ಕನ್ನಡ ವಾರ್ತೆಗಳು

ಹಿಂದೂ ಯುವಕರ ಮೇಲಿನ ದೌರ್ಜನ್ಯ ಮತ್ತು ಗೋಕಳ್ಳತನದ ಆರೋಪಿಗಳಿಗೆ ಸಚಿವರ ಬೆಂಬಲ :ವಜ್ರದೇಹಿ ಸ್ವಾಮಿ ಆರೋಪ

Pinterest LinkedIn Tumblr

Tokkot_svamji_protst_1

ತೊಕ್ಕೊಟ್ಟು: ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದು ಯುವಕರ ಮೇಲೆ ಚೂರಿ ಇರಿತದ ಪ್ರಕರಣಗಳು ಹೆಚ್ಚುತ್ತಿವೆ. ಅತ್ಯಾಚಾರ, ಗೋಕಳ್ಳತನ, ಅಮಾಯಕರ ಮೇಲೆ ಸುಳ್ಳು ಆರೋಪ ಹೊರಿಸುವಂತಹ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದರೂ ಆರೋಪಿಗಳ ಬಂಧನವಾಗದಂತೆ ಸಚಿವರು ತಡೆಯುತ್ತಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಆರೋಪಿಸಿದರು.

ಅವರು ಸೋಮವಾರ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಬಜರಂಗ ದಳ, ವಿಶ್ವ ಹಿಂದು ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಸಚಿವರ ಮೇಲೆ ವಿಶ್ವಾಸವಿಟ್ಟವರು ಈಗ ನಂಬಿ ಕೆಟ್ಟಿದ್ದಾರೆ. ಧರ್ಮಬೇಧವಿಲ್ಲದೆ ಮತ ನೀಡಿದರೂ ಗೆದ್ದ ಬಳಿಕ ಅವರು ಒಂದೇ ಧರ್ಮದ ಜನರ ಮತದಿಂದ ಜಯಿಸಿದಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಹಿಂದು ಸಮಾಜದ ಮೇಲೆ ಉದ್ದೇಶಪೂರ್ವಕವಾಗಿ ಒಂದು ಸಮುದಾಯದಿಂದ ದೌರ್ಜನ್ಯ ನಡೆಯುತ್ತಿದ್ದರೂ ಠಾಣೆಯಲ್ಲಿ ದೂರು ದಾಖಲು ಆಗುತ್ತಿಲ್ಲ. ತೊಕ್ಕೊಟ್ಟಿನ ಶಾಲೆಯೊಂದರ ಬಾಲಕಿಗೆ ಆದ ಗಾಯದ ನೆಪದಲ್ಲಿ ಚಾಲಕನ ಮೇಲೆ ಅತ್ಯಾಚಾರ ಕೇಸು ಹಾಕಲಾಯಿತು. ಹಿಂದು ಯುವಕರ ಮೇಲೆ ಚೂರಿ ಇರಿತ ಪ್ರಕರಣ ನಡೆಯುತ್ತಿದ್ದರೂ ಒಬ್ಬನೇ ಒಬ್ಬ ಆರೋಪಿಯನ್ನು ಇದುವರೆಗೆ ಬಂಧಿಸಲಾಗಿಲ್ಲ. ಇದು ಹೀಗೆಯೇ ಮುಂದುವರಿದರೆ ಸಚಿವರ ಮನೆ, ವಿಧಾನಸೌಧದ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಅಂತಹ ಹೋರಾಟವನ್ನು ತಡೆಯಲು ಅಧಿಕಾರಿ, ಆಡಳಿತ ವರ್ಗದಿಂದ ಸಾಧ್ಯವಾಗದು ಎಂದು ಎಚ್ಚರಿಸಿದರು.

Tokkot_svamji_protst_2

ಉಳ್ಳಾಲದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳಿದ್ದರೂ ಆರೋಪಿಗಳನ್ನು ಬಂಧಿಸಲು ಸಚಿವರ ಒತ್ತಡದಿಂದ ಸಾಧ್ಯವಾಗುತ್ತಿಲ್ಲ. ಕೇವಲ ಒಂದು ತಿಂಗಳು ಪೊಲೀಸರಿಗೆ ಮುಕ್ತ ವಾತಾವರಣ ಕಲ್ಪಿಸಿದರೆ ದುಷ್ಕ ೃತ್ಯ ಎಸಗಿದ ಎಲ್ಲ ಆರೋಪಿಗಳು ಕಂಬಿ ಎಣಿಸಬೇಕಾಗುತ್ತದೆ ಎಂದು ಹಿಂದು ಜಾಗರಣ ವೇದಿಕೆ ರಾಜ್ಯ ಉಪ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು.

ಚೆಂಬುಗುಡ್ಡೆ ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಬಂಧಿಸಿ ಅಮಾಯಕನ ಮೇಲೆ ಕೇಸು ದಾಖಲಿಸಿದ ಪರಿಯಲ್ಲಿಯೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ವೈದ್ಯನಿಂದ ನಡೆದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಕೇಸು ದಾಖಲಿಸಿ ಆರೋಪಿಯ ಬಂಧಿಸುವ ಕೆಲಸ ಮಾಡಲಿ ಎಂದು ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಸವಾಲು ಹಾಕಿದರು.

ಉಳ್ಳಾಲದಲ್ಲಿ ಐದು ಚೂರಿ ಇರಿತ ಪ್ರಕರಣಗಳು ನಿರಂತರವಾಗಿ ನಡೆದಿದ್ದರೂ ಆರೋಪಿಗಳ ಬಂಧನವಾಗಿಲ್ಲ, ಅಂತಹ ಪ್ರಕರಣಗಳು ಮುಂದುವರಿದಲ್ಲಿ ಉಳ್ಳಾಲದಲ್ಲಿ ಅರಾಜಕತೆ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ. ಸಾಮರಸ್ಯ ಹಾಗೂ ವಿಶ್ವಾಸಕ್ಕೆ ಪೆಟ್ಟು ಕೊಡುತ್ತದೆ ಎಂದು ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಪ್ರತಿಭಟನೆಯ ಬಳಿಕ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಲಾಯಿತು.

 

Write A Comment