ಮಂಗಳೂರು,ಮೇ.18 : 2015ನೇ ಸಾಲಿನ ಪಿಯುಸಿ ಫಲಿತಾಂಶ ಸೋಮವಾರ ಘೋಷಣೆಯಾಗಿದ್ದು, ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್, ಆರ್ಟ್ಸ್ ಹಾಗೂ ಕಲಾ ವಿಭಾಗಗಳಲ್ಲಿ ಕರಾವಳಿ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಗರಿಷ್ಠ ಅಂಕ ಪಡೆಯುವ ಮೂಲಕ ಟಾಪರ್ಸ್ ಪಟ್ಟಿಯಲ್ಲಿದ್ದಾರೆ.
ಮಂಗಳೂರಿನ ಶಾರದ ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ ಅವರು ಕಾಮರ್ಸ್ ನಲ್ಲಿ ಅತೀ ಹೆಚ್ಚು (600/593) ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲೇ ಟಾಪರ್ ಆಗಿ ಮೂಡಿ ಬಂದಿದ್ದಾರೆ. ಮಾತ್ರವಲ್ಲದೇ ವ್ಯಾಪಾರ, ಲೆಕ್ಕಶಾಸ್ತ್ರ, ಗಣಿತ, ಮತ್ತು ಸಂಖ್ಯಾಶಾಸ್ತ್ರ, ಇಂಗ್ಲೀಷ್ ಸಂಸ್ಕೃತದಲ್ಲಿ ಒಟ್ಟು 99 ಮತ್ತು 94 ಅಂಕ ಪಡೆದು ಉತ್ತಮ ಸಾಧನೆ ಮಾಡುವ ಮೂಲಕ ರಶ್ಮಿತಾ ಅವರು ತಮ್ಮ ಪೋಷಕರಿಗೆ ಹಾಗೂ ಕಾಲೇಜಗೆ ಹೆಮ್ಮೆ ತಂದಿದ್ದಾರೆ. ಇವರು ನಗರದ ಬಿಜೈ ಕಾಪಿಕಾಡ್ನ ಬಿ. ಪುರುಷೋತ್ತಮ ಮತ್ತು ಶಶಿಕಲಾ ದಂಪತಿಗಳ ಪುತ್ರಿ.
ಇದೇ ಕಾಲೇಜಿನ ಆರ್ಯ ಎಂ(ಪಿಸಿಎಂಬಿ 590), ಸೌರಭ್ ಸುರೇಂದ್ರ ಕುಮಾರ್ (ವಾಣಿಜ್ಯದಲ್ಲಿ 589), ಮನ್ವಿತಾ (ವಿಜ್ಞಾನದಲ್ಲಿ 588) ಹಾಗೂ ಹರ್ಷಾ ಶೆಟ್ಟಿ (ವಾಣಿಜ್ಯದಲ್ಲಿ 585) ಅಂಕಗಳನ್ನ ಪಡೆಯುವ ಮೂಲಕ ಈ ಬಾರಿಯ ಟಾಪರ್ ಗಳಾಗಿ ಮೂಡಿ ಬಂದಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ ಅಗುವ ಬಯಕೆ ವ್ಯಕ್ತಪಡಿಸಿದ ರಶ್ಮಿತಾ.
ದ್ವಿತೀಯ ಪಿಯುಸಿಯಲ್ಲಿ ಶೇ.95ರಷ್ಟು ಅಂಕಗಳನ್ನು ನಿರೀಕ್ಷಿಸಿದ್ದೆ. ಆದರೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತೇನೆಂದು ಅಂದುಕೊಂಡಿರಲಿಲ್ಲ. ಇದು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ರಶ್ಮಿತಾರ ಸಂತಸದ ನುಡಿ.
ನಗರದ ಕೊಡಿಯಾಲ್ಬೈಲ್ನ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿಯಾ ಗಿರುವ ರಶ್ಮಿತಾ ತಾನು ಮುಂದೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಬೇಕೆಂಬ ಬಯಕೆಯನ್ನು ಹೊಂದಿದ್ದಾರೆ. ವಾಣಿಜ್ಯ ವಿಭಾಗದ ವ್ಯವಹಾರ ಶಾಸ್ತ್ರ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ಮೂಲ ಗಣಿತದಲ್ಲಿ ತಲಾ 100 ಅಂಕಗಳನ್ನು ಗಳಿಸಿರುವ ರಶ್ಮಿತಾ ಆಂಗ್ಲ ಭಾಷೆಯಲ್ಲಿ 94 ಹಾಗೂ ಸಂಸ್ಕೃತದಲ್ಲಿ 99 ಅಂಕಗಳೊಂದಿಗೆ ಒಟ್ಟು 593(98.83 ಶೇ.) ಅಂಕಗಳನ್ನು ಗಳಿಸಿದ್ದಾರೆ.
ಬಿಜೈ ಕಾಪಿಕಾಡು ನಿವಾಸಿ ಹಾಗೂ ಕಾರ್ಸ್ಟ್ರೀಟ್ನ ನವೀನ್ ಎಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯನ್ನು ಹೊಂದಿರುವ ಬಿ.ಪುರುಷೋತ್ತಮ ಹಾಗೂ ಶಶಿಕಲಾ ಪಿ. ದಂಪತಿಯ ಪುತ್ರಿಯಾಗಿರುವ ರಶ್ಮಿತಾ ಎಸೆಸೆಲ್ಸಿ ಪರೀಕ್ಷೆಯಲ್ಲೂ ಶೇ.95 ಅಂಕಗಳನ್ನು ಪಡೆದಿದ್ದರು. ‘‘ನಾನು ತರಗತಿಯಲ್ಲಿ ಕಲಿಸುತ್ತಿದ್ದ ಬೋಧನೆಗೆ ಹೆಚ್ಚಿನ ಗಮನ ಕೊಡುತ್ತಿದ್ದೆ. ಪ್ರತ್ಯೇಕ ಟ್ಯೂಶನ್ ಪಡೆದಿಲ್ಲ. ಕಾಲೇಜಿನಲ್ಲಿ ಉತ್ತಮ ಬೋಧನೆ ಇದ್ದ ಕಾರಣ ನಾನು ಆಸಕ್ತಿಯಿಂದ ಕಲಿಯಲು ಸಾಧ್ಯವಾಯಿತು. ಜತೆಗೆ ಪೋಷಕರು ಹಾಗೂ ಶಿಕ್ಷಕರ ಪ್ರೋತ್ಸಾಹವೂ ನನಗೆ ಸಹಕಾರಿಯಾಗಿದೆ. ಜತೆಗೆ ಕಂಬೈನ್ಡ್ ಸ್ಟಡಿ ಉತ್ತಮ ಅಂಕಗಳಿಸಲು ನೆರವಾಗಿದೆ’’ ಎಂದು ರಶ್ಮಿತಾ ಸಂತಸ ಹಂಚಿಕೊಂಡಿದ್ದಾರೆ.
ಕಾಲೇಜು ತರಗತಿಗಳಲ್ಲಿ ಜತೆಯಾಗಿ ಅಧ್ಯಯನ ನಡೆಸುತ್ತಿದ್ದೆವು. ನೃತ್ಯ, ತ್ರೋಬಾಲ್ ಹಾಗೂ ಸಂಗೀತ ನನ್ನ ಹವ್ಯಾಸ ಎಂದು ರಶ್ಮಿತಾ ಹೇಳಿದ್ದಾರೆ.