ಮಂಗಳೂರು,ಮೇ.09: ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೇತೃತ್ವದಲ್ಲಿ ಮಂಗಳೂರಿನ ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆದ “ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸ”ವ ಸಮಾರಂಭದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ನೆರವೇರಿಸಿದ್ದರು. ಸತ್ಯಾಗ್ರಹ, ಅಂಹಿಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆದ ವಿಶ್ವದ ಏಕೈಕ ದೇಶ ಭಾರತವಾಗಿದ್ದು, ಇದರ ಎಲ್ಲ ಯಶಸ್ಸು ಗಾಂಧೀಜಿಯವರದ್ದಾಗಿದೆ. ಸರ್ವಧರ್ಮ ಪರಿಕಲ್ಪನೆ, ಸ್ವಾವಲಂಬಿ ಜೀವನ, ಸ್ವದೇಶಿ ಚಿಂತನೆ ಎಲ್ಲವೂ ಗಾಂಧಿಜೀ ಕೊಡುಗೆಗಳಾಗಿವೆ. ದೇಶದ ಹಲವು ಆಗು ಹೋಗುಗಳನ್ನು ಗಮನಿಸಿದಾಗ ಗಾಂಧೀಜಿ ಚಿಂತನೆಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿ ಕಾಣುತ್ತದೆ ಎಂದು ಹೇಳಿದರು.
ಹಿಂಸಾತ್ಮಕ ಮಾದರಿಯ ವ್ಯವಸ್ಥೆಗಳನ್ನು ಕೈಬಿಟ್ಟು, ಅಹಿಂಸಾವಾದಿಯಾಗಿ ಜಗತ್ತನ್ನೇ ಗೆಲ್ಲುವ ಹಾಗೆ ಭಾರತವನ್ನು ಸ್ವಾತಂತ್ರ್ಯದೆಡೆಗೆ ಕರೆತಂದ ಗಾಂಧೀಜಿ ಅವರು ಕರ್ನಾಟಕದಲ್ಲಿ ನಡೆದಾಡಿದ ಪ್ರತೀಯೊಂದು ಸ್ಥಳವೂ ಅತ್ಯಂತ ಪವಿತ್ರವಾಗಿದೆ. ಯುವಪೀಳಿಗೆಗೆ ಈ ವಿಚಾರ ಮುಟ್ಟಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ, ಗ್ರಾಮ- ಗ್ರಾಮಗಳಲ್ಲಿ ಇಂತಹ ಆಶಯಗಳು ಪರಿಪೂರ್ಣಗೊಳ್ಳಲಿ ಎಂದರು.
ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ.ಇಸ್ಮಾಯಿಲ್ ಗಾಂಧೀಜಿ ಚಿಂತನೆಗಳ ಬಗ್ಗೆ ಮಾತನಾಡಿ, ಗಾಂಧೀ ಮೌಲ್ಯಗಳಿಗೆ ಯಾವತ್ತಿಗೂ ಸೋಲಾಗುವುದಿಲ್ಲ. ಅದು ಚಿರಂತನವಾಗಿರುತ್ತದೆ. ಹರಿಜನ ಉದ್ದಾರ, ಸರ್ವ ಧರ್ಮ ಸಮನ್ವಯ ಸೇರಿದಂತೆ ಸಮಾಜಮುಖಿ ಚಿಂತನೆಗಳ ಮೂಲಕ ಗಾಂಧೀಜಿ ಕರಾವಳಿ ಭಾಗದಲ್ಲಿ ಓಡಾಡಿದ ಒಂದೊಂದು ಘಟನೆಗಳು ಕೂಡ ಆದರ್ಶವಾದದ್ದು. ಗ್ರಾಮ ಹಾಗೂ ಸಾಮಾಜಿಕ ಭಾರತವನ್ನು ಕಂಡ ಗಾಂಧೀಜಿ ಕನಸನ್ನು ನನಸು ಮಾಡುವ ಅಗತ್ಯ ನಮ್ಮ ಮುಂದಿದೆ ಎಂದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಸ್ವಾಗತಿಸಿ, ವಂದಿಸಿದರು.