ಮಂಗಳೂರು: ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ ಇಂದು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ವಕೀಲರ ಸಂಘ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಧೀಶೆ ಉಮಾ ಎಂ.ಜಿ., ಬೀಡಿ, ಸಿಗರೇಟು ಸಹಿತ ತಂಬಾಕು ಸೇವನೆಯ ಚಟವು ವ್ಯಕ್ತಿಯ ವೈಯಕ್ತಿಕ ನಾಶದೊಂದಿಗೆ ದೇಶವನ್ನು ಅಪಾಯದ ಸ್ಥಿತಿಗೆ ತಳ್ಳಲಿದೆ. ಹಾಗಾಗಿ ಈ ಕುರಿತು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಹಿಂದೆ ಬಸ್ಸುಗಳಲ್ಲಿ ಕಂಡುಬರುತ್ತಿದ್ದ ಧೂಮಪಾನ ಸೇವನೆ ಈಗ ಭಾಗಶಃ ಇಲ್ಲವಾಗಿದೆ. ಆದರೂ ಯುವಕರು ಇಂತಹ ಕೆಡುಕಿನ ವೈಭವೀಕರಣಕ್ಕೆ ಬೇಗ ಬಲಿಯಾಗುತ್ತಿದ್ದಾರೆ. ಕ್ಷಣಿಕ ಸುಖಕಾಗಿ ಆರಂಭಿಸುವ ಧೂಮಪಾನ ಬದುಕನ್ನು ನಾಶ ಮಾಡುವುದರಲ್ಲಿ ಸಂಶಯವಿಲ್ಲ. ಇದರ ವಿರುದ್ಧ ಹೋರಾಡಲು ಯುವ ಜನತೆ ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ನ್ಯಾಯಾಧೀಶೆ ಉಮಾ ಎಂ.ಜಿ. ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಕೇವಲ ಭಾಷಣ ಮಾಡಿ, ಸಹಿ ಪಡೆದು ಸರಕಾರಕ್ಕೆ ವರದಿ ಕೊಟ್ಟರೆ ಇಂಥ ಕಾರ್ಯಕ್ರಮ ಯಶಸ್ವಿ ಆಗುವುದಿಲ್ಲ. ಕೊಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಅಗತ್ಯವಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ. ಮಾತನಾಡಿದರು.ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ, ದ.ಕ. ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ನಗರ ಪೊಲೀಸ್ ಉಪಾಯುಕ್ತ ವಿಷ್ಣುವರ್ಧನ್ ಉಪಸ್ಥಿತರಿದ್ದರು.
ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಉದಯ ನಾಯಕ್ ಸ್ವಾಗತಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಕಿಶೋರ್ ಕುಮಾರ್ ವಂದಿಸಿದರು. ಎಎಸ್ಸೈ ಲೆನೆಟ್ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮೊದಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಆವರಣದಿಂದ ಪೊಲೀಸ್ ಆಯುಕ್ತರ ಕಚೇರಿ ತನಕ ತಂಬಾಕು ನಿಷೇಧ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ‘ತಂಬಾಕು ಸೇವನೆ ದುಷ್ಪರಿಣಾಮ’ ಕುರಿತು ಕೆಎಂಸಿ ಸಹಾಯಕ ಪ್ರಾಧ್ಯಾಪಕ ಡಾ.ವಾಮನ್ ಕುಲಕರ್ಣಿ ಮತ್ತು ‘ತಂಬಾಕು ನಿಷೇಧ ಕಾಯ್ದೆ- 2003’ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾಹಿತಿ ನೀಡಿದರು.