ಮಂಗಳೂರು,ಜುಲೈ.28: 2014-15 ನೇ ಸಾಲಿನ ವೈದ್ಯರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ವಿಭಾಗವಾರು ಪ್ರಶಸ್ತಿಗಳಿಗೆ ವೈದ್ಯರುಗಳನ್ನು ಆಯ್ಕೆ ಮಾಡಲಾಗಿದ್ದು, ಬೆಂಗಳೂರು ವಿಭಾಗದಿಂದ ಡಾ. ಜಯಂತಿ, ಸಾರ್ವಜನಿಕ ಆಸ್ಪತ್ರೆ ಚಿಂತಾಮಣಿ, ಮೈಸೂರು ವಿಭಾಗದಿಂದ ಡಾ. ಅರುಣ್ ಕುಮಾರ್, ಡಿವಿಬಿಡಿಸಿಒ, ದ.ಕ. ಮಂಗಳೂರು, ಬೆಳಗಾವಿ ವಿಭಾಗದಿಂದ ಡಾ. ಸಿದ್ದಪ್ಪ, ಡಿಎಲ್ಒ, ಎಫ್ಡಬ್ಯ್ಲೂ (ಪ್ರ), ಗದಗ, ಗುಲ್ಬರ್ಗ ವಿಭಾಗದಿಂದ ಡಾ. ಮನ್ನೆ ನಾಗರಾಜ್, ಪ್ರಾ.ಆ.ಕೇಂದ್ರ ಸೂಳೆಪೇಟೆ, ಚಿಂಚೋಳಿ ತಾಲೂಕು ಗುಲ್ಬರ್ಗ ಇವರುಗಳು ಆಯ್ಕೆಯಾಗಿರುತ್ತಾರೆ.
ಆಯ್ಕೆಯಾದವರಲ್ಲಿ ಮೈಸೂರು ವಿಭಾಗದಿಂದ ಆಯ್ಕೆಯಾದ ಡಾ. ಅರುಣ್ ಕುಮಾರ್ ಇವರು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪುನರ್ವಸತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುವುದರೊಂದಿಗೆ ವಿಭಾಗ ಮಟ್ಟದ ಅತ್ಯುತ್ತಮ ವೈದ್ಯರ ಪ್ರಶಸ್ತಿ ಪಡೆದು ಜಿಲ್ಲೆಗೆ ಗೌರವವನ್ನು ತಂದಿರುತ್ತಾರೆ.
ಸನ್ಯಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇಲಾಖಾ ಕಾರ್ಯದರ್ಶಿಗಳು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಜರುಗಿದ ಸಮಾರಂಭದಲ್ಲಿ ಡಾ. ಅರುಣ್ ಕುಮಾರ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.