ಮಣಿಪಾಲ, ಜೂ.18: ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಕೇರಳ ರಾಜ್ಯದ ಏಳು ಮಂದಿಯನ್ನು ಮಣಿಪಾಲ ಹಾಗೂ ಡಿಸಿಐಬಿ ಪೊಲೀಸರು ಬುಧವಾರದಂದು ಬೆಳಗ್ಗೆ ಬಂಧಿಸಿದ್ದಾರೆ.
ಬಂಧಿತರನ್ನು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕುನ್ನತ್ತೂರ್ ತಾಲೂಕಿನ ಸೈಫ್(32), ಚವರಾ ತಾಲೂಕಿನ ನಿಸಾರ್ ಬಿ.(36), ಕರಿನಾಗಪಲ್ಲಿ ತಾಲೂಕಿನ ಶಹಜಹಾನ್(32), ಆಲಾಫಿ ಜಿಲ್ಲೆಯ ಮೊವೆಲ್ಕಂ ತಾಲೂಕಿನ ನದೀಂ ಸುನೀಲ್(23), ಪಲ್ಲಿಕಲ್ನ ಅಮೀನ್ ಎ.(23), ನಿಯಾಝ್(23), ಆಯ್ ಮೆನ್ ಎಂ.ಎಸ್.(26) ಎಂದು ಗುರುತಿಸಲಾಗಿದೆ. ಅವರಿಂದ ಒಟ್ಟು 575 ಕೆ.ಜಿ. ರಕ್ತ ಚಂದನ ಮರದ ತುಂಡುಗಳು, 8 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಪೆರಂಪಳ್ಳಿ ರಸ್ತೆಯ ಭಾರತೀಯ ಆಹಾರ ನಿಗಮದ ಗೋಡೌನ್ ಕಟ್ಟಡದ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಅಂಬಾಗಿಲು ರಸ್ತೆಯಿಂದ ಮಣಿಪಾಲದ ಕಡೆಗೆ ಬರುತ್ತಿದ್ದ ಪಿಕಪ್ ವಾಹನ, ಇನ್ನೋವಾ ಹಾಗೂ ರಿಡ್ಝ್ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿರುವುದು ಕಂಡುಬಂತು. ವಾಹನ, ಮರ ತುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಈ ರಕ್ತಚಂದನದ ಮರದ ತುಂಡುಗಳನ್ನು ಕೇರಳದಿಂದ ಮಣಿಪಾಲದ ಸಚಿನ್ ಶೆಟ್ಟಿ, ನೆಲ್ಸನ್, ಆಸ್ಟಿನ್ ಎಂಬವರಿಗೆ ಮಾರಾಟ ಮಾಡಲು ತೆಗೆದುಕೊಂಡು ಬಂದಿರುವುದಾಗಿ ಆರೋಪಿಗಳು ತನಿಖೆ ವೇಳೆ ಮಾಹಿತಿ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.