ಮಂಗಳೂರು ಜುಲೈ 11 : ಇತ್ತೀಚಿನ ದಿನಗಳಲ್ಲಿ ರೈತರು ಸಹಕಾರ ಸಂಘಗಳಿಂದ ಮತ್ತು ಖಾಸಗಿ ಲೇವಾದೇವಿ/ ಹಣಕಾಸು ಸಂಸ್ಥೆಗಳಿಂದ ಸಾಲ ಪಡಕೊಂಡು ಸಾಲ ಮರುಪಾವತಿಸಲು ಅಶಕ್ತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ.
ಕರ್ನಾಟಕ ಲೇವಾದೇವಿ ಕಾಯ್ದೆ ಹಾಗೂ ಗಿರವಿ ಕಾಯ್ದೆಯಡಿ ಪರವಾನಗಿ ಪಡಕೊಂಡ ಲೇವಾದೇವಿಗಾರರು, ಹಣಕಾಸು ಸಂಸ್ಥೆಗಳು ಹಾಗೂ ಗಿರವಿದಾರರು ಕರ್ನಾಟಕ ಲೇವಾದೇವಿ ಕಾಯ್ದೆ 1961 ಕಲಂ 28 ರ ಪ್ರಕಾರ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ.14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 16 ರ ಬಡ್ಡಿ ದರ ಮಾತ್ರ ವಿಧಿಸಬೇಕಾಗಿದೆ. ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ಸಾಲಗಳ ಮೇಲೆ ವಿಧಿಸಿ ವಸೂಲಿ ಮಾಡಿದ್ದಲ್ಲಿ, ಕರ್ನಾಟಕ ಲೇವಾದೇವಿ ಕಾಯ್ದೆ 1961 ಕಲಂ 39 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಅತ್ಯಧಿಕ ಬಡ್ಡಿಯೊಂದಿಗೆ ಸಾಲ ವಸೂಲಿ ಮಾಡಿ ರೈತರನ್ನು ಸಂಕಷ್ಟಕ್ಕೆ ಒಳಪಡಿಸಿ ಅಹಿತಕರ ಘಟನೆ ಸಂಭವಿಸಿದಲ್ಲಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ದ ಕಾನೂನಿನ ರೀತ್ಯಾ ಕ್ರಮಕೈಗೊಳ್ಳಲಾಗುವುದೆಂದು ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ ಎಚ್ಚರಿಕೆ ನೀಡಿದ್ದಾರೆ.