ಮಂಗಳೂರು, ಜು.24 : ರಾಜ್ಯದ ವಿವಿಧ ಅಕಾಡಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದ ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಶುಕ್ರವಾರ ನಡೆದ ಸಂಗಮ ಸಂಭ್ರಮದಲ್ಲಿ ತುಳು, ಬ್ಯಾರಿ, ಕೊಂಕಣಿ ಭಾಷೆಗಳ ಕಲರವ ಕೇಳಿ ಬಂತು. ತ್ರಿ ಭಾಷೆಗಳ ನೂರಾರು ಕಲಾವಿದರು ಎಸ್. ಯು. ಪಣಿಯಾಡಿ ವೇದಿಕೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನರಂಜಿಸಿದರು. ಕಿರಿಯರಿಂದ ಹಿಡಿದು ಹಿರಿಯರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ “ತುಳು ಐಸಿರಿ” ಕಾರ್ಯಕ್ರಮವನ್ನು ಮೈಮ್ ರಾಮದಾಸ್ ಮತ್ತು ತಂಡ ತುಳು ಹಾಡುಗಳನ್ನು ಹಾಡಿ, ಪ್ರಹಸನ ನಡೆಸಿಕೊಟ್ಟಿತು. ಬೇಬಿ ಸಾನ್ವಿ ನೃತ್ಯ ಎಲ್ಲರ ಮನ ಸೂರೆಗೊಂಡಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ “ಕೊಂಕ್ಣಿ ಸಂಭ್ರಮ್” ಕಾರ್ಯಕ್ರಮವನ್ನು ರೊಜಾರಿಯೊ, ಪಾದುವಾ, ಸಂತ ಎಲೋಶಿಯಸ್ ಕಾಲೇಜಿನ ಕೊಂಕಣಿ ಕ್ಲಬ್ಗಳ ವಿದ್ಯಾರ್ಥಿಗಳು ವಿವಿಧ ಕೊಂಕಣಿ ಹಾಡುಗಳನ್ನು, ನೃತ್ಯಗಳನ್ನು, ಹಾಸ್ಯ ಪ್ರಹಸನಗಳನ್ನು ನಡೆಸಿಕೊಟ್ಟರು. ಅನಿಲ್ ಪಿಂಟೊ ಮತ್ತು ಪ್ರೀವಲ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಾಮನಾಥ ಮೇಸ್ತ ರಚಿಸಿರುವ ಕೊಂಕಣಿ ಅಕಾಡಮಿ ಪ್ರಕಟಿಸಿದ 30ನೆ ಕೃತಿ “ಮೇಸ್ತ”ವನ್ನು ಮಾರ್ಕ್ ವಾಲ್ಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಅಕಾಡಮಿಯ ತ್ರೈಮಾಸಿಕ ಸುದ್ದಿ ಸಂಚಿಕೆ “ಕೊಂಕಣಿ ಸಿರಿಸಂಪದ”ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ಬಿಡುಗಡೆಗೊಳಿಸಿದರು. ಅಕಾಡಮಿ ಅಧ್ಯಕ್ಷ ರೊಯ್ ಕ್ಯಾಸ್ಟಲಿನೊ ಸ್ವಾಗತಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ “ಪೆರ್ನಾಲ್ ಸಂದೋಲ” ಆಡಿಯೋ ಹಾಡುಗಳನ್ನು ಶೌಕತ್ ಪಡುಬಿದ್ರಿ, ಶಮೀರ್ ಮೂಲ್ಕಿ, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ, ಅಶ್ರಫ್ ಅಪೋಲೊ, ರಿಯಾಝ್ ಕಲ್ಲಡ್ಕ, ಶರೀಫ್ ಬೊಳಂತೂರು ಹಾಡಿದರು. ಇದೇ ವೇಳೆ ದಫ್ ಪ್ರದರ್ಶನ ನಡೆಯಿತು.










