ಮಂಗಳೂರು, ಸೆ.10: ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ನಲ್ಲಿ ಮೊನ್ನೆ ಮುಸ್ಲಿಂ ಯುವತಿಯ ಜೊತೆ ಸುತ್ತಾಡುತ್ತಿದ್ದ ಆರೋಪದಲ್ಲಿ ಕೇರಳ ಮೂಲದ ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳ ಪೈಕಿ ಓರ್ವನನ್ನು ಬಂದರು ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಸಿಟಿ ಸೆಂಟರ್ ಮಾಲ್ ನಲ್ಲಿ ಮಸಾಜ್ ಚೇರ್ ನಡೆಸುತ್ತಿರುವ ಮಹಮ್ಮದ್ ಹಾರಿಸ್ ಯಾನೆ ಮನ್ಸೂರ್ (35) ಬಂಧಿತ ಆರೋಪಿಯಾಗಿದ್ದಾನೆ.
ಕೇರಳ ಮೂಲದ ಅರ್ಜುನ್ ಎಂಬ ಯುವಕ ತನ್ನದೇ ಸಮುದಾಯದ ಯುವತಿ ಹಾಗೂ ಮುಸ್ಲಿಂ ಯುವತಿಯೊಂದಿಗೆ ಮಂಗಳವಾರ ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದು, ಈ ಮೂವರು ಕಾಸರಗೋಡಿನ ಒಂದೇ ಕಾಲೇಜಿನಲ್ಲಿ ಸಹಪಾಠಿಗಳೆನ್ನಲಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯನ್ನು ಕಂಡ ಮುಸ್ಲಿಂ ಯುವಕರ ಐವರ ತಂಡ ಯುವಕನನ್ನು ತರಾಟೆಗೆತ್ತಿಕೊಂಡು ಹಲ್ಲೆಗೆ ಮುಂದಾಗಿತ್ತು.
ಸಕಾಲಕ್ಕೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕ, ಯುವತಿಯನ್ನು ಕರೆದೊಯ್ದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದರು. ಮಾಲ್ ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ, ಮೊಬೈಲ್ ವಿಡಿಯೋ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪೈಕಿ ಮಹಮ್ಮದ್ ಹಾರಿಸ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇತರ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.