ಕನ್ನಡ ವಾರ್ತೆಗಳು

ಹಸಿವು ಮುಕ್ತ ಭಾರತ ನಿರ್ಮಾಣ ಕಾಂಗ್ರೆಸ್‌ನ ಗುರಿ: ಆಸ್ಕರ್ ಫೆರ್ನಾಂಡಿಸ್

Pinterest LinkedIn Tumblr

ಕುಂದಾಪುರ: ಸಂವಿಂಧಾನದ ಆಶಯಗಳನ್ನು ಸಮಾಜದ ಕಟ್ಟಕಡೆಯ ಜನರಿಗೂ ತಲುಪಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಗ್ರಾಮ ಪಂಚಾಯಿತಿಗಳು ನಮ್ಮ ದೇಶದ ಆಡಳಿತ ವ್ಯವಸ್ಥೆಯ ಪಂಚಾಂಗಗಳಿದ್ದಂತೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

ಕುಂದಾಪುರದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ಶನಿವಾರ ಮಧ್ಯಾಹ್ನ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೇತ್ರತ್ವದಲ್ಲಿ ನಡೆದ ಪಂಚಾಯಿತಿ ಚುನಾವಣಾ ಸ್ಪರ್ಧಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Congress_Askar_Programme Congress_Askar_Programme (1)

ಗ್ರಾಮ ಪಂಚಾಯಿತಿಯ ಜನರಿಗೆ ಎರಡು ರೀತಿಯಲ್ಲಿ ಎಂ.ಪಿ ಗಳು ದೊರಕುತ್ತಾರೆ. ಒಬ್ಬರು ಮೆಂಬರ್ ಆಫ್ ಪಾರ್ಲಿಮೆಂಟ್ ಆದರೆ ಇನ್ನೊಬ್ಬರು ಮೆಂಬರ್ ಪಂಚಾಯಿತ್. ಇಬ್ಬರಿಗೂ ಮತದಾನ ಮಾಡುವ ಸಮಾನ ಅಧಿಕಾರವನ್ನು ಹೊಂದಿರುವ ಮತದಾರರ ಆಶಯ ಹಾಗೂ ಭಾವನೆಗಳಿಗೆ ಪ್ರತಿ ಸ್ಪಂದನ ನೀಡುವ ಕೆಲಸಗಳು ಜನಪ್ರತಿನಿಧಿಗಳಿಂದ ಆಗಬೇಕು. ಸರ್ಕಾರಗಳು ನೀತಿ ರೂಪಿಸುವ ಹೊಣೆಯನ್ನು ಹೊಂದಿದ್ದರೆ ಅದನ್ನು ಸಮರ್ಥವಾಗಿ ಜಾರಿಗೊಳಿಸುವ ಹೊಣೆ ಗ್ರಾಮ ಪಂಚಾಯಿತಿಗಳದ್ದು. ರಾಜೀವ್ ಗಾಂಧಿ ಪ್ರಧಾನ ಮಂತ್ರಿಗಳಾಗಿದ್ದಾಗ ಇದೆ ಕಾರಣಕ್ಕಾಗಿ ಪಂಚಾಯತ್, ಸಹಕಾರಿ ಹಾಗೂ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ಸಾಮಾನ್ಯ ಜನರ ಹಾಗೂ ಮಕ್ಕಳ ಅಭಿವೃದ್ದಿಯ ಬಗ್ಗೆ ಒತ್ತು ನೀಡಿದ್ದರು ಎನ್ನುವುದನ್ನು ವಿಶ್ಲೇಷಣೆ ಮಾಡಿದರು.

ಮುಂದುವರೆದು ಮಾತನಾಡಿದ ಅವರು ಹಿಂದೆ ವಿರೋಧ ಪಕ್ಷದವರು ಇಂದಿರಾ ಹಟಾವೋ ಎಂದಾಗ ಪ್ರತಿ ಸ್ಪಂದಿಸಿದ್ದ ಕಾಂಗ್ರೆಸ್ ಗರೀಬ್ ಹಟಾವೋ ಚಳುವಳಿಯ ಮೂಲಕ ಉತ್ತರ ನೀಡಿದ್ದೇವು. ಇದೀಗ ಕಾಂಗ್ರೆಸ್‌ನ್ನು ಈ ದೇಶದಿಂದ ಮುಕ್ತಗೊಳಿಸುತ್ತೇವೆ ಎಂದು ಹೇಳುತ್ತಿರುವ ವಿರೋಧ ಪಕ್ಷದವರಿಗೆ ಹಸಿವು ಮುಕ್ತ ಕರ್ನಾಟಕದ ಮೂಲಕ ಉತ್ತರ ನೀಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಹೇಳಿದ ಅವರು ಹಸಿವು ಮುಕ್ತ ಭಾರತ ನಿರ್ಮಾಣ ಕಾಂಗ್ರೆಸ್‌ನ ಗುರಿಯಾಗಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಬ್ಲೋಸೆಂ ಫೆರ್ನಾಂಡಿಸ್, ಕೆ.ಪಿ.ಸಿ.ಸಿ ಸದಸ್ಯ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಅಭಿಯಾನ ಸಮಿತಿಯ ಅಧ್ಯಕ್ಷ ಅಶೋಕಕುಮಾರ ಕೊಡವೂರು, ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಉಪಾಧ್ಯಕ್ಷ ಬಿ.ಹಿರಿಯಣ್ಣ, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರಾಜೂ ಎಸ್ ಪೂಜಾರಿ, ಕುಂದಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜೇಕಬ್ ಡಿಸೋಜಾ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾಸ ಹೆಗ್ಡೆ, ಮಾಜಿ ಜಿ.ಪಂ ಸದಸ್ಯ ದೇವಾನಂದ ಶೆಟ್ಟಿ ಇದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಕೋಣಿ ನಾರಾಯಣ ಆಚಾರ್ ನಿರೂಪಿಸಿದರು.

Write A Comment