ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಚರಣೆಯೊಂದರಲ್ಲಿ ಮಂಗಳೂರು ನಗರದ್ಯಾದಂತ ಯುವಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿ ಆತನಿಂದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ದಿನಾಂಕ: 07-07-2015 ರಂದು ಮಂಗಳೂರು ನಗರದ ಹಳೇ ಬಂದರಿನ ಹುಲ್ಲ್ಲಿನ ಧಕ್ಕೆಯ ಬಳಿ ಕಪ್ಪು ಬಣ್ಣದ ನಂಬರ್ ಪ್ಲೇಟ್ ಅಳವಡಿಸದ ಹೊಸ ಹೊಂಡಾ ಅಕ್ಟಿವಾ ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಅಬ್ದುಲ್ ರಹೀಂ @ ಗೂಡ್ಸ್ ರಹೀಂ @ ಕಂಡಿ ರಹೀಂ, ಪ್ರಾಯ(40), ತಂದೆ: ಅಬ್ದುಲ್ ಅಜೀಜ್ @ ಗೂಡ್ಸ್ ಅಜೀಜ್, ವಾಸ: ಹಝಾರ್ ಮಂಜಿಲ್, ಅನ್ಸಾರಿ ಕ್ರಾಸ್ ರಸ್ತೆ, ಬಂದರು, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಸುಮಾರು 1.35 ಕಿಲೋ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್ ಗಳಲ್ಲಿ ಮಾಡಿ ಅದನ್ನು ಮಂಗಳೂರು ನಗರದ ಕಾಲೇಜು ಹಾಗೂ ವಿದ್ಯಾಸಂಸ್ಥೆಗಳ ಬಳಿಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೇ ಒಂದು ವಾರದ ಹಿಂದೆ ಈತನ ಅಣ್ಣ ಫಾರೂಕ್ ಹಾಗೂ ಇಕ್ಬಾಲ್ ಎಂಬಾತನನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ದಸ್ತಗಿರಿ ಮಾಡಿ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.
ಪೊಲೀಸರು ದಾಳಿ ಮಾಡಿದ ಸಮಯ ಈತನು ತಪ್ಪಿಸಿಕೊಂಡಿದ್ದನು. ಆರೋಪಿ ಅಬ್ದುಲ್ ರಹೀಂ ನಿಂದ ಸುಮಾರು 20,000/- ಮೌಲ್ಯದ ಸುಮಾರು 1.35 ಕೆಜಿ ಗಾಂಜಾ, 2 ಚಿನ್ನದ ಚೈನ್, 2 ಉಂಗುರ, 2 ಮೊಬೈಲ್ ಫೋನ್ ಹಾಗೂ ಗಾಂಜಾವನ್ನು ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಹೊಸ ಹೊಂಡಾ ಅಕ್ಟಿವಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,40,000/- ಆಗಬಹುದು. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಶ್ರೀ.-ಕೆ.ಎಂ. ಶಾಂತರಾಜು, ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.