ಮಂಗಳೂರು, ಸೆ.4: ‘‘ನಮ್ಮಮ್ಮ ನೇತ್ರಾವತಿ ಐಸಿಯುನಲ್ಲಿದ್ದಾಳೆ. ಎತ್ತಿನಹೊಳೆ ಯೋಜನೆಯ ಮೂಲಕ ನೇತ್ರಾವತಿ ನದಿಗೆ ಕನ್ನ ಹಾಕಲಾಗುತ್ತಿದೆ. ಈಗಲೇ ಎಚ್ಚೆತ್ತುಕೊಂಡು ನಮ್ಮಮ್ಮನನ್ನು ನಾವು ರಕ್ಷಿಸಬೇಕಾಗಿದೆ. ಇಲ್ಲವಾದರೆ ಮುಂದಿನ ದಿನ ಗಳಲ್ಲಿ ನಾವು ಪಶ್ಚಾತ್ತಾಪಡಬೇಕಾದೀತು.’’ಇದು ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟಕ್ಕಿಳಿದಿರುವವರು ಜಿಲ್ಲೆಯ ಜನರಿಗೆ ನೀಡುತ್ತಿರುವ ಜಾಗೃತಿಯ ನುಡಿಗಳು.
ಗುರುವಾರ ಸಹ್ಯಾದ್ರಿ ಸಂಚಯದ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾದ ವಿನೂತನ ಧರಣಿ ಕಾರ್ಯಕ್ರಮದಲ್ಲಿ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ನದಿಗೆ ಬಂದೊದಗಿರುವ ಅಪಾಯವನ್ನು ಈ ರೀತಿ ಸೂಚ್ಯವಾಗಿ ಜನತೆಯ ಮುಂದಿಟ್ಟರು. ‘ಎತ್ತಿನಹೊಳೆ ಯೋಜನೆ ಬಗ್ಗೆ ಉತ್ತರ ಕೊಡಿ’ ಎಂದು ಸಂಚಯದಿಂದ ಇಂದು ಜನಪ್ರತಿನಿಧಿಗಳ ಮುಂದೆ 10 ಪ್ರಶ್ನೆಗಳ ಕರಪತ್ರವನ್ನು ಹಂಚುವ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಧರಣಿ ಹೊಸ ಸ್ವರೂಪವನ್ನು ಪಡೆದಕೊಂಡಿದೆ.
*ಭಾರತ ಸರಕಾರದ ಅಧೀನ ಸಂಸ್ಥೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ (ಐಐಎಸ್)ಪ್ರಕಾರ ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ ಲಭ್ಯವಾಗುವ ನೀರು ಕೇವಲ 9.55 ಟಿಎಂಸಿ. ಪೂರ್ವಕ್ಕೆ ಕೊಂಡೊಯ್ಯಲು ಲಭ್ಯವಿರುವ ನೀರು ಕೇವಲ 1.25 ಟಿಎಂಸಿ. ಆದರೆ 24 ಟಿಎಂಸಿ ನೀರನ್ನು ಪೂರ್ವಕ್ಕೆ ಕೊಂಡೊಯ್ಯುವ ಕಾಮಗಾರಿ ಮಾಡಲಾಗುತ್ತದೆ. ಉಳಿದ ನೀರನ್ನು ಎಲ್ಲಿಂದ ಕೊಂಡೊಯ್ಯುತ್ತೀರಿ ಕುಮಾರಧಾರಾದಿಂದಲೋ? ನೇತ್ರಾವತಿಯಿಂದಲೋ? * 2013ರಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಪ್ರಕಾರ ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ 24 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಸ್ಥಳೀಯ ಕೃಷಿ ಅಥವಾ ಜನರ ಉಪಯೋಗಕ್ಕಾಗಲಿ ಉಳಿಸದೆ ಎಲ್ಲಾ ನೀರನ್ನು ಕೊಂಡೊಯ್ಯಲಾಗುವುದು. ನದಿ ಮೂಲ ಪೂರ್ತಿ ಬತ್ತಿಸಲಾಗುವುದು. ಆದರೆ ಐಐಎಸ್ ಪ್ರಕಾರ 9.55 ಟಿಎಂಸಿ ನೀರು ಸಂಗ್ರಹವಾಗಿ, ಪೂರ್ವಕ್ಕೆ ಕೊಂಡೊಯ್ಯಲು ಕೇವಲ 0.85 ಟಿಎಂಸಿ ನೀರು ಮಾತ್ರ ಲಭ್ಯ. ಇದರಲ್ಲಿ ಯಾವುದು ಸತ್ಯ ಎಂದು ತನಿಖೆ ಮಾಡಿ ಮುಂದುವರಿಸಬೇಕಾದುದು ಜನಪ್ರತಿನಿಧಿಗಳ ಕರ್ತವ್ಯವಲ್ಲವೇ? ಮೊದಲಾದ 10 ಪ್ರಶ್ನೆಗಳನ್ನು ಕರಪತ್ರದಲ್ಲಿ ಜನಪ್ರತಿನಿಧಿಗಳನ್ನು ಪ್ರಶ್ನಿಸಲಾಗಿದೆ.
ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಜಿಪಂ ಚುನಾವಣೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಸಮರ್ಥಿಸುವ ಪಕ್ಷಗಳ ವಿರುದ್ಧ ಮತ ಆಂದೋಲನ ನಡೆಯಲಿದೆ ಎಂದು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಪರಿಸರವಾದಿ ಕಟೀಲು ದಿನೇಶ್ ಪೈ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕನ್ನಡಕಟ್ಟೆಯ ಡಾ.ಅಣ್ಣಯ್ಯ ಕುಲಾಲ್, ಮೀನುಗಾರ ಮುಖಂಡ ರಾಮಚಂದರ್ ಬೈಕಂಪಾಡಿ, ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಜಪ್ಪಿನಮೊಗರು, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮೊದಲಾದವರು ಮಾತನಾಡಿದರು.
ಸೆ.19ರಂದು ರೋಶನಿ ನಿಲಯದಲ್ಲಿ ಬಹಿರಂಗ ಸಭೆ
ಜಾಗೃತಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಸಂಚಯ ಸಂಚಾಲಕ ದಿನೇಶ್ ಹೊಳ, ‘‘ಸೆ.14ರವರೆಗೆ ಜಿಲ್ಲೆಯ ವಿವಿಧ ಕಡೆಗಳಿಗೆ ಅಭಿಯಾನ ತೆರಳಲಿದೆ. ಸುಮಾರು 30,000 ಕರಪತ್ರಗಳನ್ನು ಮುದ್ರಿಸಲಾಗಿದ್ದು, ಅವುಗಳನ್ನು ಸಾರ್ವಜನಿಕರಿಗೆ ವಿತರಿಸಿ ಎತ್ತಿನಹೊಳೆ ಯೋಜನೆಯ ವಿರುದ್ಧ ಜನಪ್ರತಿನಿಧಿಗಳನ್ನು ಪ್ರಶ್ನಿಸಲು ಪ್ರೇರೇಪಿ ಸಲಾಗುವುದು. ಜನಪ್ರತಿನಿಧಿಗಳು ನಿಗದಿತ ಅವಧಿಯೊಳಗೆ ಸಮರ್ಪಕ ಉತ್ತರ ನೀಡಿದ್ದಲ್ಲಿ ನಾವು ಹೋರಾಟವನ್ನು ಹಿಂಪಡೆಯಲಿದ್ದೇವೆ. ಇಲ್ಲವಾದಲ್ಲಿ ಜನಪ್ರತಿನಿಧಿಗಳು ಯೋಜನೆಯನ್ನು ನಿಲ್ಲಿಸಬೇಕು ಎಂಬುದು ನಮ್ಮ ನಿಲುವು. ಸೆ. 19ರಂದು ರೋಶನಿ ನಿಲಯ ಕಾಲೇಜಿನಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿದ್ದು, ಜನಪ್ರತಿನಿಧಿಗಳು ಉತ್ತರ ನೀಡಬೇಕು’’ ಎಂದು ಹೇಳಿದರು.
ಜಾತಿ, ಧರ್ಮದ ವಿಷಯದಲ್ಲಿ ಕಚ್ಚಾಡುವ, ಅನೈತಿಕ ಗೂಂಡಾಗಿರಿಯಲ್ಲಿ ತೊಡಗುವ, ಪ್ರತಿಭಟನೆ ನಡೆಸುವ ನಾವು ನಮ್ಮ ಉಳಿವು, ನೀರಿನ ಪ್ರಶ್ನೆ ಬಂದಾಗ ವೌನವಾಗುತ್ತೇವೆ. ನಮ್ಮ ಪಶ್ಚಿಮಘಟ್ಟ, ನೇತ್ರಾವತಿ, ಕುಮಾರಧಾರಾವನ್ನು ಉಳಿಸುವ ನಿಟ್ಟಿನಲ್ಲಿ ನಾವಿಂದು ಒಗ್ಗಟ್ಟಾಗಬೇಕಿದೆ ಎಂದು ದಿನೇಶ್ ಹೊಳ್ಳ ಕರೆ ನೀಡಿದರು.
