ಮಂಗಳೂರು, ಜುಲೈ.09 : ಮಕ್ಕಳ ಸಂರಕ್ಷಣೆಗಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ರಾಜ್ಯಾಧ್ಯಕ್ಷೆಯಾಗಿ ನೇಮಕಗೊಂಡಿರುವ ಕೃಪಾ ಅಮರ್ ಆಳ್ವ ತಿಳಿಸಿದ್ದಾರೆ.
ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿರುವ ಸುಮಾರು 6 ಕೋಟಿ ಜನಸಂಖ್ಯೆಯಲ್ಲಿ 2.2 ಕೋಟಿ ಮಕ್ಕಳಿದ್ದು, ಪ್ರತೀ ಮಕ್ಕಳ 18 ವರ್ಷದೊಳಗಿನ ಶಿಕ್ಷಣ, ಪೋಷಣೆ, ಹಾಸ್ಟೆಲ್ ಮತ್ತಿತರ ವಿಷಯಗಳು ತನ್ನ ವ್ಯಾಪ್ತಿಗೆ ಬರಲಿದ್ದು, ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಕೃಪಾ ಆಳ್ವ ತಿಳಿಸಿದರು.
ತಾನು ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅವರು ತನ್ನನ್ನು ಕರೆ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡಾಗ ಅವರಿಗೆ ಗೌರವಪೂರ್ವಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ್ದೇನೆ ಎಂದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಅಮರನಾಥ್ ಶೆಟ್ಟಿ ಮಾತನಾಡಿ, ಕೃಪಾ ಅಮರ್ ಆಳ್ವರ ಸಮಾಜ ಸೇವೆಯನ್ನು ಗುರುತಿಸಿ ಸರಕಾರ ಮಹತ್ತರ ಹುದ್ದೆಯನ್ನು ನೀಡಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷ ಸದಾನಂದ ಶೆಟ್ಟಿ ವಹಿಸಿದ್ದರು. ಅವರ ಪತ್ನಿ ಮೈನಾ ಎಸ್.ಶೆಟ್ಟಿ, ಪಾದೆ ಅಜಿತ್ ರೈ, ಭುಜಂಗ ಶೆಟ್ಟಿ, ರಾಮಚಂದ್ರ ಶೆಟ್ಟಿ, ಟ್ರಸ್ಟ್ನ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಾದೋಡಿ ಉದಯ್ ರೈ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಉಪನ್ಯಾಸಕಿ ಭವ್ಯಶ್ರೀ ಶೆಟ್ಟಿ ಅವರು ಕೃಪಾ ಆಳ್ವರ ಪರಿಚಯ ಮಾಡಿದರು. ಪುಷ್ಪರಾಜ್ ಶೆಟ್ಟಿ ವಂದಿಸಿದರು.