ಮಂಗಳೂರು,ಜುಲೈ.03: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆದೋರಿರುವ ಸಾಂಕ್ರಾಮಿಕ ರೋಗ ತಡೆಗಟ್ಟುವನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿರುವ ಎಲ್ಲಾ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ನೆರವು ಪಡೆದು ವ್ಯಾಪಕ ಚಿಕಿತ್ಸೆ, ಜಾಗೃತಿ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲಾ ವೈದ್ಯಕೀಯ ಕಾಲೇಜುಗಳ ಸಭೆ ಕರೆಯಬೇಕು. ಈ ಮೂಲಕ ಆರೋಗ್ಯ ಇಲಾಖೆ ಜನರಲ್ಲಿ ಆತಂಕದ ಬದಲು ಆತ್ಮವಿಶ್ವಾಸ ಮೂಡಿಸಬೇಕು ಎಂದು ಸಂಸದ ನಳಿನ್ ಕುಮಾರ್ ಸೂಚಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಡೆಂಗೆ, ಮಲೇರಿಯಾ, ಇಲಿ ಜ್ವರ, ಎಚ್1 ಎನ್1 ಹೀಗೆ ನಾನಾ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶದಲ್ಲಿ ವೈದ್ಯರ ವ್ಯವಸ್ಥೆ ಮಾಡಬೇಕಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡುವಾಗ 100ಬೆಡ್ ಉಚಿತವಾಗಿ ನೀಡಬೇಕು ಎಂಬ ಷರತ್ತು ಇದೆ. ಈ ಸಂದರ್ಭ ಇದರ ಸಂಪೂರ್ಣ ಪ್ರಯೋಜನವನ್ನು ಸರಕಾರ ಪಡೆದುಕೊಳ್ಳಬೇಕು. ಯಾವುದಾದರೂ ವೈದ್ಯಕೀಯ ಸಂಸ್ಥೆ ಸಹಕಾರ ನೀಡಲು ನಿರಾಕರಿಸಿದರೆ, ಅಂತವರ ವರದಿ ನಮಗೆ ನೀಡಿ. ನಾವು ಕೇಂದ್ರ ಸರಕಾರದ ಆರೋಗ್ಯ ಸಚಿವರು ಹಾಗೂ ಎಂಸಿಐಗೆ ನಾವು ಬರೆಯುತ್ತೇವೆ ಎಂದು ಹೇಳಿದರು.
ಮೆಡಿಕಲ್ ಕಾಲೇಜಿನ ಪಿಜಿಗಳ ಸೇವೆಯನ್ನು ಗ್ರಾಮೀಣ ಪ್ರದೇಶದಲ್ಲಿ ಬಳಸಿಕೊಳ್ಳಬಹುದು. ಹಾಗೆಯೇ ಎಂಎಸ್ಡಬ್ಲ್ಯುನ ವಿದ್ಯಾರ್ಥಿಗಳನ್ನು ಆರೋಗ್ಯ ಜಾಗೃತಿಗಾಗಿ ಬಳಸಬಹುದು ಎಂದು ಅವರು ಸಲಹೆ ನೀಡಿದರು.
ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ 1446 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಖಚಿತ ಹಾಗೂ ಒಂದು ಶಂಕಿತ ಡೆಂಗ್ಯು ಸಾವು ಸಂಭವಿಸಿದೆ. 1966 ಮಲೇರಿಯಾ ಪ್ರಕರಣ ದಾಖಲಾಗಿದ್ದು, ನಾಲ್ಕು ಸಾವು ಸಂಭವಿಸಿದೆ. ಚಿಕೂನ್ ಗುನ್ಯ ಪ್ರಕರಣ ದಾಖಲಾಗಿಲ್ಲ. 25 ಇಲಿ ಜ್ವರ ಪ್ರಕರಣ ದಾಖಲಾಗಿದೆ. 108ಎಚ್1 ಎನ್1 ಪ್ರಕರಣಗಳು ವರದಿಯಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಇದಕ್ಕೆ ಅಗತ್ಯ ಔಷಧಿಗಳು ಇವೆ. ನಾಯಿ ಮತ್ತು ಹಾವು ಕಚ್ಚಿದ್ದಕ್ಕೂ ಸೂಕ್ತ ಔಷಧ ಸ್ಟಾಕ್ ಇದೆ ಎಂದು ಹೇಳಿದರು.
ಜನಧನ್ : ಜಿಲ್ಲೆಯಲ್ಲಿ ಜನಧನ್ ಸೇರಿದಂತೆ ಸರಕಾರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕುರಿತಂತೆ ಬ್ಯಾಂಕ್ನ ಜನರಲ್ ಮ್ಯಾನೇಜರ್ಗಳ ಸಭೆ ಕರೆಯಬೇಕು. ಇದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಜರಾಗಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.
