ಕುಂದಾಪುರ: ಹಿಂಸಾತ್ಮಕವಾಗಿ ಕೋಣಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಪೊಲೀಸರು ದಾಳಿ ನಡೆಸಿ ಲಾರಿಯನ್ನು ವಶಪಡಿಸಿಕೊಂಡು 19 ಕೋಣಗಳ ರಕ್ಷಣೆ ಮಾಡಿದ ಘಟನೆ ಬೈಂದೂರು ಸಮೀಪದ ನಾವುಂದದ ಪೆಟ್ರೋಲ್ ಬಂಕ್ ಬಳಿ ಬುಧವಾರ ಮುಂಜಾನೆ ನಡೆದಿದೆ.
ಆರೋಪಿ ಜಲೀಲ್ ಮತ್ತು ಸಹಚರರು ಈ ಸಂದರ್ಭ ಪರಾರಿಯಾಗಿದ್ದು ಅವರ ಪತ್ತೆಗಾಗಿ ಬಲೆಬೀಸಲಾಗಿದೆ.
ಘಟನೆ ವಿವರ: ಬುಧವಾರ ಮುಂಜಾನೆ 5 ಗಂಟೆ ವೇಳೆಗೆ ನಾವುಂದ ಪೆಟ್ರೋಲ್ ಬಂಕ್ ಬಳಿಯಿರುವ ಜಲೀಲ್ ಎಂಬಾತನ ಮನೆಯಿಂದ 19 ಕೋಣಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಕೇರಳದ ಕಡೆ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಬೈಂದೂರು ಪೊಲೀಸರು ಕೋಣಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಮತ್ತು ತಂಡ ದಾಳಿ ನಡೆಸಿ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ಕೋಣಗಳನ್ನು ತಂದು ಆರಕ್ಷಕ ಠಾಣೆಯ ವಠಾರದಲ್ಲಿ ನೀರು, ಮೇವನ್ನು ಕೊಟ್ಟು ಆರೈಕೆ ಮಾಡಿದ್ದಾರೆ. ಪೊಲೀಸರನ್ನು ಕಂಡ ಆರೋಪಿಗಳು ಕತ್ತಲೆಯಲ್ಲಿ ಓಡಿ ಪರಾರಿಯಾಗಿದ್ದಾರೆ. ವಶಪಡಿಸಿಕೊಂಡಿದ್ದು ಆರೋಪಿಗಳು ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ಕೋಣಗಳನ್ನು ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.