ಮಂಗಳೂರು,ಜುಲೈ .16 : ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಲೊಯೊಲಾ ಸೆಂಟರ್ ಫಾರ್ ರಿಸರ್ಚ್ ಆಂಡ್ ಇನ್ನೋವೇಶನ್ (ಎಲ್ ಸಿಆರ್ಐ) ಕಟ್ಟಡದ ಉದ್ಘಾಟನೆ ಬುಧವಾರ ನಡೆಯಿತು. ಕರ್ನಾಟಕ ಜೆಸುವೆಟ್ ಪ್ರಾವಿನ್ಸ್ನ ರೆ.ಫಾ.ಡಾ. ಸ್ಟಾನಿಸ್ಲಸ್ ಡಿಸೋಜಾ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಡಾ.ಹರ್ಷವರ್ಧನ್ ಬಾತ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಸಂಶೋಧನೆಯನ್ನು ಕೇವಲ ಶಿಕ್ಷಣದ ಒಂದು ಭಾಗವಾಗಿ ನಿರ್ವಹಿಸದೆ ಅದನ್ನು ಒಂದು ಹವ್ಯಾಸ ಹಾಗೂ ಉತ್ಸಾಹದಿಂದ ಕೈಗೊಂಡಾಗ ಮಾತ್ರವೇ ಅದರ ಫಲ ಅತ್ಯುತ್ತಮವಾಗಿರುತ್ತದೆ ಎಂದು ಯುವ ಸಂಶೋಧಕರಿಗೆ ಕರೆ ನೀಡಿದರು. ಯುವ ಸಂಶೋಧಕರಿಗೆ ಸಂಶೋಧನೆಗೆ ವಿಫುಲ ಅವಕಾಶಗಳಿದ್ದು, ತಮಗೆ ದೊರಕುವ ಮೂಲಭೂತ ಸೌಕರ್ಯಗಳನ್ನು ಉಪಯೋಗಿಸಿಕೊಂಡು ದೇಶದ ಅಭಿ ವೃದ್ಧಿಯ ದೃಷ್ಟಿಯೊಂದಿಗೆ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದೂ ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ನೂತನ ವಿಜ್ಞಾನ ಸಂಶೋಧನಾ ಬ್ಲಾಕ್ನ್ನು ಆಶೀರ್ವದಿಸಿ ಮಾತನಾಡಿದ ಶಿವಮೊಗ್ಗದ ಬಿಷಪ್ ರೆ.ಡಾ.ಫ್ರಾನ್ಸಿಸ್ ಸೆರಾವೊ, ಕಾಲೇಜಿನ 135 ವರ್ಷಗಳ ಇತಿಹಾಸದಲ್ಲಿ ಈ ಬ್ಲಾಕ್ ನಿರ್ಮಾಣವು ಮೈಲುಗಲ್ಲಾಗಿದೆ ಎಂದರು. ಫಾ. ಡೆನ್ಸಿಲ್ ಲೋಬೋ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಂದನೆ ನೆರವೇರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಫಾ.ಸ್ವೀಬರ್ಟ್ ಡಿಸಿಲ್ವಾ ಕಾಲೇಜಿನಲ್ಲಿ ಹೊಸ ಆಡಳಿತ ಬ್ಲಾಕ್, ಸುಸಜ್ಜಿತ ಗ್ರಂಥಾಲಯ ಮತ್ತು ಸುಸಜ್ಜಿತ ಸಭಾಂಗಣವೊಂದರ ಅಗತ್ಯವಿರುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಹಿರಿಯರ ಗಮನಕ್ಕೆ ತಂದರು.