ನೇತ್ರಾವತಿ ಪ್ರೇಮ : ಪ್ರತಿಭಟನೆಯಲ್ಲಿ ಪಾಲ್ಗೊಡ ಸಕಲೇಶಪುರ ನಿವಾಸಿ
ನಗರದ ರೋಶನಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡಿ ಇದೀಗ ನಗರದ ಖಾಸಗಿ ಕಂಪೆನಿ ಯಲ್ಲಿ ಉದ್ಯೋಗದಲ್ಲಿರುವ ಸಕಲೇಶಪುರ ನಿವಾಸಿ ಅವಿನಂದ್ ತನ್ನ ಸಾಕುಕುದುರೆ ವೀರ ಜತೆ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
‘‘ನನ್ನ ಹುಟ್ಟೂರಾದ ಸಕಲೇಶಪುರದಲ್ಲಿ ಯೋಜನೆ ನಡೆಯುತ್ತಿದ್ದರೂ ಅದರಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗುವವರು ದ.ಕ. ಜಿಲ್ಲೆಯ ಜನತೆ ಎಂಬುದನ್ನು ಮನಗಂಡಿದ್ದೇನೆ. ನೇತ್ರಾವತಿ ಉಳಿಸುವ ಹೋರಾಟದಲ್ಲಿ ನಾನು ಭಾಗವಹಿಸುತ್ತಿದ್ದು, ಕರಪತ್ರಗಳನ್ನು ಹಂಚುವುದು ಹಾಗೂ ವಿದ್ಯಾರ್ಥಿಗಳ ಪ್ರತಿಭ ಟನೆಯಲ್ಲೂ ಪಾಲ್ಗೊಳ್ಳಲಿದ್ದೇನೆ’’ ಎಂದರು.
ತುಳುನಾಡ ರಕ್ಷಣಾ ವೇದಿಕೆಯಿಂದ ಪಾದಯಾತ್ರೆ
ಎತ್ತಿನಹೊಳೆ ಯೋಜನೆ ಯನ್ನು ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆಯಿಂದ ನೇತ್ರಾವತಿ ನದಿ ಉಳಿಸಿ ಅಭಿಯಾ ನವಾಗಿ ಗುರುವಾರ ಮಂಗಳೂರಿನಲ್ಲಿ ನೇತ್ರಾವತಿ ಉಳಿಸಿ ಜನಜಾಗೃತಿ ಪಾದಯಾತ್ರೆ ನಡೆಯಿತು.
ನಗರದ ಕಾರ್ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಪಾದಯಾತ್ರೆಯನ್ನು ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ಉದ್ಘಾಟಿಸಿದರು. ಪಾದಯಾತ್ರೆಯು ಕಾರ್ಸ್ಟ್ರೀಟ್ನಿಂದ ಆರಂಭವಾಗಿ ಬಂದರು, ಬೀಬಿ ಅಲಾಬಿ ರಸ್ತೆ, ಸೆಂಟ್ರಲ್ ಮಾರುಕಟ್ಟೆ, ರಾವ್ ಆ್ಯಂಡ್ ರಾವ್ ಸರ್ಕಲ್, ಜ್ಯೋತಿ ಸರ್ಕಲ್, ಬಂಟ್ಸ್ ಹಾಸ್ಟೆಲ್, ಶರವು ದೇವಸ್ಥಾನ ಮೂಲಕ ಸಾಗಿ ಜೆಪ್ಪು ಜಂಕ್ಷನ್ನಲ್ಲಿ ಸಮಾಪನಗೊಂಡಿತು.
ಪಾದಯಾತ್ರೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಮುಖಂಡರಾದ ಯೋಗೀಶ್ ಶೆಟ್ಟಿ ಜಪ್ಪು, ಡಾ.ಕೆ.ಎ.ಮುನೀರ್ ಬಾವ, ಎಂ.ಜಿ.ಹೆಗ್ಡೆ, ಹಮೀದ್ ಹಸನ್ ಮಾಡೂರು, ರಾಘವೇಂದ್ರ ರಾವ್ ಮೊದಲಾದವರು ಪಾಲ್ಗೊಂಡಿದ್ದರು.
ವರದಿ ಕೃಪೆ : ವಾಭಾ