ಮಂಗಳೂರು, ಜೂ.18: ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ವತಿಯಿಂದ ಕೇಂದ್ರ ಸರಕಾರದ ವಿವಿಧ ಕಾರ್ಯಕ್ರಮಗಳ ಛಾಯಾಚಿತ್ರ ಪ್ರದರ್ಶನ ಗುರುವಾರ ನಗರದ ಹಿಂದಿ ಪ್ರಚಾರ ಸಮಿತಿ ಹಾಲ್ನಲ್ಲಿ ನಡೆಯಿತು.
ಪ್ರದರ್ಶನವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಉದ್ಘಾಟಿಸಿದರು.
ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಎನ್ಡಿಎ ಸರಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಒಂದು ಸಾವಿರ ಕೋಟಿ ರೂ. ಹೂಡಿಕೆಯ ಪ್ಲಾಸ್ಟಿಕ್ ಮತ್ತು ಪಾಲಿಮರ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರಕಾರ ಎಂಆರ್ಪಿಎಲ್ ಸಮೀಪ 150 ಎಕರೆ ಜಾಗ ಕೊಟ್ಟಲ್ಲಿ ತನ್ನ ಇಲಾಖೆಯಿಂದ ಪಾರ್ಕ್ ನಿರ್ಮಿಸಲಿದ್ದು, ಇದರಿಂದ 20 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ ಎಂದರು.
ಸಿಎಂ ಮನವೊಲಿಸಲಿ: ಮಂಗಳೂರು ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಉಳಿಸಬೇಕಾದರೆ, ಕೊಚ್ಚಿನ್ ಪೆಟ್ರೋ ಟರ್ಮಿನಲ್ನಿಂದ 400 ಕಿ.ಮೀ. ದೂರದ ಮಂಗಳೂರಿಗೆ ಗ್ಯಾಸ್ ಪೈಪ್ಲೈನ್ ಅಳವಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಸಿಎಂ ಉಮ್ಮನ್ ಚಾಂಡಿ ಅವರ ಜತೆ ನೇರವಾಗಿ ಮಾತುಕತೆ ನಡೆಸಿ ಮನವೊಲಿಸಲಿ ಎಂದು ಅನಂತಕುಮಾರ್ ಹೇಳಿದರು.
ಎಂಸಿಎಫ್, ಮದ್ರಾಸ್ ಫರ್ಟಿಲೈಸರ್ಸ್ ಮತ್ತು ತಮಿಳುನಾಡಿನ ಟುಟಿಕೊರಿನ್ ರಸಗೊಬ್ಬರ ಕಾರ್ಖಾನೆಗಳು ನಾಫ್ತಾ ಮೂಲಕವೇ ನಡೆಯಲು ಕೇಂದ್ರದ ಮೋದಿ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ಸಾವಿರಾರು ಕಾರ್ಮಿಕರಿಗೆ ಉದ್ಯೋಗಾವಕಾಶ ಸಾಧ್ಯವಾಗಿದೆ. ಇಡೀ ದಕ್ಷಿಣ ಭಾರತದ ವಿಶೇಷವಾಗಿ ತಮಿಳುನಾಡು, ಕರ್ನಾಟಕ ಮತ್ತು ಕೇರಳದ ರೈತರಿಗೆ ಪ್ರತಿವರ್ಷ 15.5 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಾಗಿ, ರೈತರಿಗೆ ವರದಾನವಾಗಿದೆ ಎಂದು ಅವರು ಹೇಳಿದರು.
2007ರಲ್ಲಿ ಅಂದಿನ ಕೇಂದ್ರ ಸರಕಾರವು ನಾಫ್ತಾದಲ್ಲಿ ನಡೆಯುತ್ತಿರುವ ಎಂಸಿಎಫ್ನ್ನು ಗ್ಯಾಸ್ನಲ್ಲಿ ನಡೆಸಲು ನಿರ್ಧರಿಸಿತ್ತು. ಪೈಪ್ಲೈನ್ ಹಾಕಲು ಕೇರಳ ಸರಕಾರ ರೈಟ್ ಆಫ್ ವೇ ನೀಡದೆ ಸಮಸ್ಯೆ ಸೃಷ್ಟಿಯಾಗಿತ್ತು. ಕೊಚ್ಚಿನ್ ಪೆಟ್ರೋ ಟರ್ಮಿನಲ್ನಿಂದ 400 ಕಿ.ಮೀ. ದೂರದಲ್ಲಿರುವ ಮಂಗಳೂರಿಗೆ ನೇರವಾಗಿ ಪೈಪ್ಲೈನ್ ಹಾಕಿದರೆ ಎಂಸಿಎಫ್ ಹಲವು ವರ್ಷ ಕಾಲ ಗ್ಯಾಸ್ ಆಧಾರಿತ ಕೈಗಾರಿಕೆಯಾಗಿ ಉಳಿಯಲು ಅವಕಾಶವಾಗುತ್ತದೆ. ಈ ವಿಷಯದಲ್ಲಿ ನಾನು ಉಮ್ಮನ್ ಚಾಂಡಿ ಅವರಲ್ಲಿ ಮೂರು ಬಾರಿ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಮನವೊಲಿಸಲಿ ಎಂದರು.
ಒಂದು ವರ್ಷದ ಮೋದಿ ನೇತೃತ್ವದ ಸರಕಾರದಿಂದ ದೇಶದ ಜನತೆಗೆ ಭಾರಿ ಪ್ರಮಾಣದ ಸೇವೆ ಲಭ್ಯವಾಗಿರುವುದು ದೊಡ್ಡ ಸಾಧನೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ದೇಶದ ಕೀರ್ತಿ ಉತ್ತುಂಗಕ್ಕೆ ಏರಿದೆ. ನಾವು ವರ್ಷ ಪೂರೈಸಿದ ಆಚರಣೆ ಮಾಡುತ್ತಿಲ್ಲ, ಬದಲಿಗೆ ಯೋಜನೆಗಳನ್ನು ಬಡಜನರಿಗೆ ತಲುಪಿಸಲು ಪ್ರಚಾರ ಮಾಡುತ್ತೇವೆ. 20 ಸಾವಿರ ಪ್ರದೇಶಗಳಲ್ಲಿ ಪ್ರದರ್ಶನ ನಡೆಯುತ್ತಿದ್ದು, ಬಡವರಿಗೆ ಸೌಲಭ್ಯ ಕಲ್ಪಿಸಿ ಸಶಸಕ್ತೀರಣ ಆಗಬೇಕು ಎಂಬುದು ನಮ್ಮ ಯೋಜನೆ ಎಂದು ಅನಂತಕುಮಾರ್ ಹೇಳಿದರು.
ಲೋಕಸಭಾ ಸದಸ್ಯ ನಳಿನ್ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೊ,ಮಾಜಿ ಶಾಸಕ ಎನ್.ಯೋಗೀಶ್ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ರುಕ್ಮಯ ಪೂಜಾರಿ ಮತ್ತಿತ್ತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.