ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಮುಂಬಯಿ ದಾಳಿಯಲ್ಲಿ ವಿದೇಶಿಯರೂ ಸೇರಿ ತಾಜ್ ಹೋಟೇಲಿನಲ್ಲಿದ್ದ ನೂರಾರು ಜನರನ್ನು ರಕ್ಷಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದರಾಗಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ಮುಂಬಯಿ ಅಗ್ನಿ ಶಾಮಕ ದಳದ ಉಪ ಮುಖ್ಯ ಅಧಿಕಾರಿ, ಇತ್ತೀಚೆಗ ಕಲ್ಪ್ಬಾದೇವಿಯಲ್ಲಿನ ಬೆಂಕಿ ದುರಂತದಲ್ಲಿ ಇತರರ ಪ್ರಾಣವನ್ನು ಉಳಿಸಲು ತನ್ನ ಜೀವವನ್ನೇ ಮುಡುಪಾಗಿಟ್ಟು ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ, 2015 ರ ಮೇ 14 ರಂದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸುಧೀರ್ ಜಿ. ಅಮೀನ್ ಅವರಿಗೆ ಬಂಟರ ಸಂಘದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ನಗರದ ವಿವಿಧ ತುಳು-ಕನ್ನಡಿಗ ಸಂಘಟನೆಗಳ ಪ್ರಮುಖರು ಮಾತ್ರವಲ್ಲದೆ ಇತರ ಸಮುದಾಯದವರು ಹಾಗೂ ಅಮೀನ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಂತಾಪ ಸಭೆಯಲ್ಲಿ ಪಾಲ್ಗೊಂಡು ದಿವಂಗತರ ಬಾವ ಚಿತ್ರಕ್ಕೆ ಪುಷ್ಪಾರ್ಪಣೆಗೈದರು.
ಬಂಟರ ಸಂಘದ ಅಧ್ಯಕ್ಷ, ಕರ್ನಿರೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿಯ ಸಂಸ್ಥಾಪಕ ಜಯ ಕೃಷ್ಣ ಶೆಟ್ಟಿ, ಬಿಲ್ಲವರ ಅಶೋಷೀಯೇಶನಿನ ಗೌರವ ಅಧ್ಯಕ್ಷ ಜಯ ಸಿ. ಸುವರ್ಣ, ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಬಿಲ್ಲವ ಜಾಗೃತಿ ಬಳಗದ ಉಪಾಧ್ಯಕ್ಷ ಪುರುಷೋತ್ತಮ್ ಕೋಟ್ಯಾನ್, ಬೋರಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಪೂಜಾರಿ, ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಮಾಜಿ ಅಧ್ಯಕ್ಷ ಕೆ.ಪಿ. ಅರವಿಂದ, ಮತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಜಯ ಶೆಟ್ಟಿ, ಚಿತ್ರಾಪು ಕೆ. ಎಂ. ಕೋಟ್ಯಾನ್, ದೇವಾಡಿಗ ಸಮಾಜ, ಮೊಗವೀರ ಸಮಾಜ, ಕುಲಾಲ ಸಮಾಜ ಮತ್ತು ಇತರ ಸಮುದಾಯದ ನೂರಾರು ಗಣ್ಯರು ಉಪಸ್ಥಿತರಿದ್ದು ಸುಧೀರ್ ಜಿ. ಅಮೀನ್ ರ ಸಾಧನೆಯ ಬಗ್ಗೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೊಲಾಪುರದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಜರಗಿದ ಸಭೆಯಲ್ಲಿ ದಿ. ಅಮೀನ್ ಮತ್ತು ಇತರ ಅಧಿಕಾರಿಗಳ ನಿಧನಕ್ಕೆ ಮೌನ ಪ್ರಾರ್ಥನೆಯನ್ನು ಮಾಡಿದ ಬಗ್ಗೆ ಎಲ್. ವಿ. ಅಮೀನ್ ಅವರು ತಿಳಿಸಿದರು.
ಸುಧೀರ್ ಜಿ. ಅಮೀನ್ ಮತ್ತು ಇತರ ಮೂವರು ಅಧಿಕಾರಿಗಳು ಈ ದುರಂತದಲ್ಲಿ ಸಾವನ್ನಪ್ಪಿದ್ದು ಇಂತಹ ಅಧಿಕಾರಿಗಳ ಈ ರೀತಿಯ ಅಗಲಿಕೆಯು ಮುಂದೆ ಮಂಬಯಿಯ ಸುರಕ್ಷತೆಯ ಪ್ರಶ್ನೆಗೆ ಕಾರಣವಾದೀತು ಎಂದು ಅಗ್ನಿಶಾಮಕ ದಳದ ಮಾಜಿ ಹಿರಿಯ ಅಧಿಕಾರಿ ಕಿರಣ್ ಕದಂ ಅಭಿಪ್ರಾಯಪಟ್ಟಿದ್ದಾರೆ.
ದಿ. ಅಮೀನ್ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬದ ಎಲ್ಲಾ ಸದಸ್ಯರು, ಉದ್ಯಮಿ ಕುಮಾರ ಬಂಗೇರ ಮತ್ತು ಪರಿವಾರದವರು ಉಪಸ್ಥಿತರಿದ್ದರು.
