ಮಂಗಳೂರು, ಮೇ 15: ಕಾಂಗ್ರೆಸ್ ಸರ್ಕಾರವು ಏಕರೂಪದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ, ಜನರ ಕೈಗೆ ಅಧಿಕಾರ ನೀಡುವ ಕೆಲಸವನ್ನು ಮಾಡಿದೆ. ಪಂಚಾಯತ್ ವ್ಯವಸ್ಥೆಯನ್ನು ಹಿಂದಿನ ಬಿಜೆಪಿ ಸರಕಾರ ದುರ್ಬಲಗೊಳಿಸಲು ಮುಂದಾದಾಗ ಕಾಂಗ್ರೆಸ್ ವಿರೋಧಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಮ್ಮಿಕೊಂಡಿರುವ ಜನಪರ ಕಾರ್ಯಗಳು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಪೂರಕವಾಗಿ ಪರಿಣಾಮ ಬೀರಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಸಿವು ಮುಕ್ತ ರಾಜ್ಯದ ಗುರಿಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಅದನ್ನು ಸಾಧಿಸಿ ಎರಡು ವರ್ಷದಲ್ಲಿ ಹಗರಣ ಮುಕ್ತ ಉತ್ತಮ ಜನಪರ ಆಡಳಿತ ನೀಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಹಿಂದ ಪರವಾಗಿದೆ ಎಂದ ಮಾತ್ರಕ್ಕೆ ಇತರ ವರ್ಗದವರನ್ನು ನಿರ್ಲಕ್ಷಿಸಿದೆ ಎನ್ನುವುದು ಸರಿಯಲ್ಲ ಎಂದ ರೈ, ಮುಖ್ಯಮಂತ್ರಿಯವರು ಅಹಿಂದ ಪರವಾದ ಮುಂಗಡ ಪತ್ರ ಮಂಡಿಸಿದ್ದರೆ ತಪ್ಪೇನು ಎಂದು ಪ್ರಶ್ನಿಸಿದರು. ಪಂಚಾಯತ್ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿತ ಸಮರ್ಥ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಇವರನ್ನು ಸ್ಥಳೀಯ ನಾಯಕರು ಆಯ್ಕೆ ಮಾಡಲಿದ್ದಾರೆ. ಕಾಂಗ್ರೆಸ್ ಸರಕಾರದ ಆಡಳಿತ, ಸಾಧನೆ ಜನತೆಗೆ ತೃಪ್ತಿ ತಂದಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಶಾಸಕ ಮೊಯಿದಿನ್ ಬಾವ, ಮೇಯರ್ ಜೆಸಿಂತಾ ಅಲ್ಪ್ರೇಡ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮನಪಾ ಸದಸ್ಯರಾದ ನವೀನ್ ಡಿ. ಸೋಜಾ, ಶಶಿಧರ ಹೆಗ್ಡೆ, ಹರಿನಾಥ, ಅಪ್ಪಿ, ಅಬ್ದುಲ್ ರವೂಫ್, ಡಿ.ಕೆ. ಅಶೋಕ್, ನಾಯಕರಾದ ಸದಾಶಿವ ಉಳ್ಳಾಲ್, ಟಿ.ಕೆ. ಸುಧೀರ್, ನಜೀರ್ ಬಜಾಲ್, ವಿಶ್ವಾಸ್ ಕುಮಾರ್ ದಾಸ್, ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.