ಉಡುಪಿ: ಅವನೊಬ್ಬ ಕರೆಯದೇ ಬಂದ ಅತಿಥಿ, ಮನೆಯಂಗಳಕ್ಕೆ ಬಂದವನು ಏಕಾಏಕಿ ಬಾತ್ ರೂಂ ಗೆ ನುಗ್ಗಿ ಅವಿತು ಕುಳಿತಿದ್ದ, ಅಲ್ಲಿಗೆ ಬಂದ ಮನೆ ಯಜಮಾನರು ಸ್ನಾನ ಮಾಡದೆಯೇ ಒದ್ದೆಯಾಗಿದ್ದರು. ಬೆವರಿದರು, ಬೆದರಿದರು…ಯಾಕೆ ಗೊತ್ತಾ ಅಲ್ಲಿ ಅವಿತಿದ್ದು ಭಯಂಕರ ಚಿರತೆಯಾಗಿತ್ತು..
ಮನೆ ಸುತ್ತಲೂ ಜನ, ಕೆಲವರು ಹಂಚಿನ ಮಾಡು ಹತ್ತಿ ಇಣುಕುತ್ತಿದ್ದರೆ ಇನ್ನು ಕೆಲವರು ದೂರದೂರ ನಿಂತು ಕುತೂಹಲದ ಕಣ್ಣಿನಿಂದ ಕಾಯುತ್ತಿದ್ದರು. ಉಡುಪಿ ಪೆರ್ಣಂಕಿಲದ ರಂಗಪ್ಪ ಮಾಸ್ತರರ ಮನೆಗೆ ಬಂದ ಅತಿಥಿಯನ್ನು ಕಾಣಲು ಈ ಕೌತುಕ. ಆದರೆ ಅವಿತು ಕುಳಿತಿದ್ದ ಅತಿಥಿ ಯಾವಾಗ ಅಬ್ಬರಿಸುತ್ತಾ ಹೊರ ಬಂದನೋ, ಜನರೆಲ್ಲಾ ಚೆಲ್ಲಾಪಿಲ್ಲಿ.
ಈ ಭಯಂಕರ ಚಿರತೆ ಕಾಡಿನಲ್ಲಿ ಆಹಾರಕ್ಕಾಗಿ ಅಲೆಯುತ್ತಿದ್ದವ, ಆಹಾರ್ ಅರಸಿ ಅದೇನೋ ತಿನ್ನುವ ಆಸೆಯಿಂದ ಮನೆಯಂಗಳಕ್ಕೆ ಬಂದಿದ್ದ, ಅಲ್ಲಿಂದ ಹಾಗೇ ಬಾತ್ ರೂಂ ವೊಳಗೆ ನಾಯಿಗೆ ಕಾಯುತ್ತಾ ಅವಿತು ಕುಳಿತಿದ್ದ.
ಅರಣ್ಯ ಇಲಾಖೆಯವರು ಸತತ ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಚಿರತೆ ಹಿಡಿಯುವಲ್ಲಿ ಯಶಸ್ವಿ ಆದರು. ಆಗಲೇ ಘಾಸಿಗೊಂಡಿದ್ದ ಈ ಗಂಡು ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಪಿಲಿಕುಳ ನಿಸರ್ಗ ಧಾಮಕ್ಕೆ ಸಾಗಿಸಿದರು. ಚಿರತೆ ಹಿಡಿಯೋದಕ್ಕಿಂತಲೂ ನೆರೆದ ಕುತೂಹಲಿ ಜನರನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿತ್ತು. ಸಾಕಷ್ಟು ಪೊಲೀಸರು ಕೂಡಾ ಸ್ಥಳದಲ್ಲಿ ಜಮಾಯಿಸಿದರು.
ಉಡುಪಿ ಜಿಲ್ಲೆಯಲ್ಲಿ ಚಿರತೆ ಕಾಟ ಮಿತಿ ಮೀರುತ್ತಿದೆ. ಆಹಾರ ಲಭ್ಯವಾಗದೆ ಕಾಡಿನಿಂದ ನಾಡಿಗೆ ಬರುವ ಚಿರತೆಗಳನ್ನು ಸೀಮಿತ ಸೌಲಭ್ಯದಲ್ಲಿ ಸೆರೆ ಹಿಡಿಯೋದು ಅರಣ್ಯ ಇಲಾಖೆಗೆ ಸವಾಲೇ ಸರಿ.