ಬಿಲ್ಲವ ಜಾಗೃತಿ ಬಳಗ, ನಿರಂಜನ ಸ್ವಾಮೀಜಿ ಮತ್ತು ಸುಧೀರ್ ಜಿ. ಅಮೀನ್ ರಿಗೆ ಸಂತಾಪ ಸಭೆ
ಮುಂಬಯಿ : ಮುಬಯಿ ಸಾತ್ ರಸ್ತಾ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಮಂದಿರದ ನಿರಂಜನ ಸ್ವಾಮೀಜಿ ಮತ್ತು ಮುಂಬಯಿ ಅಗ್ನಿ ಶಾಮಕ ದಳದ ಉಪ ಮುಖ್ಯ ಅಧಿಕಾರಿ ಸುಧೀರ್ ಜಿ ಅಮೀನ್ ಅವರಿಗೆ ಬಿಲ್ಲವ ಜಾಗೃತಿ ಬಳಗದ ವತಿಯಿಂದ ಮೇ ೨೫ರಂದು ನುಡಿ ನಮನ ಸಲ್ಲಿಸಲಾಯಿತು.
ಬಳಗದ ಕಚೇರಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಬಳಗದ ಪದಾಧಿಕಾರಿಗಳು ಹಾಗೂ ನಿರಂಜನ ಸ್ವಾಮೀಜಿ ಮತ್ತು ಸುಧೀರ್ ಜಿ ಅಮೀನ್ ರ ಅಭಿಮಾನಿಗಳು ದೀಪ ಬೆಳಗಿಸಿ, ಪುಷ್ಪ ಅರ್ಪಿಸಿದರು.
ಬಿಲ್ಲವ ಜಾಗೃತಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸೂರು ಸಿ. ಕರ್ಕೇರ ಅವರು ನುಡಿನಮನ ಸಲ್ಲಿಸುತ್ತಾ ನಿರಂಜನ ಸ್ವಾಮಿಯವರು ಸಮಾಜಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಸುಧೀರ್ ಅಮೀನ್ ಅವರು ತನ್ನ ಜೀವವನ್ನು ಜನರ ರಕ್ಷಣೆಗಾಗಿ ಅರ್ಪಿಸಿದರು ಎಂದರು.
ಅಂಕಣಕಾರ ರವಿ ರಾ. ಅಂಚನ್ ಅವರು ಸುಧೀರ್ ಅಮೀನ್ ರ ಬಗ್ಗೆ ಮಾತನಾಡುತ್ತಾ ದೈರ್ಯದಿಂದ ಇತರರ ಜೀವ ರಕ್ಷಣೆಗೆ ಮುನ್ನುಗ್ಗಿದ್ದ ಅವರ ಸಹಾಸೀ ವ್ಯಕ್ತಿತ್ವ ಸಾಹಸದಿಂದ ಕೊನೆಗೊಂಡಿತು. ಚಿತ್ರರಂಗದ ಖ್ಯಾತ ನಟ ನಟಿಯರು ನಿರಂಜನ ಸ್ವಾಮೀಜಿ ಯವರ ಭಕ್ತರಾಗಿದ್ದು ತಾನು ಸಂಗ್ರಹಿಸಿದ ಹಣದಿಂದ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿದ ಮಹಾ ಚೇತನ ಎಂದರು.
ಬಳಗದ ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್ ಸಂತಾಪವನ್ನು ವ್ಯಕ್ತಪಡಿಸುತ್ತಾ ಅಮೀನರ ಸಾಧನೆಯನ್ನು ನೆನಪಿಸಿಕೊಂಡರಲ್ಲದೆ ಗುರುನಾರಾಯಣ ಯಕ್ಷಗಾನ ಮಂಡಳಿಯ ಯಶಸ್ವಿಗೆ ನಿರಂಜನ ಸ್ವಾಮೀಜಿಯವರ ಕೊಡುಗೆಯನ್ನು ನೆನಪಿಸಿಕೊಂಡರು. ಉಪಾಧ್ಯಕ್ಷ ಡಿ. ಬಿ. ಅಮೀನ್, ಮಾಜಿ ಉಪಾಧ್ಯಕ್ಷ ಕೆ. ಭೋಜರಾಜ್, ಬೋರಿವಲಿ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಾರದಾ ಎಸ್. ಕರ್ಕೇರ, ತುಳು ಲಿಪಿ ಸಂಶೋಧಕ ಜಯಕರ ಡಿ. ಪೂಜಾರಿ, ಜೆ. ಎಂ. ಕೋಟ್ಯಾನ್, ಡಿ. ಕೆ. ಅಂಚನ್, ಪುರೋಹಿತರಾದ ಹರೀಶ್ ಶಾಂತಿ, ಬಿ. ಆರ್. ಸುವರ್ಣ, ಪ್ರಕಾಶ್ ಮೂಡಬಿದ್ರೆ ಮೊದಲಾದವರು ನುಡಿ ನಮನ ಸಲ್ಲಿಸುತ್ತಾ ಸಮಾಜಿಕ ಪರಿಸರದಲ್ಲಿದ್ದ ಮಹಾನ್ ಶಕ್ತಿ ಒಬ್ಬರಾದರೆ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಗೈದವರು ಇನ್ನೊಬ್ಬರಾಗಿದ್ದು ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಸಭೆಯಲ್ಲಿ ಜಯ್ ರಾಜ್ ಸಾಲ್ಯಾನ್, ಕೂಸಪ್ಪ, ಸತ್ಯ ಕೋಟ್ಯಾನ್, ಲ. ಜಯರಾಮ ಮೂಲ್ಯ, ಮೊದಲಾದವರು ಉಪಸ್ಥಿತರಿದ್ದರು. ಕೆ. ಎಂ. ಕೋಟ್ಯಾನ್ ಅವರು ಸಭೆಯನ್ನು ನಿರ್ವಹಿಸಿದ್ದು ಅಗಲಿದ ಇಬ್ಬರೂ ಮಹಾನ್ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿಸಿದರು.