ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಜುಲೈ. 14 : ಜಾತಿ, ಧರ್ಮದ ಸಂಘರ್ಷಗಳ ಜೊತೆ ಮನಸ್ಸುಗಳ ನಡುವೆ ಉಂಟಾಗುವ ಕಂದಕವನ್ನು ದೂರ ಮಾಡಿ ಸಮಾಜದಲ್ಲಿ ಸೌಹಾರ್ದತೆ ಹಾಗೂ ಶಾಂತಿ, ಸಾಮರಸ್ಯ ನೆಲೆಸಲು ಇಂಥಹ ಸೌಹಾರ್ದ ಇಫ್ತಾರ್ ಕೂಟ ಸಹಕಾರಿಯಾಗಿದೆ ಎಂದು ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಸರ್ವಧರ್ಮವನ್ನು ಒಗ್ಗೂಡಿಸಿಕೊಂಡು ನಿಸ್ವಾರ್ಥ ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ನಗರದ ಕೊಂಚಾಡಿಯಲ್ಲಿ ನೂತನವಾಗಿ ಶುಭಾರಂಭಗೊಂಡ “ಟ್ರೂ ಸಿಟಿಜನ್” ಸಂಸ್ಥೆಯ ಅಶ್ರಯದಲ್ಲಿ ಕೊಂಚಾಡಿಯ ಭಾಗ್ಯಜ್ಯೋತಿ ಇಂಡಸ್ಟ್ರೀಸ್ ಆವರಣದಲ್ಲಿ ಸೋಮವಾರ ನಡೆದ “ಸೌಹಾರ್ದ ಇಫ್ತಾರ್ ಕೂಟ”ದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಜನರ ಪ್ರೀತಿ, ವಿಶ್ವಾಸದ ಎದುರು ಆಸ್ತಿ, ಅಂತಸ್ತು ನಗಣ್ಯ. ಎಲ್ಲಾ ಧರ್ಮಗಳನ್ನು ಒಗ್ಗೂಡಿಸಿಕೊಂಡು ಇಂತಹ ಸೌಹಾರ್ದ ಕೂಟವನ್ನು ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ಸ್ಪೂರ್ತಿ ತುಂಬ ಬೇಕು. ಯುವಕರು ಇಂಥಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
“ಟ್ರೂ ಸಿಟಿಜನ್” ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸಿದ ಅವರು, ಸೇವಾ ಮನೋಭಾವವನ್ನಿಟ್ಟುಕೊಂಡು ಯುವಕರೇ ಹುಟ್ಟು ಹಾಕಿದ ಈ ಸಂಸ್ಥೆ ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಎಲ್ಲರಿಗೂ ಸಹಕಾರ ನೀಡುವ ಮೂಲಕ ಯಶಸ್ಸು ಕಾಣಲಿ ಎಂದು ವಿಜಯ ಕುಮಾರ್ ಶೆಟ್ಟಿಯವರು ಶುಭಾ ಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಭಾಗ್ಯಜ್ಯೋತಿ ಇಂಡಸ್ಟ್ರೀಸ್ನ ಮಾಲಕ ಶ್ರೀ ಲಕ್ಷಣ್ ದೇವಾಡಿಗ, ಸಮಾಜ ಸೇವಕ ಶ್ರೀ ವಿಕ್ಟರ್ ಕೊರೆಯ, ಕನಸು ಚಿತ್ರದ ನಿರ್ಮಾಪಕ ಶ್ರೀ ತಮ್ಮಣ್ಣ ಶೆಟ್ಟಿ, ಉದ್ಯಮಿ ಶ್ರೀ ಹ್ಯಾರಿಸ್ ಮುಂತಾದವರು ರಂಜಾನ್ ಹಬ್ಬದ ಆಚಾರ – ವಿಚಾರಗಳ ಬಗ್ಗೆ ಮಾತನಾಡಿ, ರಂಜಾನ್ ಸೇರಿದಂತೆ ಮುಂಬರುವ ಎಲ್ಲಾ ಧರ್ಮಗಳ ಹಬ್ಬಗಳಿಗೆ ಶುಭ ಕೋರಿದರು.
“ಟ್ರೂ ಸಿಟಿಜನ್” ಸಂಸ್ಥೆಯ ಸ್ಥಾಪಕ ಶ್ರೀ ಕಿರಣ್ ದೇವಾಡಿಗ ಸ್ವಾಗತಿಸಿದರು. ಶ್ರೀ ಉಮೇಶ್ ದಂಡೆಕೇರಿ ಕಾರ್ಯಕ್ರಮ ನಿರೂಪಿಸಿದರು.
