ಮಂಗಳೂರು : ವಿಟ್ಲ ಮತ್ತು ಬಂಟ್ವಾಳ ನಗರ ಪೊಲೀಸರು ಹಾಗೂ ಜಿಲ್ಲಾ ಅಪರಾಧ ದಳದ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ದ.ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳೆದ 1 ವರ್ಷದಿಂದ ವಾಹನಗಳನ್ನು ಕಳವು ಮಾಡಿ ಕೇರಳದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿ ಕಳವು ಜಾಲದ ಮೂವರನ್ನು ಬಂಧಿಸಿ, ಎಂಟು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಯಿದೀನ್ ಶರೀಫ್ ಅಲಿಯಾಸ್ ಶರೀಫ್ ( 26) , ದಾವೂದ್ ಜಲೀಲ್ ಅಲಿಯಾಸ್ ಜೆಮ್ಸಿ ಅಲಿಯಾಸ್ ಕಲಂದರ್ ( 21) ಹಾಗೂ ಮೊಯಿದೀನ್ ಇರ್ಷಾದ್ ಅಲಿಯಾಸ್ ಇರ್ಷಾದ್ (21) ಎಂದು ಹೆಸರಿಸಲಾಗಿದೆ.
ಇವರೆಲ್ಲರೂ ಕೇರಳ ರಾಜ್ಯದ ಕುಂಬಳೆ ಹಾಗೂ ಉಪ್ಪಳ ಪರಿಸರದವರು. ಬಂಧಿತರಿಂದ 5 ಪಿಕ್ಅಪ್ ವಾಹನಗಳು, 2 ಮಾರುತಿ ಓಮ್ನಿ ಹಾಗೂ ಒಂದು ಮಾರುತಿ ವ್ಯಾಗನರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಹನಗಳ ಒಟ್ಟು ಮೌಲ್ಯ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇವುಗಳನ್ನು ಬಂಟ್ವಾಳ ನಗರ ಠಾಣೆ, ವಿಟ್ಲ ಪೊಲೀಸ್ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಿಂದ ಕಳವು ಮಾಡಲಾಗಿತ್ತು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ಡಾ | ಎಸ್. ಶರಣಪ್ಪ ಅವರು ತಿಳಿಸಿದ್ದಾರೆ.
ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಆರೋಪಿಗಳು ತಮ್ಮ ಸಹಚರರೊಂದಿಗೆ ಸೇರಿಕೊಂಡು ರಾತ್ರಿ ಸಮಯದಲ್ಲಿ ವಾಹನಗಳನ್ನು ಮುಖ್ಯವಾಗಿ ಪಿಕ್ಆಪ್ ವಾಹನಗಳನ್ನು ಕಳವು ಮಾಡುತ್ತಿದ್ದರು. ಅವುಗಳನ್ನು ಬಳಿಕ ಕೇರಳ ರಾಜ್ಯದ ಕುಂಬಳೆ ಪರಿಸರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲು ಬಳಸುತ್ತಿದ್ದರು ಎಂದರು.
ಖಚಿತ ವರ್ತಮಾನದಂತೆ ವಿಟ್ಲ , ಬಂಟ್ವಾಳ ಹಾಗೂ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿಗಳು ಹಾಗೂ ಸಿಬಂದಿಗಳು ಸಾರಡ್ಕ ಚೆಕ್ಪೋಸ್ಟ್ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಒಂದು ಪಿಕ್ಅಪ್ ವಾಹನವನ್ನು ವಶಕ್ಕೆ ಪಡೆದುಕೊಂಡರು. ಅದರಲ್ಲಿದ್ದ ಶರೀಫ್ , ದಾವೂದ್ ಜಲೀಲ್ ಹಾಗೂ ಇರ್ಷಾದ್ ನನ್ನು ವಿಚಾರಿಸಿದಾಗ ಕಳವು ಜಾಲ ಬಯಲಿಗೆ ಬಂತು. ಕಳ್ಳತನದ ವಾಹನಗಳನ್ನು ಕುಂಬಳೆ ಬಳಿಯಿಂದ ವಶಪಡಿಸಿಕೊಳ್ಳಲಾಯಿತು. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದ್ದು ಅವರಿಂದ ವಾಹನಗಳನ್ನು ಸಾªಧೀನಪಡಿಸಬೇಕಾಗಿರುತ್ತದೆ ಎಂದವರು ವಿವರಿಸಿದರು.