ಮಂಗಳೂರು : ಗೇರುಬೀಜ ಸಾಗಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿ (ಪಲ್ಟಿ) ಬಿದ್ದ ಪರಿಣಾಮ ಒಂದು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೋಮವಾರ ನಗರದ ಕುಂಟಿಕಾನ್ ಸಮೀಪದ ಎ.ಜೆ.ಆಸ್ಪತ್ರೆ ಬಳಿ ಕೇರಳ – ಮುಂಬಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಚಾಲಕ ಹಾಗೂ ಕಂಡಕ್ಟರ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ನಂತೂರು ಕಡೆಯಿಂದ ಬೈಕಂಪಾಡಿಗೆ ಗೇರುಬೀಜ ಸಾಗಿಸುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ್ದ ಈ ವಾಹನ ಅಕಸ್ಮಿಕವಾಗಿ ಮಗುಚಿಬಿದ್ದ ಪರಿಣಾಮ ವಾಹನದಲ್ಲಿದ್ದ ಹೆಚ್ಚಿನ ಪಾಲು ಗೇರುಬೀಜಗಳು ರಸ್ತೆಪಾಲಾಗಿವೆ. ಇದನ್ನು ಆರಿಸಲು ಸಾರ್ವಜನಿಕರು ಮುಗಿಬಿದ್ದ ಕಾರಣ ಕೆಲವು ಹೊತ್ತು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಕಿಲೋ ಮೀಟರ್ ಅಂತರದಲ್ಲಿ ವಾಹನಗಳು ಸಾಲು ಸಾಲಾಗಿ ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಚಾಲಕನ ಅತೀ ವೇಗ ಹಾಗೂ ಅಜಾಗಾರುಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣ ಕದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಕ್ರೇನ್ ಮೂಲಕ ಮಗುಚಿ ಬಿದ್ದ ವಾಹನವನ್ನು ಅಲ್ಲಿಂದ ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು. ಆದರೆ ಗೇರುಬೀಜ ಆರಿಸುವವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಮ್ಮ ಸತತ ಪರಿಶ್ರಮದಿಂದ ಪರಿಸ್ಥಿತಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು. ಮಾತ್ರವಲ್ಲದೇ ಘಟನಾ ಸ್ಥಳದಲ್ಲಿ ಸೇರಿದ್ದ ಜನರನ್ನು ಚದುರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.