_ಸತೀಶ್ ಕಾಪಿಕಾಡ್
ಮಂಗಳೂರು, ಸೆ.2: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ದ.ಕ.ಜಿಲ್ಲೆಯಲ್ಲಿ ಭಾಗಶ: ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರಾವಳಿಯಲ್ಲಿ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ದೇಶದ ಕಾರ್ಮಿಕರ ಸುಮಾರು 12 ಮೂಲಭೂತ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಿಲ ಭಾರತೀಯ ಮಟ್ಟದಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ.
ಮುಷ್ಕರಕ್ಕೆ ಅಖೀಲ ಭಾರತ ಸಾರಿಗೆ ನೌಕರರ ಸಂಘಟನೆಯೂ ಕೈ ಜೋಡಿಸಿರುವುದರಿಂದ ಖಾಸಗಿ ಸರ್ವಿಸ್, ಎಕ್ಸ್ಪ್ರೆಸ್ ಹಾಗೂ ಸಿಟಿ ಬಸ್ ನೌಕರರು ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಯಾವೂದೇ ಬಸ್ ಗಳು ಇಂದು ರಸ್ತೆಗಿಳಿಯಲಿಲ್ಲ. ಜೊತೆಗೆ ಅಖೀಲ ಭಾರತ ಕೈಗಾರಿಕಾ ಮುಷ್ಕರದಲ್ಲಿ ರಸ್ತೆ ಸಾರಿಗೆ ನಿಗಮಗಳ ಎಲ್ಲ ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕೆಂದು ಎಐಟಿಯುಸಿಗೆ ಸಮ್ಮಿಳಿತಗೊಂಡ ಕೆಎಸ್ಆರ್ಟಿಸಿ ಸಿಬಂದಿ ಹಾಗೂ ಕಾರ್ಮಿಕರ ಸಂಘಟನೆ ಮಂಗಳೂರು ವಿಭಾಗ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜೊತೆಗೆ ಕೆಎಸ್ಆರ್ಟಿಸಿ ಸಿಬಂದಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಸರ್ವಿಸ್, ಎಕ್ಸ್ಪ್ರೆಸ್ ಹಾಗೂ ಸಿಟಿ ಬಸ್ ಗಳ ಜೊತೆಗೆ ಕೆಎಸ್ಆರ್ಟಿಸಿ ಬಸ್ಸ್ಗಳು ರಸ್ತೆಗಿಳಿಯದೇ ಇರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತ್ತು.
ಈಗಾಗಲೇ ಜಿಲ್ಲೆಯ ಎಲ್ಲಾ ಸರಕಾರಿ ಶಾಲಾ, ಕಾಲೇಜುಗಳಿಗೆ ಹಾಗೂ ಅನುದಾನಿತ ಶಾಲೆಗಳಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ರಜೆ ಘೋಷಣೆ ಮಾಡಿರುವುದರಿಂದ ವಿದ್ಯಾರ್ಥಿಗಳ ಸಂಕಷ್ಟ ದೂರವಾಗಿದೆ. ನಗರದ ಕೆಲೆವೆಡೆಗಳಲ್ಲಿ ಆಟೋ ರಿಕ್ಷಾಗಳು ಎಂದಿನಂತೆ ಸಂಚಾರಿಸುತ್ತಿವೆ. ಅಗತ್ಯ ಸೇವೆಗಳಾದ ಹಾಲು, ಪೇಪರ್, ಮೆಡಿಕಲ್ ಶಾಪ್, ಮುಂತಾದವುಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ. ಚಿತ್ರ ಮಂದಿರಗಳು ಎಂದಿನಂತೆ ಕಾರ್ಯನಿರ್ವಾಹಿಸುತ್ತಿವೆ.
ಸಾರಿಗೆಯೊಂದಿಗೆ ಬ್ಯಾಂಕ್, ವಿಮೆ, ಅಂಚೆ, ಕೈಗಾರಿಕ ವಲಯಗಳೂ ಬಂದ್ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಸಾರ್ವಜನಿಕ ವಲಯದಲ್ಲಿ ಬಾರೀ ವ್ಯತ್ಯಯ ಉಂಟಾಗಿದೆ. ಹಲವೆಡೆಗಳಲ್ಲಿ ಅಂಗಡಿ – ಮುಂಗಟ್ಟುಗಳು, ಹೋಟೆಲುಗಳು ಬಾಗಿಲು ತೆರೆದು ಎಂದಿನಂತೆ ವ್ಯಾಪಾರ – ವ್ಯವಹಾರದಲ್ಲಿ ತೊಡಗಿದ್ದಾರೆ.
