಾನವನ ಸಂಬಂಧಗಳು ನಾಶವಾದಲ್ಲಿ ಜಗತ್ತು ನಡೆಯಲು ಸಾಧ್ಯವಿಲ್ಲ. ಆಡಳಿತ ವರ್ಗದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂತಹ ಯೋಜನೆಗಳು ಜಿಲ್ಲೆಯಲ್ಲಿ ಜಾರಿಯಾಗುತ್ತಿವೆ. ನಾವೀಗ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದ್ದೇವೆ, ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಸಾಧ್ಯವಿದೆ. ಸರಕಾರ ಸಮುದ್ರದ ನೀರನ್ನು ಸ್ವಚ್ಛಗೊಳಿಸಿ ಬಳಸುವ ಬಗ್ಗೆ ಚಿಂತನೆ ನಡೆಸಬೇಕು. -ಎಸ್.ಬಿ.ಮುಹಮ್ಮದ್ ದಾರಿಮಿ, ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್
ಕರಾವಳಿಯ ನೀರು ಮುಗಿಸುವ ಹುನ್ನಾರ
ಎತ್ತಿನಹೊಳೆ ಯೋಜನೆಯ ಮೂಲಕ ಕರಾ ವಳಿಯ ನೀರು ಮುಗಿಸುವ ಹುನ್ನಾರ ನಡೆ ಯುತ್ತಿವೆ. ನದಿ ಬರಿದಾದಲ್ಲಿ ಜಿಲ್ಲೆಯ ಗತಿ ಯೇನು? ಜಿಲ್ಲೆಯ ಜನತೆಗೆ ಇಚ್ಛಾಶಕ್ತಿಯ ಕೊರತೆಯಿಲ್ಲ ಎಂದು ಇಂದಿನ ಧರಣಿಗೆ ಸೇರಿದ ಜನಸಾಗರ ತೋರಿಸಿಕೊಟ್ಟಿದೆ. ಇದು ಕೊನೆಯಲ್ಲ, ಆರಂಭ. -ಗುರು ದೇವಾನಂದ ಸ್ವಾಮೀಜಿ, ಒಡಿಯೂರು ಕ್ಷೇತ್ರ.