ಉಡುಪಿ: ಕಳೆದ ವಾರ ದಾವಣಗೆರೆಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶವು ಕೇವಲ ಬಿಜೆಪಿಯನ್ನು ಠೀಕಿಸುವ ಸಮಾವೇಶವೇ ಹೊರತು ಸಾಧನೆಯ ಸಮಾವೇಶವಲ್ಲ. ಕಾಂಗ್ರೆಸಿಗರು ಹೇಳಿದ ಬಿಜೆಪಿ ಮುಕ್ತ ರಾಜ್ಯ ಮಾಡುತ್ತೇವೆಂಬುದು ಅವರ ಹಗಲು ಕನಸು ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.
ಉಡುಪಿಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಸರಕಾರದ ದ್ವಂದ್ವ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಿಯುಸಿ ಫಲಿತಾಂಶ ಬಳಿಕದ ಗೊಂದಲ ಬಗ್ಗೆ ಮಾತನಾಡಿದ ಅವರು , ಇದು ರಾಜ್ಯ ಸರಕಾರದ ವೈಫಲ್ಯವನ್ನು ತೋರಿಸುತ್ತದೆ. ಗ್ರೇಸ್ ಮಾರ್ಕ್ ಮುಂದಿನ ಸಿಇಟಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಆದರೆ ಅದು ತುಂಬಾ ವಿಳಂಬವಾಗಿದೆ.. ಯಾವುದೇ ಸರಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡೋದು ಸರಿಯಲ್ಲ ಎಂದು ಹೇಳಿದರು.
ಇನ್ನು ಡಿ.ಕೆ. ರವಿ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆಗೆ ನಿರಾಕರಿಸಿದ ಅವರು ಸಿಬಿಐ ಕೂಲಂಕುಷ ತನಿಖೆ ಮಾಡಿ ವರದಿ ನೀಡಲಿದೆ ಎಂದರು.
ಈ ಸಂದರ್ಭ ಮಾಜಿ ಶಾಸಕ ರಘುಪತಿ ಭಟ್, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಉಪಸ್ಥಿತರಿದ್ದರು.