ಜಿಲ್ಲೆಯಲ್ಲಿ ಯೋಜನೆ ಯಶಶ್ವಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಕೆಲವು ಬ್ಯಾಂಕ್ ಮ್ಯಾನೇಜರ್ಗಳಿಗೆ ದುರಾಹಂಕಾರ ಇದೆ. ಬಡವರು ಬಂದರೆ ಸರಿಯಾಗಿ ಸ್ಪಂದನೆಇಲ್ಲ. ಮಾಹಿತಿ ನೀಡುವುದಿಲ್ಲ. ಇದಕ್ಕಾಗಿ ತಕ್ಷಣ ಎಲ್ಲಾ ಬ್ಯಾಂಕ್ಗಳ ಜನರಲ್ ಮ್ಯಾನೇಜರ್ಗಳ ಸಭೆ ನಡೆಸಬೇಕು. ನಮ್ಮಲ್ಲಿ ಜನಧನ್ ಒಟ್ಟು ಎಷ್ಟು ಖಾತೆಗಳಿವೆ. ಎಷ್ಟು ಖಾತೆ ಸಕ್ರಿಯವಾಗಿವೆ, ಓಡಿ ಸೌಲಭ್ಯ ಎಷ್ಟು ಮಂದಿ ಪಡೆದುಕೊಂಡಿದ್ದಾರೆ. ಅಟಲ್ ಪಂಚಣಿ ಯೋಜನೆ ಎಷ್ಟು ಮಂದಿ ಪಡೆದಿದ್ದಾರೆಮಾಹಿತಿಯನ್ನು 15 ದಿನದೊಳಗೆ ನೀಡಬೇಕು ಎಂದರು.
ಜನಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಲೀಡ್ ಬ್ಯಾಂಕ್ ಅಧಿಕಾರಿ, ಜಿಲ್ಲೆಯಲ್ಲಿ ಒಟ್ಟು 1,60,000 ಅಕೌಂಟ್ ತೆರೆಯಲಾಗಿದೆ. 2,15,000ರೂಪೇ ಕಾರ್ಡ್ ವಿತರಿಸಲಾಗಿದೆ. ಇದರಲ್ಲಿ ಶೇ.30ರಷ್ಟು ಆ್ಯಕ್ಟಿವೇಟ್ ಆಗಿಲ್ಲ. ಜಿಲ್ಲೆಯಲ್ಲಿ ಬ್ಯಾಂಕ್ನ 590ಶಾಖೆಗಳಿವೆ. ಜಿಲ್ಲೆಯಲ್ಲಿ ಜನಧನ್ ಯೋಜನೆಯಲ್ಲಿ ಐದು ಮಂದಿಗೆ ಪರಿಹಾರ ನೀಡಲಾಗಿದೆ.ಆಟಲ್ ಪಿಂಚಣಿಯಲ್ಲಿ ಜಿಲ್ಲೆಯಲ್ಲಿ ಒಂದು ಸಾವಿರಮಂದಿ ಪಡದಿದ್ದಾರೆಎಂದರು.
ಇಂದಿರಾ ಅವಾಜ್ : 2014-15ನೇ ಸಾಲಿನಲ್ಲಿ ಇಂದಿರಾ ಅವಾಜ್ ಯೋಜನೆಯಂತೆ ಜಿಲ್ಲೆಗೆ 2573ಮನೆಗಳು ಮಂಜೂರಾಗಿದ್ದು, 455ಪೂರ್ಣಗೊಂಡಿದೆ, 1473 ಪ್ರಗತಿಯಲ್ಲಿದೆ. 2015-16ನೇ ಸಾಲಿನಲ್ಲಿ 3182 ಮಜೂರಾತಿ ಯಾಗಿದೆ. ಆದರೆ ಅಧಿಕಾರಿಗಳು ನೀಡುವ ಮಾಹಿತಿ ಮತ್ತು ಕಾಮಗಾರಿಯ ಮಾಹಿತಿಗಳೂ ಸಮರ್ಪಕವಾಗಿಲ್ಲ ಎಂದು ಗರಂ ಆದ ಸಂಸದರು, ಈ ಬಗ್ಗೆ ಅಧಿಕಾರಿಗಳು ಪ್ರತ್ಯೇಕಸಭೆ ಕರೆದು, ಪರಿಶೀಲನೆ ನಡೆಸಬೇಕು. ಯೋಜನೆಗೆ ವೇಗ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆಶಾ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ಐ ಶ್ರೀವಿದ್ಯಾಉಪಸ್ಥಿತರಿದ್ದರು.