ಮಂಗಳೂರು, ಜೂನ್ .25: ಇಲ್ಲಿನ ಮೂಡುಶೆಡ್ಡೆ ಸಮೀಪದ ಫಲ್ಗುಣಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸಂದರ್ಭ ನೀರು ಪಾಲಾಗಿದ್ದ ಯುವಕರಿಬ್ಬರ ಪೈಕಿ ನೀರುಮಾರ್ಗ ನಿವಾಸಿ ರಮೇಶ್ ಎಂಬವರ ಮೃತದೇಹ ತೋಕೂರು ಬಳಿ ಪತ್ತೆಯಾಗಿದೆ. ನಾಪತ್ತೆಯಾಗಿರುವ ಇನ್ನೋರ್ವ ಯುವಕ ಟೋನಿ ತಾವರಿಸ್ಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ.
ಮಂಗಳವಾರ ಮಧ್ಯಾಹ್ನ ಮೂಡುಶೆಡ್ಡೆ ಸಮೀಪದ ತಾರಿಗುಡ್ಡೆ ನಿವಾಸಿ ಟೋನಿ (32) ಹಾಗೂ ನೀರುಮಾರ್ಗದ ನಿವಾಸಿ ರಮೇಶ್ (30) ಎಂಬವರು ದೀಪಕ್ ಎಂಬವರೊಂದಿಗೆ ಫಲ್ಗುಣಿ ನದಿ ತಟಕ್ಕೆ ಬಂದವರು ನದಿಗೆ ಇಳಿದಿದ್ದರು. ಈ ಸಂದರ್ಭ ನದಿಯ ಹರಿವಿನ ತೀವ್ರತೆ ತಿಳಿಯದೆ ಟೋನಿ ಹಾಗೂ ರಮೇಶ್ ನೀರಿನಲ್ಲಿ ಕೊಚ್ಚಿಹೋಗಿದ್ದರು.
ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ಸಿಬ್ಬಂದಿ, ತಣ್ಣೀರುಬಾವಿಯ ಲೈಫ್ಗಾರ್ಡ್ ಸಿಬ್ಬಂದಿ, ಮುಳುಗು ತಜ್ಞರು ನೀರುಪಾಲಾದ ಯುವಕರಿಗಾಗಿ ಮಧ್ಯಾಹ್ನವೇ ಹುಡುಕಾಟ ಆರಂಭಿಸಿದ್ದರು.
