ಮಂಗಳೂರು,ಮೇ.13 : ನಗರದ ಬಲ್ಮಠದಲ್ಲಿರುವ ಲಕ್ಷ್ಮೀದಾಸ್ ಜ್ಯುವೆಲರ್ಸ್ ಮಳಿಗೆಗೆ ನುಗ್ಗಿದ್ದ ಕಳ್ಳರು ಜ್ಯುವೆಲರ್ಸ್ನ ಶಟರ್ ಮುರಿದು ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಅಭರಣಗಳನ್ನು ಕಳವುಗೈದಿರುವ ಘಟನೆ ಮಂಗಳವಾರ ತಡ ರಾತ್ರಿ ನಡೆದಿದ್ದು, ಬುಧವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರು ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ಲಕ್ಷ್ಮೀದಾಸ್ ಜ್ಯುವೆಲರ್ಸ್ ನ ಶಟರ್ ಮುರಿದು ಒಳನುಗ್ಗಿರ ಬೇಕೆಂದು ಶಂಕಿಸಲಾಗಿದೆ.
ಇಂದು ಮುಂಜಾನೆ ಮೂರು ಗಂಟೆಗೆ ಸುಮಾರಿಗೆ ಭಾರೀ ಗಾತ್ರದ ಬೆಳ್ಳಿಯ ಮೂರ್ತಿಯೊಂದಿಗೆ ಲಕ್ಷ್ಮೀದಾಸ್ ಜ್ಯುವೆಲರ್ಸ್ನ ಮಳಿಗೆಯಿಂದ ಹೊರಬರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪಕ್ಕದ ಬಾರೊಂದರ ಸಿಬ್ಬಂದಿಯೋರ್ವರು ನೋಡಿ ಸಂಶಯಗೊಂಡು, ಜೋರಾಗಿ ಬೊಬ್ಬೆ ಹೊಡೆದಿದ್ದರೆ. ಇವರ ಬೊಬ್ಬೆ ಕೇಳಿ ಕಳ್ಳರು ಬೆಳ್ಳಿಯ ಮೂರ್ತಿಯನ್ನು ಅಲ್ಲೆ ಬಿಟ್ಟು ತಾವು ಮೊದಲೇ ಕದ್ದಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ಅಭರಣಗಳ ಜೊತೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಘಟನೆಗಳು ಸಿಸಿ ಕ್ಯಾಮರದಲ್ಲಿ ಸೆರೆಹಿಡಿಯಲ್ಪಟ್ಟಿದೆ ಎಂದು ತಿಳಿದು ಬಂದಿದೆ.
ಬಂದರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇಬ್ಬರ ಬಂಧನ..?
ಇದೇ ಸಂದರ್ಭ ಲಕ್ಷ್ಮೀದಾಸ್ ಜ್ಯುವೆಲರ್ಸ್ ಮಳಿಗೆಯಿಂದ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಉತ್ತರ ಭಾರತ ಮೂಲದ ಕಳ್ಳರನ್ನು ಬಂದರು ಪೊಲೀಸರು ಸೆರೆಹಿಡಿದಿದ್ದಾರೆ ಎಂಬ ಸುದ್ಧಿ ಹಬ್ಬಿತ್ತು. ಆದರೆ ಬಂದರು ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟ ಯಾವೂದೇ ಆರೋಪಿಗಳ ಬಂಧನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.