ಮಂಗಳೂರು, ಜುಲೈ.22: ನಗರದ ಹೊರವಲಯ ಉಳ್ಳಾಲದ ಕುಂಪಲದ ಚಿತ್ರಾಂಜಲಿ ನಗರ ಸಮೀಪದ ವಿಜಯನಗರ ಎಂಬಲ್ಲಿ ತಾಂತ್ರಿಕ ವೈಫಲ್ಯಕ್ಕೀಡಾದ ಬಸ್ಸೊಂದು ರಸ್ತೆ ಬದಿಯ ಕಮರಿಗಿಳಿದು ಬಳಿಕ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಈ ಘಟನೆಯಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ನಗರದಿಂದ ಬಗಂಬಿಲ ಕಡೆಗೆ ತೆರಳುತ್ತಿದ್ದ 44 ನಂಬರಿನ ಸಿಟಿಬಸ್ ಇಲ್ಲಿನ ವಿಜಯನಗರದ ಏರುವ ಪ್ರದೇಶದಲ್ಲಿ ಚಲಿಸುತ್ತಿದ್ದ ಸಂದರ್ಭ ಆ್ಯಕ್ಸಿಲ್ ತುಂಡಾಗಿ ನಿಯಂತ್ರಣ ಕಳೆದುಕೊಂಡು ಏಕಾಏಕಿ ಹಿಂದುಗಡೆ ಚಲಿಸಿ ಕಮರಿಗೆ ಉರುಳಿ ಸಮೀಪದಲ್ಲಿದ್ದ ನಾರಾಯಣ ಎಂಬವರ ಕಂಪೌಂಡಿಗೆ ಡಿಕ್ಕಿ ಹೊಡೆದು ನಿಂತಿದೆ,ಬೆಳಗ್ಗಿನ ಸಮಯವಾಗಿದ್ದರಿಂದಾಗಿ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರು. ಮೂವರು ಮಹಿಳೆಯರು ಮತ್ತು ಒಂದು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರು ಪಾರಾಗಿದ್ದಾರೆ.
ಈ ಭಾಗದಲ್ಲಿ ಒಂದೆಡೆ ಹೈಟೆನ್ಷನ್ ಟ್ರಾನ್ಸ್ಫಾರ್ಮರ್ ಇದೆ, ಇನ್ನೊಂದೆಡೆ ಸೇತುವೆಯಿದೆ. ಬಸ್ಸು ಕಮರಿಗೆ ಉರುಳದೇ ಹಿಂದೆ ಬಂದಿದ್ದಲ್ಲಿ ಸೇತುವೆಯಿಂದ ಕೆಳಕ್ಕುರುಳುವ ಅಪಾಯವಿತ್ತು. ಇತ್ತಕಡೆ ಚಲಿಸಿದ್ದರೆ ಹೈಟೆನ್ಶನ್ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿಯಾಗುವ ಸಾಧ್ಯತೆಯಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