ಮಂಗಳೂರು,ಜೂನ್.06 : ಶಿಕ್ಷಣದಲ್ಲಿ ಡೋನೇಶನ್ ಹಾವಳಿಯ ಈ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಶಿಕ್ಷಣ ಪರಿಕರಗಳನ್ನು ನೀಡಿದ ದ.ಕ. ಜಿಲ್ಲಾ ಮಾಂಸ ವ್ಯಾಪಾರಸ್ಥರ ಸಂಘದ ಕೆಲಸ ಶ್ಲಾಘನೀಯ ಎಂದು ಬಂದರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಾಂತಾರಾಮ್ ತಿಳಿಸಿದ್ದಾರೆ.
ಜಮೀಯತುಲ್ ಮಾಂಸ ವ್ಯಾಪಾರಸ್ಥರ ಸಂಘದ ವತಿಯಿಂದ ಕುದ್ರೋಳಿಯ ಏವನ್ ಬಾಗ್ನಲ್ಲಿ ಆಯೋಜಿಸಲಾಗಿದ್ದ ಉಚಿತ ಪುಸ್ತಕ ವಿತರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಂಸ ವ್ಯಾಪಾರಸ್ಥರ ಸಂಘದ ರಾಜ್ಯಾಧ್ಯಕ್ಷ ಅಲಿಹಸನ್ ಮಾತನಾಡಿ ಸಂಘಟನೆಯ ವತಿಯಿಂದ ಈ ಬಾರಿ 2.6 ಲಕ್ಷ ರೂ. ವೆಚ್ಚದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಘಟನೆಯ ಅಧ್ಯಕ್ಷ ಜೆ. ಅಬ್ದುಲ್ ಖಾದರ್, ಪ್ರಮುಖರಾದ ಶಫುದ್ದೀನ್, ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.