ಉಳ್ಳಾಲ,ಜುಲೈ.01 : ಕೊಣಾಜೆ ಸಮೀಪದ ಜೋಡುಕಟ್ಟೆ ಎಂಬಲ್ಲಿ ಹಾರ್ಡ್ ವೇರ್ ಅಂಗಡಿಯೊಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿ ಯಾಗಿದ್ದು, ಸುಮಾರು 35 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಹರೇಕಳ ಕಿಸಾನ್ ನಗರ ಸಾಹುಲ್ ಹಮೀದ್ ಎಂಬವರಿಗೆ ಸೇರಿದ ಹಾರ್ಡ್ ವೇರ್ ಅಂಗಡಿ ಬೆಂಕಿಗೆ ಆಹುತಿ ಯಾಗಿದ್ದು, ಬೆಂಕಿಗೆ ಕಾರಣಗಳು ತಿಳಿದು ಬಂದಿಲ್ಲ.
ಬಡ ಕುಟುಂಬದಿಂದ ಬಂದಿರುವ ಸಾಹುಲ್ ಹಮೀದ್ ತನ್ನ ಸಹೋದರರೊಂದಿಗೆ ಸೇರಿ ಕಳೆದ ಎರಡು ವರ್ಷಗಳಿಂದ ಶ್ರಮ ವಹಿಸಿ ಅಂಗಡಿ ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಉತ್ತಮ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಪ್ರತೀ ದಿನ ಅಂಗಡಿ ಮುಚ್ಚುವಾಗ ಕರೆಂಟ್ ಮ್ಯನ್ ಸ್ವಿಚ್ ಆಫ್ ಮಾಡಿ ಹೋಗುತ್ತಿದ್ದುದಾಗಿ ತಿಳಿಸಿರುವ ಅವರು ಸಾರ್ಟ್ ಸರ್ಕ್ಯುಟ್ನಿಂದ ಬೆಂಕಿ ಅವಘಡ ಆಗಿರುವ ಸಾದ್ಯತೆ ಇಲ್ಲ ಎಂದಿದ್ದಾರೆ. ಬುಧವಾರ ನಸುಕಿನ ವೇಳೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದವರು ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅದಾಗಲೇ ಬೆಂಕಿಯಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು.
ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿದ್ದು , ಅಂಗಡಿಯೊಂದಿಗೆ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದೆ. ಮತ್ತು ಪಕ್ಕದಲ್ಲಿದ್ದ ಪ್ಯಾನ್ಸಿ ಸೆಂಟರ್ಗೆ ನಷ್ಟವಾಗಿದೆ.
ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಜಿಲ್ಲಾ ಪಂಚಾಯತ್ ಸದಸ್ಯ ಎನ್ಎಸ್ ಕರೀಂ, ತಾಲೂಕು ಪಂಚಾಯತ್ಸದಸ್ಯ ಮಹಮ್ಮದ್ ಮುಸ್ತಾಫ ಆಗಮಿಸಿ ಅಂಗಡಿ ಮಾಲೀಕರಿಗೆ ಸಾಂತ್ವಾನ ಹೇಳಿದರು. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.