ಮಂಗಳೂರು, ಜೂ.30: ಕಡಿತಗೊಳಿಸಿದ ಗೌರವಧನ ವನ್ನು ತಕ್ಷಣ ಪಾವತಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ದ.ಕ. ಜಿಪಂಚಾಯತ್ ಕಚೇರಿ ಮುಂಭಾಗದಲ್ಲಿ ಮುಷ್ಕರ ನಡೆಯಿತು. ಹೊರಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೂಡ ಆಗಮಿಸಿ ಮುಷ್ಕರಕ್ಕೆ ಬೆಂಬಲ ನೀಡಿದರು.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಿ, ಗೌರವಧನ ಪಾವತಿ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ ಮುಷ್ಕರ ನಡೆಸಿರುವ ಪರಿಣಾಮ ಎಲ್ಲಾ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನ ಪಾವತಿ ಮಾಡಲಾಗಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ನಿರಂತರ ಮನವಿ ನೀಡಿದರೂ ಸಂಬಂಧಪಟ್ಟವರು ಕಡಿತಗೊಳಿಸಿದ ಗೌರವಧನ ಪಾವತಿ ಮಾಡುವ ಬಗ್ಗೆ ಗಮನ ಹರಿಸಿಲ್ಲ ಎಂದು ದೂರಿದರು.
ಶಾಸಕ ಜೆ. ಆರ್.ಲೋಬೊ ಮೂಲಕ ಇಲಾಖಾ ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ಮನವಿ ನೀಡಿದ ವೇಳೆ ಕಡಿತಗೊಳಿಸಿದ ಗೌರವಧನ ಪಾವತಿಸುವಂತೆ ಸಂಘದ ಪದಾಧಿಕಾರಿಗಳ ಸಮ್ಮುಖ ಶಾಸಕರು ಸಂಬಂಧಪಟ್ಟವರಿಗೆ ವೌಖಿಕ ನಿರ್ದೇಶನ ನೀಡಿದ್ದರೂ ಇಲಾಖಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆಪಾದಿಸಿದರು. ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್.ಮಾತನಾಡಿ, ಕಳೆದ 6 ತಿಂಗಳಿನಿಂದ ಸರಿಯಾಗಿ ಸಂಬಳ ನೀಡುತ್ತಿಲ್ಲ. ದಿಢೀರ್ ವರ್ಗಾವಣೆಯೂ ನಡೆಯುತ್ತಿದೆ. ಇದರಿಂದ ಅಂಗನವಾಡಿ ಕಾರ್ಯ ಕರ್ತೆಯರು ಆತಂಕಿತರಾಗಿದ್ದಾರೆ. ಮಧ್ಯಾಹ್ನದವರೆಗಿದ್ದ ಅವಧಿಯನ್ನು ಸಂಜೆ 4ರ ತನಕ ವಿಸ್ತರಿಸಿರುವು ದರಿಂದಾಗಿ ಹೆಚ್ಚಿನ ತೊಂದರೆ ಉಂಟಾಗಿದೆ. ಸಂಬಂಧಪಟ್ಟವರಿಗೆ ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಗೌರವಧನವನ್ನು ಶೀಘ್ರ ಪಾವತಿಸುವು ದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖಾಧಿಕಾರಿಗಳು ಭರವಸೆ ನೀಡಿದ ಮೇರೆಗೆ ಧರಣಿಯನ್ನು ಹಿಂದೆಗೆದುಕೊಳ್ಳಲಾಯಿತು.
ರಾಜ್ಯ ಕಾರ್ಯದರ್ಶಿ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ರೋಹಿಣಿ, ಜಿಲ್ಲಾ ಕಾರ್ಯದರ್ಶಿ ಚಂದ್ರಾವತಿ, ಉಪಾಧ್ಯಕ್ಷರಾದ ಕವಿತಾ ಪುತ್ತೂರು, ಸುಜಾತಾ ಪೆರ್ಮನ್ನೂರು, ಜತೆ ಕಾರ್ಯದರ್ಶಿ ಸಂಜೀವ ಬೆಳ್ತಂಗಡಿ, ಗೌರವ ಸಲಹೆಗಾರ್ತಿ ಅರುಣಾ ಪುತ್ತೂರು, ಸುಳ್ಯ ತಾಲೂಕು ಸಂಘದ ಖಜಾಂಚಿ ಲತಾ ಅಂಬೆಕಲ್ಲು ಪಾಲ್ಗೊಂಡಿದ್ದರು.