ಮಂಗಳೂರು, ಜು.27: ಕಾರ್ಗಿಲ್ ವಿಜಯ ದಿನವಾದ ರವಿವಾರ ನಗರದ ಬಾವುಟ ಗುಡ್ಡೆಯ ಬಳಿ ನಿರ್ಮಿಸಲಾದ ಸೈನಿಕ ಭವನವನ್ನು ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶ ರಕ್ಷಣೆಗಾಗಿ ತಮ್ಮ ವೈಯಕ್ತಿಕ ಸುಖ ಶಾಂತಿಯನ್ನು ತ್ಯಾಗ ಮಾಡುತ್ತಿರುವ ಯೋಧರಿಗೆ ನೈತಿಕ ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ಕಾರ್ಗಿಲ್ ಯುದ್ಧದ ಗೆಲುವು ದೇಶದ ನೈತಿಕ ಜಯವಾಗಿದೆ. ಕಾರ್ಗಿಲ್ನ ಸಂದರ್ಭದಲ್ಲಿ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಪ್ರಾಣವನ್ನು ಪಣವಾಗಿಟ್ಟು ಹೋರಾಟ ನಡೆಸಿದ್ದಾರೆ. ದೇಶದ ಘನತೆ ಗೌರವವನ್ನು ಉಳಿಸಿದ್ದಾರೆ. ಇಂದಿಗೂ ದೇಶದ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೈನಿಕರು ದೇಶಕ್ಕಾಗಿ ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಕಷ್ಟಗಳನ್ನು ಸಹಿಸಿಕೊಂಡು ದೇಶದ ಗಡಿಯನ್ನು ಕಾಯುತ್ತಿದ್ದಾರೆ. ನಮ್ಮ ರಕ್ಷಣೆ ಮಾಡುತ್ತಿದ್ದಾರೆ. ಇಂತಹ ಸೈನಿಕರಿಗೆ ಕಾರ್ಗಿಲ್ ವಿಜಯ ದಿವಸದಂದು ಅಭಿಮಾನದಿಂದ ಗೌರವ ಸಲ್ಲಿಸುವುದು ನಮ್ಮ ನೈತಿಕ ಹೊಣೆಗಾರಿಕೆಯಾಗಿದೆ ಎಂದು ಡಾ.ಹೆಗ್ಗಡೆ ನುಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಎನ್ನೆಸ್ಸೆಸ್ ಹಾಗೂ ಎನ್ಸಿಸಿ ತರಬೇತಿಯನ್ನು ಕಡ್ಡಾಯ ಗೊಳಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಮೂಡಿಸುವ ಕೆಲಸ ಆರಂಭ ಗೊಂಡಿತ್ತು. ಈ ನಿಟ್ಟಿನಲ್ಲಿ ಇನ್ನಷ್ಟು ಜಾಗೃತಿ ಇಂದಿನ ಯುವ ಜನರಲ್ಲಿ ಮೂಡಿಸಬೇಕಾಗಿದೆ ಸೈನಿಕ ರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ದೇಶವನ್ನು ಕಾಯುವ ಯೋಧರಿಗೆ ತಲುಪಿಸಬೇಕಾಗಿದೆ ಎಂದು ಅವರು ತಿಳಿಸಿದರು.
ನಿಟ್ಟೆ ವಿವಿ ಕುಲಾಧಿಪತಿ ವಿನಯ ಹೆಗ್ಡೆ ಮಾತನಾಡಿ, ಕಾರ್ಗಿಲ್ ಯುದ್ಧ ದಲ್ಲಿ ಸಂತ್ರಸ್ತರಾದವರ ಕುಟುಂಬಗಳು ಸಾಕಷ್ಟು ನೋವು ಸಂಕಟಗಳನ್ನು ಅನುಭವಿಸುತ್ತಿವೆ. ಅವರಿಗೆ ನೆರವು ನೀಡಲು ದೇಶದಲ್ಲಿ ಒಂದು ಶಾಶ್ವತ ನಿಧಿಯನ್ನು ರಚಿಸಬೇಕಾದ ಅಗತ್ಯ ವಿದೆ. ಸಂತ್ರಸ್ತರಿಗೆ ನೈತಿಕ ಬೆಂಬಲ ನೀಡಬೇಕಾಗಿದೆ. ಇದಕ್ಕಾಗಿ ಸಂಘ ಟನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಮಾಜಿ ಸೈನಿಕರೇ ಯೋಚಿಸಿ ಸೈನಿಕ ಭವನ ನಿರ್ಮಿಸಿರುವುದು ಮಹ ತ್ವದ ಸಾಧನೆಯಾಗಿದೆ. ಈ ಸಾಹಸಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ ಎಂದು ಶ್ಲಾಘಿಸಿದರು.
ದಕ್ಷಿಣ ಕನ್ನಡ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕರ್ನಲ್ ಎನ್.ಶರತ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್, ಜಿಪಂ ಸಿಇಒ ಶ್ರೀವಿದ್ಯಾ, ಬಡಗ ಮಿಜಾರು ಶ್ರೀಶಾಸ್ತಾವು ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಮಾಜಿ ಸೈನಿಕರಾದ ಬ್ರಿಗೇಡಿಯರ್ ಐ.ಎನ್.ರೈ, ಲೆಫ್ಟಿನೆಂಟ್ ಕರ್ನಲ್ ಎನ್.ಪಿ.ರೈ, ವಿಕ್ರಮ್ ದತ್, ಕರ್ನಲ್ ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಸೈನಿಕ ಭವನದ ಉದ್ಘಾಟನೆಯ ಮೊದಲು ಕಾರ್ಗಿಲ್ ವಿಜಯ ದಿನದ ನೆನೆಪಿಗಾಗಿ ನಗರದ ಕದ್ರಿ ಹಿಲ್ಸ್ ನಿರ್ಮಿಸಲಾಗಿರುವ ಯುದ್ಧ ಸ್ಮಾರಕಕ್ಕೆ ಹೂಹಾರ ಅರ್ಪಿಸುವ ಮೂಲಕ ಗಣ್ಯರಿಂದ ಮಾಜಿ ಸೈನಿಕರಿಂದ ಹಾಗೂ ಸಾರ್ವಜನಿಕರಿಂದ,ಲಯನ್ಸ್ ಸಂಸ್ಥೆಯ ಅಧಿಕಾರಿಗಳಿಂದ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ನಮನ ಕಾರ್ಯಕ್ರಮ ನಡೆಯಿತು.