ಮಂಗಳೂರು: ಉತ್ತರ ಧಕ್ಕೆ ಬಂದರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಶನಿವಾರ ಕಚೇರಿ ಆವರಣದಲ್ಲಿ ನಡೆದ ಬಡ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಬೆಂಗ್ರೆ ಹಾಗೂ ಕಸ್ಬಾ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಶಿಕ್ಷಕರಿಗೆ ಉಚಿತ ಗುರುತಿನ ಚೀಟಿ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿದಾನಸಭಾ ಕ್ಷೇತ್ರ ಶಾಸಕ ಜೆ.ಆರ್.ಲೋಬೋ, ಬಡಮಕ್ಕಳಿಗೆ ಉಚಿತ ಪುಸ್ತಕ, ರೋಗಿಗಳಿಗೆ ನೆರವು ಹಾಗೂ ವಿವಿಧ ರೀತಿಯದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ಅಲ್ಪಸಂಖ್ಯಾತ ಮೀನುಗಾರರ ಸಂಘ ಮಾನವೀಯ ಸೇವೆಯಲ್ಲಿ ನಿರತವಾಗಿದೆ.
ಸಮಾಜದಲ್ಲಿ ನೊಂದವರಿಗೆ ನೀಡುವ ಎಲ್ಲಾ ದಾನಕ್ಕಿಂತಲೂ ವಿದ್ಯೆಗೆ ಪ್ರೋತ್ಸಾಹ ನೀಡುವ ದಾನ ಹೆಚ್ಚು ಮಹತ್ವವುಳ್ಳದ್ದಾಗಿದೆ. ಈ ನಿಟ್ಟಿನಲ್ಲಿ ಮಾಡುವ ದಾನದಿಂದ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಉಜ್ವಲ ಭವಿಷ್ಯ ರೂಪಿಸಿದಂತಾಗುತ್ತದೆ. ಉಚಿತ ಪುಸ್ತಕ ಪಡೆದವರು, ಹೆತ್ತವರು, ಪೋಷಕರು ಹಾಗೂ ಸಮಾಜ ಎಂದಿಗೂ ಈ ನೆರವನ್ನು ಮರೆಯಲು ಅಸಾಧ್ಯ ಎಂದು ಹೇಳಿದರು.
ಮಂಗಳೂರು ಧಕ್ಕೆ ಪುನನಿರ್ಮಾಣಕ್ಕಾಗಿ ಬಂದರು ಇಲಾಖೆ ಮೂಲಕ ಈ ಬಾರಿ 20 ಲಕ್ಷ ಅನುದಾನ ಮೀಸಲಿಡಲಾಗಿದೆ. ಸದ್ಯದಲ್ಲೇ ಮೀನುಗಾರಿಕಾ ಸಚಿವರ ಜೊತೆ ಚರ್ಚಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಹಾಗೂ ಸಂಘ ಸಲ್ಲಿಸಿರುವ ಬೇಡಿಕೆಯಂತೆ ಜಮೀನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಮೀನುಗಾರಿಕಾ ವೃತ್ತಿಯಲ್ಲಿ ಮುಸ್ಲಿಮರು ಹೆಚ್ಚಾಗಿ ಇದ್ದು, ಮೊಗವೀರ ಸಮುದಾಯ, ಕ್ರೈಸ್ತರು ಹಾಗೂ ಎಲ್ಲಾ ಧರ್ಮದವರು ಪರಸ್ಪರ ಸಹಕಾರ ನೀಡುತ್ತಿರುವುದರಿಂದ ಮೀನುಗಾರರ ಪ್ರಾಥಮಿಕ ಸಂಘ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 650 ಬಡಮಕ್ಕಳಿಗೆ 2.5ಲಕ್ಷ ವೆಚ್ಚದಲ್ಲಿ ಉಚಿತ ಪುಸ್ತಕ, ಕ್ಯಾನ್ಸರ್, ಹೃದಯ ಹಾಗೂ ಕಿಡ್ನಿ ರೋಗಿಗಳಿಗೆ 60 ಸಾವಿರ ರೂಮೀನುಪಾಯಿ ಧನಸಹಾಯದ ಚೆಕ್ ವಿತರಿಸಲಾಯಿತು. ಸಂಘದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದ ಸಿಬ್ಬಂದಿ ಹಬೀಬ್ ಹಾಗೂ ಜೋಸೆಫ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಜೆ.ಮೊಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಅಲ್ಪಸಂಖ್ಯಾತ ಮೀನುಗಾರಿಕಾ ಪ್ರಾಥಮಿಕ ಸಂಘಧ ಉಪಾಧ್ಯಕ್ಷ ಬಿ.ಅಹ್ಮದ್ ಬಾವ ಬಜಾಲ್, ಮಾರ್ಗದರ್ಶಕ ಫಾರೂಕ್ ಬೆಂಗ್ರೆ, ಮಂಗಳೂರು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಎಂ.ಡಿ.ಪ್ರಸಾದ್, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಸಹಕಾರ ಸಂಘದ ಅಭಿವೃದ್ಧಿ ಇಲಾಖೆ ಅಧಿಕಾರಿ ಜನಾರ್ದನ್, ಬಂದರು ಆಡಳಿತಾಧಿಕಾರಿ ಎಂ.ಕೆ.ವೆಂಕಟೇಶ್ ಮಂಗಳೂರು ಟ್ರಾಲ್ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಸಂಘದ ನಿರ್ದೇಶಕರಾದ ಎಂ.ಎ.ಗಫೂರ್, ಯು.ಟಿ.ಅಹ್ಮದ್ ಶರೀಫ್, ಬಿ.ಮಹಮ್ಮದ್ ಶಾಲಿ, ಎಸ್.ಕೆ.ಇಸ್ಮಾಯಿಲ್, ಎಸ್.ಎಂ.ಇಬ್ರಾಹಿಂ, ಡಿ.ಎಂ.ಕೆ.ಮಹಮ್ಮದ್ ಇಬ್ರಾಹಿಂ, ಟಿ.ಎಚ್.ಹಮೀದ್ ಹಾಗೂ ಫಾತಿಮತ್ ಝೊಹರಾ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಅಬ್ದುಲ್ ಲತೀಫ್ ವರದಿ ವಾಚಿಸಿದರು. ಮುಹಮ್ಮದ್ ಮುಸ್ತಫಾ ಹರೇಕಳ ಸ್ವಾಗತಿಸಿದ, ಕಾರ್ಯಕ್ರಮ ನಿರೂಪಿಸಿದರು.