ಪುತ್ತೂರು, ಸೆ.14: ಹದಿಹರೆಯದ ಶಾಲಾಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಂಬಾರು ಗ್ರಾಮದ ಪೊರ್ದೇಲು ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.
ಪೊರ್ದೇಲು ನಿವಾಸಿ, ರೈಲ್ವೆ ಉದ್ಯೋಗಿ ಶೇಖರ ಗೌಡರ ಪುತ್ರ ದೀಪಕ್ (15) ಮೃತ ಬಾಲಕನಾಗಿದ್ದು, ನೆಟ್ಟಣದ ಮೌಂಟ್ ಸಿಯೋನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದ.
ಶೇಖರ ಗೌಡ ಕರ್ತವ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಅವರ ಪತ್ನಿ ಮತ್ತು ಪುತ್ರಿ ನಿನ್ನೆ ಕಡಬದಲ್ಲಿ ಮೊಸರು ಕುಡಿಕೆ ಉತ್ಸವ ವೀಕ್ಷಿಸಲು ತೆರಳಿದ್ದರು. ಹೀಗಾಗಿ ದೀಪಕ್ ಮನೆಯಲ್ಲಿ ಒಬ್ಬನೇ ಇದ್ದ. ತಾಯಿ ಮತ್ತು ತಂಗಿ ಸಂಜೆ ವಾಪಸ್ ಬಂದಾಗ ದೀಪಕ್ ಮಾಡಿನ ಮರದ ತೊಲೆಗೆ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಾಲಕನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.