ಕುಂದಾಪುರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳ ಬಳಿ ಬಂದ ಬಸ್ಸು ನಿರ್ವಾಹಕ (ಕಂಡಕ್ಟರ್) ಕಿಟಕಿ ಗಾಜು ಸರಿಸುವ ನೆಪದಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಬಸ್ಸು ಅಡ್ಡಗಟ್ಟಿ ಕಂಡಕ್ಟರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ಕೋಟೇಶ್ವರ ಬಸ್ಸು ನಿಲ್ದಾಣದಲ್ಲಿ ನಡೆದಿದೆ.
ಕೊಕ್ಕರ್ಣೆ ನಿವಾಸಿ ಬಾಬಣ್ಣ (28) ಎಂಬಾತನೇ ಸಾರ್ವಜನಿಕರಿಂದ ಥಳಿಸಿಕೊಂಡ ಕಂಡಕ್ಟರ್.
ಘಟನೆ ವಿವರ: ಕುಂದಾಪುರ-ಕೊಕ್ಕರ್ಣೆ ಶ್ರೀ ಲಕ್ಷ್ಮೀ ಬಸ್ಸಿನಲ್ಲಿ ಕುಂದಾಪುರದಿಂದ ತನ್ನ ಮನೆಯತ್ತ ಮಧ್ಯಾಹ್ನದ ಸುಮಾರಿಗೆ ಯುವತಿಯೋರ್ವಳು ಸಂಚರಿಸುತ್ತಿದ್ದ ವೇಳೆ ಆ ಬಸ್ಸಿನ ನಿರ್ವಾಹಕ ಮಳೆಯ ಕಾರಣ ಕಿಟಕಿಯ ಗಾಜು ಸರಿಸುವ ನೆಪದಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಆಕೆ ಮನೆಗೆ ತೆರಳಿ ಆಕೆಯ ಸಹೋದರನಿಗೆ ಮಾಹಿತಿ ನೀಡಿದ್ದಾರೆ. ಅಷ್ಟೋತ್ತಿಗಾಗಲೇ ಬಸ್ಸು ತೆರಳಿದ್ದು ಬಸ್ಸಿನ ಮಾಹಿತಿ ಪಡೆದು ಕಾದಿದ್ದ ಸಾರ್ವಜನಿಕರು ಪುನಃ ಬಸ್ಸು ಕುಂದಾಪುರದಿಂದ ಕೊಕ್ಕರ್ಣೆಗೆ ತೆರಳುವ ವೇಳೆ ಕೋಟೇಶ್ವರದಲ್ಲಿ ಬಸ್ಸು ಅಡ್ಡಗಟ್ಟಿ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡು ಆತನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಈ ಸಂದರ್ಭ ಕೋಟೇಶ್ವರ ಒಳಪೇಟೆಯಲ್ಲಿ ಸಂಚಾರವೂ ಅಸ್ಥವ್ಯಸ್ಥಗೊಂಡು ಗೊಂದಲಮಯ ಸ್ಥಿತಿ ನಿರ್ಮಾಣಗೊಂಡಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಕುಂದಾಪುರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಬಸ್ಸು ಕಂಡಕ್ಟರನನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಕುಂದಾಪುರ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದಾರೆ.