ಮಂಗಳೂರು,ಜುಲೈ.03: ಮಂಗಳೂರು ಪ್ರಾದೇಶಿಕ ಪರವಾನಿಗೆ ಇಲ್ಲದೆಯೇ ಓಲಾ ಕ್ಯಾಬ್ ಹೆಸರಿನಲ್ಲಿ ಮಂಗಳೂರಿನಲ್ಲಿ ಅನಧಿಕೃತ ಟ್ಯಾಕ್ಸಿ ವ್ಯವಹಾರ ನಡೆಸುತ್ತಿರುವ ಟ್ಯಾಕ್ಸಿ ಸೇವಾ ಸಂಸ್ಥೆಯ ಕ್ರಮವನ್ನು ವಿರೋಧಿಸಿ ದ.ಕ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಆಸೋಸಿಯೇಶನ್ ವತಿಯಿಂದ ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಮೊದಲಿಗೆ ಜ್ಯೋತಿ (ಅಂಬೇಡ್ಕರ್ ವೃತ್ತ) ವೃತ್ತದಿಂದ ನೆಹರೂ ಮೈದಾನದವರೆಗೆ ಪ್ರತಿಭಟನಾ ಜಾಥ ನಡೆಯಿತು.
ಬಳಿಕ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಲಾರಿ ಮಾಲಕ ಒಕ್ಕೂಟ ಸಂಘದ ಅಧ್ಯಕ್ಷ ಜೆ.ಆರ್.ಶಣ್ಮುಗಪ್ಪ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರ ಮೋಟಾರು ವಾಹನ ಕಾಯಿದೆಯನ್ನು ಪಾಲಿಸದೆ, ಸಿಟಿ ಟ್ಯಾಕ್ಸಿಯ ಅನುಮತಿ ಪಡೆಯದೇ, ಓಲಾ ಕ್ಯಾಬ್ ನವರು ಕಳೆದ ಐದು ತಿಂಗಳಿನಿಂದ ಅನಧಿಕೃತವಾಗಿ ಟ್ಯಾಕ್ಸಿ ವ್ಯವಹಾರ ನಡೆಸುತ್ತಿದ್ದಾರೆ.ಇದರಿಂದ ಹಲವು ವರ್ಷಗಳಿಂದ ಟ್ಯಾಕ್ಸಿ ಉದ್ಯಮವನ್ನೇ ನಂಬಿ ಜೀವನ ನಡೆಸುತ್ತಿರುವ ಸಾಂಪ್ರದಾಯಿಕ ಪ್ರವಾಸಿ ವಾಹನ ಚಾಲಕ – ಮಾಲಕರಿಗೆ ತೊಂದರೆಯಾಗಿದೆ ಎಂದು ಹೇಳಿದರು.
ದ.ಕ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಆಸೋಸಿಯೇಶನ್ ಸಂಘದ ಪ್ರಧಾನ ಕಾರ್ಯಾದರ್ಶಿ ಆನಂದ್ ಕೆ, ಪ್ರವಾಸಿ ವಾಹನ ಮಾಲಕ ಒಕ್ಕೂಟದ ಅಧ್ಯಕ್ಷ ರೋಶನ್ ಪಿಂಟೋ, ಟ್ಯಾಕ್ಸಿ ಮ್ಯಾನ್ ಅಸೋಶಿಯೇಶನ್ ಉಡುಪಿ ಇದರ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಹಾಗೂ ಮತ್ತಿತ್ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.