ಮಂಗಳೂರು :ನಗರದ ನಂತೂರು ಸಮೀಪದ ಬಿಕರ್ಣಕಟ್ಟೆಯಲ್ಲಿ ಇಂದು ಬೆಳಿಗ್ಗೆ ನಡೆದ ಸರಣಿ ಅಪಘಾತದಲ್ಲಿ ಐವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಸಂಭವಿಸಿದೆ.
ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಶ್ರೀ ವಾಸುಕಿ ಹೆಸರಿನ ಬಸ್ ಬಿಕರ್ಣಕಟ್ಟೆ ಬಳಿ ಬರುತ್ತಿದ್ದಾಗ ಮುಂದಿನಿಂದ ಸಾಗುತ್ತಿದ್ದ ಒಂದು ಮಾರುತಿ ಆಲ್ಟೋ ಕಾರು, ಒಂದು ಆಟೋ ರಿಕ್ಷಾ, ಒಂದು ಯಾಕ್ಟೀವ್ ಹೊಂಡಾ ಸ್ಕೂಟರ್ ಮತ್ತು ದ್ವಿಚಕ್ರ ವಾಹನಕ್ಕೆ ( ಬೈಕ್) ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಈ ಎಲ್ಲಾ ವಾಹನಗಳಲ್ಲಿದ್ದ ಐವರಿಗೆ ಗಾಯಗಳಾಗಿದ್ದು, ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯ ಗೊಂಡಿದ್ದಾನೆ ಎನ್ನಲಾಗಿದೆ.
ಈ ಎಲ್ಲಾ ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಎಲ್ಲಾ ಐದು ವಾಹನಗಳು ಜಖಂ ಗೊಂಡಿದ್ದು, ಆಟೋ ರಿಕ್ಷಾಕ್ಕೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.
ಬಸ್ನ ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ಸ್ ಆಡದಿಡ್ಡಿ ಚಲಿಸಿದ್ದೇ ಈ ಸರಣಿ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್ನ ಚಾಲಕ ಹಾಗೂ ನಿರ್ವಾಹಕ ( ಕಂಡಕ್ಟರ್ ) ಅಪಘಾತ ನಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕದ್ರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.