ಮಂಗಳೂರು/ ಕಾರ್ಕಳ, ಜುಲೈ.15: ಬೆಳ್ಮಣ್ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹಾಡಹಗಲೇ ನುಗ್ಗಿದ ಕಳ್ಳರು ಸುಮಾರು 3 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ದೋಚಿದ್ದಾರೆ.
ಅರ್ಚಕ ನಾಗೇಂದ್ರ ಭಟ್ ಅವರು ಮೊನ್ನೆ ಮಧ್ಯಾಹ್ನ 12 ಗಂಟೆಗೆ ಪೂಜೆ ಮುಗಿಸಿ ದೇವಸ್ಥಾನದ ಗರ್ಭಗುಡಿ ಮತ್ತು ಮುಂಬಾಗಿಲಿಗೆ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಸಂಜೆ ಆರು ಗಂಟೆಗೆ ಪೂಜೆ ಮಾಡಲು ಮರಳಿ ಬಂದಾಗ ದೇವಸ್ಥಾನದ ಮುಂಬಾಗಿಲಿಗೆ ಅವರು ಹಾಕಿದ್ದ ಬೀಗದ ಬದಲು ಬೇರೊಂದು ಬೀಗವಿತ್ತು. ಸ್ಥಳೀಯರ ನೆರವಿನೊಂದಿಗೆ ಬೀಗ ಮುರಿದು ಒಳ ಪ್ರವೇಶಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಗರ್ಭಗುಡಿಯ ಬಾಗಿಲಿನ ಬೀಗದ ಚಿಲಕದ ಕೊಂಡಿಯನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವಿಗ್ರಹಕ್ಕೆ ತೊಡಿಸಿದ್ದ ವಿವಿಧ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಇವುಗಳ ಮೌಲ್ಯ 3 ಲ. ರೂ.ಗೂ ಅಧಿಕವೆನ್ನಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.