ಕನ್ನಡ ವಾರ್ತೆಗಳು

ಹಣದ ಆಸೆಗೆ ಸಹೋದ್ಯೋಗಿಯನ್ನು ಕೊಂದು ಹಾಡಿಯಲ್ಲಿ ಎಸೆದ ಆರೋಪಿ ಪೊಲೀಸರ ವಶಕ್ಕೆ; ಪಡುಬಿದ್ರಿಯಲ್ಲಿ ನಡೆದಿದ್ದ ಘಟನೆ

Pinterest LinkedIn Tumblr
ಉಡುಪಿ: ಮೇ 8ರಂದು ಪಾದೆಬೆಟ್ಟು ಬಳಿಯ ಹಾಡಿಯೊಂದರಲ್ಲಿ ಅನುಮಾನಾಸ್ಪದವಾಗಿ ದೊರೆತಿದ್ದ ರಾಜಾ ಪಟೇಲ್‌ನನ್ನು  ಹಣಕ್ಕಾಗಿ ಕೊಲೆ ಮಾಡಿದ ಗ್ಗೆ ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಆರೋಪಿಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಹಣಕ್ಕಾಗಿ ಕೊಲೆ ಮಾಡಿದ ಆರೋಪಿಯನ್ನು ರಾಜಾ ಪಟೇಲ್‌ನ ಸಹ ಕಾರ್ಮಿಕ ಕುದುರೆಮುಖ ನೆಲ್ಲಿನೀಡು ವಾಸಿ ಸುಬ್ರಹ್ಮಣ್ಯ (38) ಎಂದು ಗುರುತಿಸಲಾಗಿದೆ.
Padubidri_Murder_Case
ಘಟನೆಯ ವಿವರ : ಕಲಬುರಗಿ ಜೇವರ್ಗಿಯ ನಿವಾಸಿ ರಾಜಾ ಪಟೇಲ್ (24) ಕಳೆದ ಒಂದೂವರೆ ವರ್ಷದಿಂದ ಯುಪಿಸಿಎಲ್‌ನ ಸೀಮರ್ ಎಂಬ ಗುತ್ತಿಗೆ ಕಂಪನಿಯಲ್ಲಿ ಕಾರ್ಮಿಕನಾಗಿ ಸೇರಿಕೊಂಡಿದ್ದ. ಏ.21ರಂದು ತನ್ನ ಊರಿನಲ್ಲಿ ದೊಡ್ಡಮ್ಮನ ಮಗಳ ಮದುವೆ ಇದ್ದ ಕಾರಣ ಏಪ್ರಿಲ್ 17ರಂದು ರಜೆ ಹಾಕಿ ಊರಿಗೆ ತೆರಳಲು ಸಿದ್ಧತೆ ನಡೆಸಿದ್ದ. ಆದರೆ ಆತ ಊರಿಗೆ ತೆರಳದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದು, ಏ.25ರಂದು ಪಡುಬಿದ್ರಿ ಠಾಣೆಗೆ ದೂರು ನೀಡಲಾಗಿತ್ತು. ಮೇ 8ರಂದು ಪಡುಬಿದ್ರಿ ಪಾದೆಬೆಟ್ಟುವಿನ ಬಿಕ್ರಿಗುತ್ತುವಿನ ನಿರ್ಜನ ಹಾಡಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಬಟ್ಟೆ, ರಾಜಾ ಪಟೇಲ್‌ನ ಶವವೆಂದು ಗುರುತು ಹಿಡಿಯಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಾಪು ನಿರೀಕ್ಷಕ ಸುನಿಲ್ ನಾಯಕ್ ನೇತತ್ವದಲ್ಲಿ ಠಾಣಾಧಿಕಾರಿ ಅಜ್ಮತ್ ಆಲಿ ನಾಯಕತ್ವದಲ್ಲಿ ತಂಡವೊಂದನ್ನು ರಚಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ರಾಜಾಪಟೇಲ್‌ನ ನಾಪತ್ತೆಯಾದ ಮೊಬೈಲ್ ಫೋನ್ ಮೂಲಕವೇ ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು ಆತನ ಸಹಚರರ ಮೇಲೆ ತೀವ್ರ ನಿಗಾ ವಹಿಸಿದ್ದರು.