ಟ್ರೂ ಸಿಟಿಜನ್ ಬಗ್ಗೆ ಒಂದಿಷ್ಟು…
“All Children One God” ಎಂಬ ವೇದ ವಾಕ್ಯದೊಂದಿಗೆ ಆರಂಭಗೊಂಡಿರುವ ಸಮಾಜ ಸೇವಾ ಸಂಸ್ಥೆಯೇ “ಟ್ರೂ ಸಿಟಿಜನ್” ( ನೈಜ್ಯ ನಾಗರೀಕ). “ಎಲ್ಲಾ ಧರ್ಮವನ್ನು ಪ್ರೀತಿಸು, ನಿನ್ನ ಧರ್ಮದಲ್ಲೇ ಜೀವಿಸು” ಎಂಬ ಮಹಾತ್ಮಾ ಗಾಂಧೀಜಿಯವರ ತತ್ವದಂತೆ ಸಾಮಾಜಿಕ ಮೌಲ್ಯಗಳನ್ನು ಇಟ್ಟುಕೊಂಡು ಈ ಒಂದು ಸಂಸ್ಥೆ ಶುಭಾರಂಭಗೊಂಡಿದೆ.
ಸಾಮಾಜಿಕ ಸೇವೆಯ ದ್ಯೋತಕವನ್ನಿಟ್ಟುಕೊಂಡು ಹುಟ್ಟು ಹಾಕಿರುವ ಈ ಸಂಸ್ಥೆಯ ಮೂಲ ಕನಸು ಯುವ ಉದ್ಯಮಿ ಕಿರಣ್ ದೇವಾಡಿಗ ಅವರದ್ದು. ಇವರು ಇವರ ತಂದೆ ಭಾಗ್ಯಜ್ಯೋತಿ ಇಂಡಸ್ಟ್ರೀಸ್ನ ಮಾಲಕ ಶ್ರೀ ಲಕ್ಷಣ್ ದೇವಾಡಿಗರಂತೆ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಾಮಾಜಿಕ ಸೇವಾ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ಅತೀ ಉತ್ಸಾಹದ ಯುವ ಚಿಲುಮೆ.
ಇವರ ಈ ಕನಸಿನ ಕೂಸಿಗೆ ನೀರೆರೆದು ಪೋಷಿಸಲು ಇವರೊಂದಿಗೆ ಕೈ ಜೋಡಿಸಿರುವವರು ರಾಕೇಶ್ ದೇವಾಡಿಗ, ನಿಶಾನ್, ಶ್ರೀಮತಿ ಶೀಲಾ ಡಿಸೋಜ, ಆಸೀಫ್, ಉಮೇಶ್ ದಂಡೆಕೇರಿ ಹಾಗೂ ಲಿಖಿತ್ ಕೋಟ್ಯಾನ್. ಮಾತ್ರವಲ್ಲದೇ ಕಿರಣ್ ಅವರ ಕುಟುಂಬ ಪರಿವಾರದ ಎಲ್ಲಾ ರೀತಿಯ ಸಹಕಾರ ಕೂಡ ಈ ಸಂಸ್ಥೆಗಿದೆ.
ಸಂಸ್ಥೆಯ ಮೂಲ ಉದ್ದೇಶಗಳು :
1, ಹಿರಿಯ ನಾಗರೀಕರಿಗೆ ಸೇವೆಗಳು. 2, ಭಾರತೀಯ ಸೈನಿಕರಿಗೆ, ನಿವೃತಿ ಸೈನಿಕರಿಗೆ ವಿಶೇಷವಾದ ಸೇವೆ ಸಲ್ಲಿಸುವುದು.3, ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಆರೋಗ್ಯದ ಬಗ್ಗೆ ಕಾಳಾಜಿ, 4, ರಕ್ತದಾನ ಶಿಬಿರ. 5, ಎಲ್ಲಾ ಧರ್ಮದ ಹಬ್ಬಗಳಲ್ಲಿ ಪಾಲ್ಗೊಂಡು ಎಲ್ಲಾ ಧರ್ಮದೊಂದಿಗೆ ಅನ್ಯೋನ್ಯತೆಯಿಂದ ಇರುವುದು.
ವರದಿ / ಚಿತ್ರ : ಸತೀಶ್ ಕಾಪಿಕಾಡ್