ಕನ್ನಡ ವಾರ್ತೆಗಳು

ವಿವಾಹಿತಾ ಮಹಿಳೆ ಮೇಲೆ ಬ್ಲೇಡ್‍ನಿಂದ ತಿವಿದು ಹಲ್ಲೆ : ಯುವತಿ ಗಂಭೀರಾ – ಆರೋಪಿ ಪರಾರಿ

Pinterest LinkedIn Tumblr

Kulai_attamt_Murder_1

ಸುರತ್ಕಲ್,ಆಗಸ್ಟ್.04: ಬೈಕಾಂಪಾಡಿ- ಸುರತ್ಕಲ್ ಮಧ್ಯೆಯಿರುವ ಕುಲಾಯಿಯಲ್ಲಿರುವ ಮಕ್ರನಾ ಮಾರ್ಬಲ್ಸ್ ಸೆಂಟರ್‌ನ ವಿವಾಹಿತಾ ಮಹಿಳಾ ಉದ್ಯೋಗಿಯ ಮೇಲೆ ಅದೇ ಸಂಸ್ಥೆಯ ಮಾಜಿ ನೌಕರನೊಬ್ಬ ದಾಳಿ ನಡೆಸಿ ಆಕೆಯ ಮುಖವನ್ನು ಹರಿತವಾದ ಬ್ಲೇಡ್‍ನಿಂದ ತಿವಿದು ಘಾಸಿಗೊಳಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ದುಷ್ಕರ್ಮಿಯ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಸೌಮ್ಯಾ (32) ಎಂದು ಗುರುತಿಸಲಾಗಿದೆ. ಕಾಟಿಪಳ್ಳ ಕೈಕಂಬ ನಿವಾಸಿಯಾದ ಈಕೆ ಕುಲಾಯಿ ಸಮೀಪದ ಹೊನ್ನಕಟ್ಟೆಯಲ್ಲಿರುವ ಮಕ್ರನಾ ಮಾರ್ಬಲ್ ಸೆಂಟರ್‌ನ ಉದ್ಯೋಗಿ ಎಂದು ತಿಳಿದು ಬಂದಿದೆ. ಯುವತಿಯನ್ನು ಕೂಡಲೇ ಸುರತ್ಕಲ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Kulai_murder_case_2 Kulai_murder_case_3 Kulai_murder_case_4

ಈಕೆ ಎಂದಿನಂತೆ ಇಂದು ಕೂಡ ಬೆಳಿಗ್ಗೆ ಬಸ್ಸಿನಿಂದ ಇಳಿದು ತನ್ನ ಉದ್ಯೋಗದ ಸ್ಥಳಕ್ಕೆ ಬರುತ್ತಿದ್ದಾಗ, ಆಕೆಯ ಬರುವಿಕೆಗಾಗಿ ಸಂಸ್ಥೆಯ ಬಳಿಯೇ ಹೊಂಚು ಹಾಕಿ ನಿಂತಿದ್ದ ಆರೋಪಿ ಆಕೆ ಕಚೇರಿಯ ಗೇಟ್ ಸಮೀಸುತ್ತಿದ್ದಂತೆ ಅಕೆಯ ಮೇಲೆ ದಾಳಿ ಮಾಡಿ, ಆಕೆಯ ಮುಖ, ತಲೆ,ಕುತ್ತಿಗೆಗೆ ಬ್ಲೇಡ್‍ನಿಂದ ಯದ್ವಾತದ್ವಾ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಸೌಮ್ಯಾ ಮುಖ ಸೀಳಿ ಹೋಗಿದ್ದು ಕುತ್ತಿಗೆ, ತುಟಿ ಮತ್ತು ಕಿವಿಯ ಭಾಗಕ್ಕೂ ಗಂಭೀರ ಗಾಯಗಳಾಗಿವೆ.

ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅಲ್ಲಿ ಸೇರಿದ್ದು, ಇವರಲ್ಲಿ ಕೆಲವರು ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದರಾದರೂ ಈತ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರೇಮ ಅಥವಾ ಇನ್ಯಾವುದಾದರೂ ದ್ವೇಷ ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆಯ ಬಳಿಕವಷ್ಟೇ ಪ್ರಕರಣ ಕುರಿತು ನಿರ್ದಿಷ್ಟ ಕಾರಣ ತಿಳಿದು ಬರಬೇಕಿದೆ.

Write A Comment