ಕುಂದಾಪುರ: ಮಗಳನ್ನು ಶಾಲೆಗೆ ಬಿಡಲು ಹೋಗುವ ಸಂದರ್ಭ ತಾಯಿ ಹಾಗೂ ಮಗಳು ಕಾಲು ಸಂಕದ ಮೇಲೆ ನಡೆದು ಹೋಗುತ್ತಿರುವಾಗ ಏಳು ವರ್ಷದ ಮಗಳು ಕಾಲು ಜಾರಿ ಹರಿಯುವ ನೀರಿನಲ್ಲಿ ಬಿದ್ದು ಕೊಚ್ಚಿ ಹೋದ ಘಟನೆ ಕುಂದಾಪುರದ ಮಾರಣಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮಾರಣಕಟ್ಟೆ ಸನ್ಯಾಸಿಬೆಟ್ಟು ನಿವಾಸಿ ಶೇಖರ ದೇವಾಡಿಗ ಮತ್ತು ಜಲಜಾ ಅವರ ಪುತ್ರಿ ಮೂರನೇ ತರಗತಿ ವಿದ್ಯಾರ್ಥಿನಿ ವಿಸ್ಮಯ (7) ಹೊಳೆನೀರಿನಲ್ಲಿ ಕೊಚ್ಚಿಹೋದ ಬಾಲಕಿ.
ಘಟನೆ ವಿವರ: ಮಾರಣಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ವಿಸ್ಮಯ ದೇವಾಡಿಗ ಪ್ರತಿಭಾನ್ವಿತೆಯಾಗಿದ್ದಳು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ತನ್ನ ತಾಯಿಯೊಂದಿಗೆ ಶಾಲೆಯತ್ತ ರೈನ್-ಕೋಟ್ ಧರಿಸಿ ಹೆಜ್ಜೆ ಹಾಕಿದ್ದಾಳೆ. ಮನೆ ಸಮೀಪದ ಚಕ್ರಾ ನದಿ ದಾಟಲು ಅಳವಡಿಸಿದ್ದ ಕಾಲುಸಂಕದ ಬಳಿ ತಾಯೊಯೊಂದಿಗೆ ತೆರಳುತ್ತಿರುವಾಗ ಆಕೆ ತಾಯಿಯ ಕಣ್ಣೆದುರೇ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾಳೆ. ಇದೇ ಸಂದರ್ಭ ತಾಯಿ ಅಸಹಾಯಕ ಸ್ಥಿತಿಯಲ್ಲಿದ್ದು ಹಿಂಬದಿಯಿಂದ ಬರುತ್ತಿದ್ದ ಭಾಸ್ಕರ್ ಎನ್ನುವಾತ ಕೂಡಲೇ ನೀರಿಗೆ ಧುಮುಕಿ ಆಕೆಯ ರಕ್ಷಣೆಗೆ ಮುಂದಾದರೂ ಕೂಡ ನೀರಿನ ಸೆಳೆತ ಜಾಸ್ಥಿಯಿದ್ದ ಕಾರಣ ಆಕೆಯ ರಕ್ಷಣೆ ಸಾಧ್ಯವಾಗಿಲ್ಲ.
ಸ್ಥಳಕ್ಕೆ ಶಾಸಕರ ಭೇಟಿ: ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು. ಇದೇ ಸಂದರ್ಭ ಮಾತನಾಡಿದ ಅವರು ವಿಸ್ಮಯ ಕುಟುಂಬಕ್ಕೆ ಅತೀ ಶೀಘ್ರವೇ ಪರಿಹಾರ ತಲುಪಿಸಿವಲ್ಲಿ ಸಂಬಂದಪಟ್ಟವರ ಬಳಿ ಮಾತನಾಡಲಾಗುವುದು. ಅಲ್ಲದೇ ಕೂಡಲೇ ಕಾಲು ಸಂಕದ ಬದಲಿಗೆ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುತ್ತೇವೆ ಎಂದರು. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ. ಸದಸ್ಯೆ ಇಂದಿರಾ ಶೆಟ್ಟಿ, ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಸೇರಿದಂತೆ ಶಾಲೆಯ ಶಿಕ್ಷಕರು, ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಶೋಧ ಕಾರ್ಯಾಚರಣೆ ವಿಫಲ: ಘಟನೆ ನಡೆದ ತಕ್ಷಣವೇ ಘಟನಾ ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳ ಆಗಮಿಸಿದ್ದು ಶುಕ್ರವಾರ ಸಂಜೆವರೆಗೂ ವಿಸ್ಮಯಾ ಮ್ರತದೇಹದ ಶೋಧ ಕಾರ್ಯ ನಡೆದಿದ್ದು ನೀರಿನ ರಭಸ ಜೋರಾಗಿದ್ದ ಕಾರಣ ಆಕೆಯ ಶವವಿನ್ನು ಪತ್ತೆಯಾಗಿಲ್ಲ.