ಕುಂದಾಪುರ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಭೂಗತ ಪಾತಕಿ ರವಿ ಪೂಜಾರಿ ಬುಧವಾರವೂ ಕೂಡ ಕರೆ ಮಾಡಿದ್ದಾನೆ.
ಕರೆಯನ್ನು ಸ್ವೀಕರಿಸಿದ ಹಾಲಾಡಿಯವರೊಂದಿಗೆ ಮಾತನಾಡಿದ ರವಿ ಪೂಜಾರಿ, “ ನಿಮ್ಮ ಬಗ್ಗೆ ತಿಳಿದಿದ್ದೇನೆ, ನಿಮ್ಮ ಬಳಿ ಹಣವಿಲ್ಲ ಎಂದು ಗೊತ್ತಿದೆ. ಆದರೇ ನಿಮ್ಮ ಹೆಸರು ಹೇಳಿಕೊಂಡು ಭೂಗತ ಲೋಕದಲ್ಲಿ ಕೆಲವರು ಬಾಲ ಬಿಚ್ಚುತ್ತಿದ್ದು, ಇದು ಒಳ್ಳೆಯದಲ್ಲ. ನೀವು ಹಣ ಕೊಡುವದು ಬೇಡ, ನಾನು ಇನ್ನು ಕರೆ ಮಾಡೊಲ್ಲ. ಆದರೇ ಹೆಸರು ಹೇಳಿಕೊಂಡು ಆಟ ಆಡುವವರ ಬಗ್ಗೆ ಜಾಗೃತೆ” ಎಂಬ ಸಂದೇಶವನ್ನು ಹಾಲಾಡಿಯವರಿಗೆ ಕರೆಯಲ್ಲಿ ರವಿ ಪೂಜಾರಿ ರವಾನಿಸಿದ್ದಾನೆ ಎನ್ನಲಾಗಿದೆ.
ಘಟನೆ ಹಿನ್ನೆಲೆ: ಸೋಮವಾರ ಮಧ್ಯಾಹ್ನ ಶಾಸಕರು ಹಾಲಾಡಿಯಿಂದ ಶುಭ ಕಾರ್ಯಕ್ರಮಕ್ಕೆ ತೆರಳುತ್ತಿರುವಾಗ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿ ಮೊಬೈಲ್ ಕರೆ ಮಾಡಿ ತುಳುವಿನಲ್ಲಿ ಮಾತನಾಡುತ್ತಾ ನಿಮಗೆ ತುಂಬಾ ಜಾಗ ಹಾಗೂ ತೋಟವಿದೆ, ಅದನ್ನು ಮಾರಿ ನನಗೆ ಹತ್ತು ಕೋಟಿ ಹಣ ನೀಡಿ, ಇಲ್ಲವಾದಲ್ಲಿ ಕೊಲ್ಲುತ್ತೇನೆ ಎಂದು ಬೆದರಿಕೆಯೊಡ್ಡಿದ್ದ. ಇದಕ್ಕೆ ಶಾಸಕರು ಹಣ ಕೊಡೊಲ್ಲ ಎಂದು ಕಡ್ಡಿ ಮುರಿದ ಹಾಗೇ ಹೇಳಿದ್ದರು. ಈ ನಡುವೆಯೇ ಮಂಗಳವಾರವೂ ೨-೩ ಬಾರೀ ಶಾಸಕರಿಗೆ ಕರೆ ಬಂದಿತ್ತು. ಹಾಲಾಡಿಯವರ ನಿವಾಸಕ್ಕೆ ಉಡುಪಿ ಎಸ್ಪಿ ಅಣ್ಣಾಮಲೈ ಅವರು ಭೇಟಿ ನೀಡಿದ್ದರು.