ಹಣಕ್ಕಾಗಿ ಕೊಲೆ ಮಾಡಿದ್ದ :  ವಿಪರೀತ ಸಾಲಮಾಡಿಕೊಂಡು ಹಣದ ಸಮಸ್ಯೆಯಲ್ಲಿದ್ದ  ಸುಬ್ರಮಣ್ಯ ರಾಜಾ ಪಟೇಲನು ತಂಗಿ ಮದುವೆಗಾಗಿ ಊರಿಗೆ ಹೊರಟಿದ್ದನ್ನು ಕಂಡು ತುಂಬಾ ಹಣ ಇರಬಹುದೆಂದು ಸಂಶಯಿಸಿ ಉಪಾಯವಾಗಿ ತನ್ನ ಮನೆಗೆ ಆಹ್ವಾನಿಸಿದ್ದ. ಬೆಳಿಗ್ಗೆ 11 ಗಂಟೆಗೆ ಇದಕ್ಕಾಗಿ ಪಾದೆಬೆಟ್ಟುವಿನ ಬಾಡಿಗೆ ಕೋಣೆಗೆ ಹೋದ ರಾಜಾ ಪಟೇಲನನ್ನು  ಹಿಂದಿನಿಂದ ನೈಲಾನ್ ಹಗ್ಗದಿಂದ ಕುತ್ತಿಗೆ ಬಿಗಿದು ತಲೆಗೆ ಪ್ಲಾಸ್ಟಿಕ್ ಚೀಲ ಹೊದಿಸಿ ಕೊಲೆ ಮಾಡಿದ್ದನು. ಕೊಲೆ ನಡೆದ ಸಂದರ್ಭ ರಾಜಾ ಪಟೇಲ್‌ನ ಪರ್ಸ್‌ನಲ್ಲಿ ಕೇವಲ ರೂ. 1,300 ಮಾತ್ರ ಇತ್ತು. ಕೊಲೆ ಮಾಡಿದ ಬಳಿಕ ಹಣ ತೆಗೆದು ಪರ್ಸ್,ಸಿಮ್ ಹಾಗೂ ಎ.ಟಿ.ಎಂ ಕಾರ್ಡುಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದನು.
ಅದೇ ದಿನ ರಾತ್ರಿ ಪ್ಲಾಸ್ಟಿಕ್ ಗೋಣಿ ಚೀಲ ಸಹಾಯದಿಂದ ಶವವನ್ನು ಮನೆಯಿಂದ 100 ಮೀ. ದೂರದ ನಿರ್ಜನ ಬಿಕ್ರಿಗುತ್ತು ಹಾಡಿಗೆ ಹೊತ್ತೊಯ್ದು ಬಿಸಾಡಿ ಬಂದಿದ್ದನು. ಮರುದಿನವೇ ಊರಿಗೆ ಹೋಗಿ ನಾಲ್ಕೈದು ದಿನಗಳು ಅಲ್ಲೇ  ಇದ್ದು, ಮರಳಿ ಪಡುಬಿದ್ರಿಗೆ ಆಗಮಿಸಿ ಕೆಲಸಕ್ಕೆ ಹೋಗಿ ಬರುತ್ತಿದ್ದ. ಮೇ 8ರಂದು ಕೊಳೆದು ಛಿದ್ರಗೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿ, ಅದು ರಾಜಾ ಪಟೇಲ್‌ನ ಮ್ರತದೇಹವೆಂದು ಖಚಿತಗೊಂಡ ಬಳಿಕ ಪೋಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ತೀವ್ರ ಗೊಳಿಸಿದ್ದರು.

ತೀವ್ರಗೊಂಡಿತ್ತು ತನಿಖೆ: ನಾಪತ್ತೆಯಾದ ದಿನ ರಾಜಾ ಪಟೇಲ್ ಮೊಬೈಲ್‌ಗೆ ಬಂದ ಕರೆಗಳನ್ನು ಅನುಸರಿಸಿ ತನಿಖೆ ನಡೆಸಿದ ಪೊಲೀಸರಿಗೆ ಸುಬ್ರಹ್ಮಣ್ಯ ಎಂಬಾತನ ಮೇಲೆ ಸಂಶಯಗೊಂಡಿದ್ದರು.ಆತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ತೀವ್ರ ಹಣದ ಅಡಚಣೆಗಾಗಿ ರಾಜಾ ಪಟೇಲ್ ನಲ್ಲಿ ಹೆಚ್ಚು ಹಣ ಇರಬಹುದೆಂದು ಸಂಶಯಿಸಿ ಆತನನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಘಟನೆ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

ಸುಬ್ರಹ್ಮಣ್ಯನ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಅಡಿ ಕೇಸು ದಾಖಲಿಸಲಾಗಿದ್ದು , ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

Write A Comment