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ | ಶರಣಪ್ಪ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತ ಕುಮಾರ್, ಬಂಟ್ವಾಳ ಉಪವಿಭಾಗದ ಎಎಸ್ಪಿ ರಾಹುಲ್ ಕುಮಾರ್ ಅವರ ನಿರ್ದೇಶನದಂತೆ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಕೆ.ಯು. ಬೆಳ್ಳಿಯಪ್ಪ , ವಿಟ್ಲ ಠಾಣಾ ಪಿಎಸ್ಐ ಪ್ರಕಾಶ್ ದೇವಾಡಿಗ , ಸಿಬಂದಿಗಳಾದ ಚಿದಾನಂದ ರೈ, ಶೀನಗೌಡ, ಪ್ರವೀಣ್ ರೈ, ಜನಾರ್ದನ , ಹರಿಶ್ಚಂದ್ರ , ಡಿಸಿಐಬಿ ವಿಭಾಗದ ಮಹಿಳಾ ಪಿಎಸ್ಐ ಮಂಜುಳಾ, ಎಎಸ್ಐ ಸಂಜೀವ ಪುರುಷ, ಸಿಬಂದಿಗಳಾದ ಪಳನಿವೇಲು, ಉದಯ ರೈ, ತಾರಾನಾಥ , ಇಕ್ಬಾಲ್, ವೃತ್ತ ಕಚೇರಿಯ ಸಿಬಂದಿಗಳಾದ ಗಿರೀಶ, ವಾಸುನಾಯ್ಕ , ಸುಂದರ್ ರಾಜ್, ನರೇಶ್ ಕುಮಾರ್, ಬಂಟ್ವಾಳ ನಗರ ಠಾಣಾ ಎಎಸ್ಐ ಸಂಜೀವ, ಸುರೇಶ, ಪ್ರಶಾಂತ , ಬಂಟ್ವಾಳ ಗ್ರಾಮಾಂತರ ಠಾಣೆಯ ಜಗದೀಶ್, ಚಾಲಕರಾದ ವಿಜಯೇಶ್ವರ, ಯೋಗೀಶ, ನಾರಾಯಣ ಗೌಡ, ವಾಸು ನಾಯ್ಕ ಅವರು ಆರೋಪಿ ಹಾಗೂ ಸೊತ್ತುಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ನಗದು ಪುರಸ್ಕಾರ ಘೋಷಣೆ :
ಆರೋಪಿಗಳ ಬಂಧನ ಹಾಗೂ ವಾಹನಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ವಿಟ್ಲ , ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸರು ಹಾಗೂ ಅಪರಾಧ ಪತ್ತೆದಳದ ಅಧಿಕಾರಿ ಹಾಗೂ ಸಿಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ | ಶರಣಪ್ಪ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು. 25,000 ರೂ. ನಗದ ಪುರಸ್ಕಾರ ಘೋಷಿಸಿದರು. ಬಾಲಕ ನಾಪತ್ತೆ ಪ್ರಕರಣ ಹಾಗೂ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ವಿಟ್ಲ ಠಾಣೆಯ ಪೊಲೀಸರ ಕಾರ್ಯಾಚರಣೆಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಆರೋಪಿಗಳು ಬಾಡಿಗೆ ಪಡೆದುಕೊಂಡಿದ್ದ ಮಾರುತಿ ವ್ಯಾಗನರ್ ಕಾರನ್ನು ಕಳವು ಕೃತ್ಯಕ್ಕೆ ಬಳಸುತ್ತಿದ್ದರು. ಅದರ ಮೂಲಕ ದ.ಕನ್ನಡ ಜಿಲ್ಲೆಗೆ ಬಂದು ಪಿಕ್ಅಪ್ ಹಾಗೂ ಇತರ ವಾಹನಗಳನು ಕಳವು ಮಾಡಿಕೊಂಡು ಕುಂಬಳೆಗೆ ಕೊಂಡೋಗುತ್ತಿದ್ದರು. ಅಲ್ಲಿ ಅಕ್ರಮವಾಗಿ ಮರಳು ಸಾಗಾಟಕ್ಕೆ ಇವುಗಳನ್ನು ಬಳಸುತ್ತಿದ್ದರು. ಸಿಮೆಂಟ್ ಚೀಲಗಳಲ್ಲಿ ಮರಳು ತುಂಬಿಸಿ ಪಿಕ್ಅಪ್ನಲ್ಲಿ ಲೋಡ್ ಮಾಡುತ್ತಿದ್ದರು. ಇದರಲ್ಲಿ 1 ವಾಹನವನ್ನು ಅಕ್ರಮ ಜಾನುವಾರು ಸಾಗಾಟಕ್ಕೂ ಬಳಸಿದ್ದರು ಎಂದು ಅವರು ವಿವರಿಸಿದರು.