ಪಡೀಲ್ನಲ್ಲಿ ಮೂರು ಬಸ್ಸ್ಗಳಿಗೆ ಕಲ್ಲು ತೂರಾಟ : ಚಾಲಕನಿಗೆ ಗಾಯ
ನಗರದ ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಿಸುತ್ತಿದ್ದ ಮೂರು ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದಾರೆ. ಶಂಬೂರ್ನಿಂದ ಮಂಗಳೂರಿಗೆ ಬರುತ್ತಿದ್ದ ಬಸ್, ಮಡ್ಯಾಂತಾರ್ನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಹಾಗೂ ಮಂಗಳೂರು – ಮೈಸೂರ್ ನಡುವೆ ಸಂಚಾರಿಸುತ್ತಿದ್ದ ಮೂರು ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಇಂದು ಮುಂಜಾನೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಂಬೂರ್ನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ನ ಚಾಲಕ ಜಿ.ಎಸ್.ವಾಮಪತಿ ಎಂಬವರಿಗೆ ಕಲ್ಲು ತಗೂಲಿ ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಡಿರುವ ಅವರನ್ನು ನಗರದ ಅಸ್ಪತ್ರೆಗೆ ದಾಖಲಿಸಿಲಾಗಿದೆ.
ಬಂಗ್ರಾ ಕೂಳೂರು ಮತ್ತು ಉಳ್ಳಾಲದಲ್ಲಿ ಟಯರ್ಗೆ ಬೆಂಕಿ :
ಮಂಗಳೂರಿನ ಬಂಗ್ರಾ ಕೂಳೂರು ಹಾಗೂ ನಗರದ ಹೊರ ವಲಯದ ಉಳ್ಳಾಲ ಸಮೀಪದ ಕುತ್ತಾರ್ ಬಳಿ ಕಿಡಿಗೇಡಿಗಳು ಟಯರ್ಗಳಿಗೆ ಬೆಂಕಿ ಹಾಕಿ ರಸ್ತೆ ಮಧ್ಯೆ ಇಟ್ಟು ವಾಹನ ಸಂಚಾರಕ್ಕೆ ಆಡಚಣೆಯುಂಟು ಮಾಡಿದರು.
ಬಿಗಿ ಪೊಲೀಸ್ ಬಂದೋಬಸ್ತ್ :
ಬಂದ್ ಹಿನ್ನೆಲೆಯಲ್ಲಿ ಜಿಲೆಯಾದ್ಯಂತ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮುಷ್ಕರದಲ್ಲಿ ಭಾಗವಹಿಸದ ಬಿಎಮ್ಎಸ್ ಸಂಘಟನೆ :
ಮಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಇಂದಿನ ಮುಷ್ಕರದಿಂದ ಭಾರತೀಯ ಮಜ್ದೂರ್ ಸಂಘ ಹಿಂದೆ ಸರಿದಿದೆ. ಇಂದು ನಡೆಯಲಿರುವ ಸಾರ್ವತ್ರಿಕ ಮುಷ್ಕರದಲ್ಲಿ ನಮ್ಮ ಸಂಘಟನೆಯು ಪಾಲ್ಗೊಳ್ಳುವುದಿಲ್ಲ ಎಂದು ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ಅವರು ಎರಡು ದಿನಗಳ ಹಿಂದೆಯೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರಕಾರವು ಸಾಕಷ್ಟು ಬೇಡಿಕೆಗಳನ್ನು ಈಡೇರಿಸಲು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ನಿಲುವು ತಳೆದಿದೆ. ಉಳಿದ ವಿಚಾರ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸಹಮತ ವ್ಯಕ್ತಪಡಿಸಿದ್ದು, ಕಾಲಾವಕಾಶದ ಅಗತ್ಯವಿರುವ ಬಗ್ಗೆ ತಿಳಿಸಿದೆ. ಕೇಂದ್ರ ಸರಕಾರವು ಕಾರ್ಮಿಕ ಸಂಘಟನೆಗಳಿಗೆ ಒಪ್ಪಿಗೆ ನೀಡಿದರೂ, ಅವು ಈಗ ಅಸ್ತಿತ್ವದಲ್ಲಿರುವ ಕಾನೂನಿನೊಳಗೆ ತಿದ್ದುಪಡಿಯಾಗಿ ಒಪ್ಪಿಗೆ ಪಡೆಯುವ ಪ್ರಕ್ರಿಯೆಗೆ ಕಾಲಾವಕಾಶ ಕೊಡಬೇಕಾದುದು ಅನಿವಾರ್ಯ. ಈ ನಿಟ್ಟಿನಲ್ಲಿ ಮುಷ್ಕರದಲ್ಲಿ ಪಾಲ್ಗೊಳ್ಳದಿರಲು ನಿಶ್ಚಯಿಸಿರುವುದಾಗಿ ಅವರು ತಿಳಿಸಿದ್ದರು.