ಉಳ್ಳಾಲ,ಜೂನ್. 10: ಕುಂಪಲ ಕೃಷ್ಣನಗರದಲ್ಲಿ ಅಪ್ರಾಪ್ತೆ ಯುವತಿಯೊಬ್ಬಳು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದ್ದು, ಆಕೆ ಬರೆದಿಟ್ಟಿರುವ ಡೆತ್ ನೋಟಲ್ಲಿ ಪೊಲೀಸ್ ಕಿರುಕುಳವೇ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಖ್ಯ ಕಾರಣ ಎಂದು ಉಲ್ಲೇಖಿಸಿ ದ್ದಾಳೆ. ಆತ್ಮಹತ್ಯೆಮಾಡಿಕೊಂಡ ಅಪ್ರಾಪ್ತೆಯನ್ನು ಕೃಷ್ಣನಗರ ನಿವಾಸಿ ನಿವೃತ್ತ ಶಿಕ್ಷಕಿ ಜಯಂತಿ ಎಂಬವರ ಸಾಕುಪುತ್ರಿ ಜ್ಯೋತಿ (17) ಎಂದು ತಿಳಿಸಿದ್ದಾರೆ.
ಘಟನೆಯ ವಿವರ :
ಜ್ಯೋತಿ ತಾಯಿ ಜಯಂತಿ ಎಂದಿನಂತೆ ಕುಂಪಲದ ಕೇಸರಿ ಮಿತೃ ವೃಂದದಲ್ಲಿ ನಡೆಯುತ್ತಿದ್ದ ಯೋಗ ತರಬೇತಿಗೆ ತೆರಳಿದಾಗ ಜ್ಯೋತಿ ಕೃತ್ಯ ಎಸಗಿದ್ದಾಳೆ. ಮನೆಗೆ ವಾಪಸ್ಸಾದಾಗ ಮನೆಯಲ್ಲಿ ಕೋಣೆಯ ಬಾಗಿಲು ಮುಚ್ಚಿದ್ದು, ನೆರೆಮನೆಯವರನ್ನು ಕರೆದು ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಜ್ಯೋತಿ ಮೃತದೇಹ ಪತ್ತೆಯಾಗಿದೆ. ಸೋಮೇಶ್ವರ ಪರಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮುಗಿಸಿರುವಾಕೆ, ಇದೀಗ ಬೆಸೆಂಟ್ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ಪದವಿಗೆ ಸೇರ್ಪಡೆಗೊಂಡು, ಇನ್ನಷ್ಟೇ ಕಾಲೇಜು ಆರಂಭವಾಗಬೇಕಿದೆ.
ಪೊಲೀಸ್ ಕಿರುಕುಳ ಆರೋಪ :
ಆಕೆ ಬರೆದಿಟ್ಟಿರುವ ಡೆತ್ ನೋಟಲ್ಲಿ ಫೇಸ್ ಬುಕ್ ನಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿರುವ ಪ್ರವೀಣ್ ಸಾಲ್ಯಾನ್ ಎಂಬಾತನ ಪರಿಚಯವಾಗಿ , ಮೊಬೈಲ್ ನಂಬರನ್ನು ನೀಡಿದ್ದೆನು. ಬಳಿಕ ಪ್ರೀತಿ ಮಾಡಲು ಆರಂಭಿಸಿದ್ದು, ಒಂದು ಬಾರಿ ಮುಖಾಮುಖಿ ಮಾತನಾಡಿದ್ದೆ. ಬಳಿಕ ಸಂಬಂಧಿಕರಲ್ಲಿ , ಗೆಳೆಯರಲ್ಲಿ ಮಾತನಾಡ ದಂತೆ ಒತ್ತಡ ಹೇರುತ್ತಿದ್ದ. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಒಡ್ಡುತ್ತಿದ್ದನಲ್ಲದೆ, ರೂ.1 ಲಕ್ಷ ಹಣ, ಮತ್ತು ಚಿನ್ನಕ್ಕಾಗಿ ಬೆದರಿಸಿದ್ದನೆನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟಲ್ಲಿ ಬರೆದಿಟ್ಟಿದ್ದಾಳೆ.
ಸ್ಥಳಕ್ಕೆ ಎಸಿಪಿ ಕಲ್ಯಾಣಿ ಸೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.