ಮಂಗಳೂರು, ಮೇ.5: ನಾಲ್ಕು ದಿನಗಳಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ 19ನೆ ಫೆಡರೇಶನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಸೋಮವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಣರಂಜಿತ ತೆರೆ ಕಂಡಿತು.ಇದೇ ಸಂದರ್ಭದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಆರ್ಮಿ ಹಾಗೂ ಮಹಿಳಾ ವಿಭಾಗದಲ್ಲಿ ಕೇರಳ ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು. ದ್ವಿತೀಯ ಪ್ರಶಸ್ತಿ ಗಳಿಸಿದ ಕರ್ನಾಟಕದ ಮಹಿಳಾ ತಂಡವನ್ನು ಅಭಿನಂದಿಸಲಾಯಿತು. ಜೊತೆಗೆ ಉತ್ತಮ ಕ್ರೀಡಾಪಟುವಾಗಿ ಪುರುಷರ ವಿಭಾಗದಲ್ಲಿ ಹರ್ಯಾಣದ ಇಂದ್ರಜಿತ್ ಸಿಂಗ್ ಹಾಗೂ ಮಹಿಳಾ ವಿಭಾಗದಲ್ಲಿ ಒಡಿಶಾದ ಸ್ರಬಾನಿ ನಂದಾರನ್ನು ಅತಿಥಿಗಳು ಗೌರವಿಸಿದರು.
ಬಳಿಕ ಪಂಜಾಬಿ ಯುವಕರ ತಂಡವು ಮೈನವಿರೇಳಿಸುವ ಪಂಜಾಬ್ನ ಸಮರ ಕಲೆಯ ಅದ್ಭುತ ತಾಲೀಮು ಪ್ರದರ್ಶನವನ್ನು ಮೈದಾನದಲ್ಲಿ ನೀಡಿ ನೆರೆದ ಕ್ರೀಡಾ ಪ್ರೇಮಿ ಗಳನ್ನು ರಂಜಿಸಿತು.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಶಿಯೇಶನ್ನ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕ್ರೀಡಾ ಸಚಿವ ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಐವನ್ ಡಿಸೋಜ, ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಅಥ್ಲೆಟಿಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಕಾರ್ಯದರ್ಶಿ ಸಿ.ಕೆ.ವಲ್ಸನ್, ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಅಸೋಸಿಯೇಶನ್ ಅಧ್ಯಕ್ಷ ಮಂಜುನಾಥ ಭಂಡಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎಚ್.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹಾಗೂ ಕಳೆದ ಬಾರಿಯ ಮಿಸ್ ಇಂಡಿಯಾ ರನ್ನರ್ ಅಪ್ ಪ್ರಶಸ್ತಿ ವಿಜೇತೆ ಅಫ್ರಿನಾ ವಿಶೇಷ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳಾ ಕ್ರೀಡಾಂಗಣದಲ್ಲಿ ಶಾಶ್ವತ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನ: ಪರಮೇಶ್ವರ್
ಮಂಗಳಾ ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ಕ್ರೀಡಾ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಖ್ಯ ಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಶಿಯೇಶನ್ನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು. ಪ್ರಸಕ್ತ ಇರುವ ಮೈದಾನದಲ್ಲಿ ಬೆಳಕಿನ ವ್ಯವಸ್ಥೆ, ಗ್ಯಾಲರಿ ಹೊರಗಿನ ಮೈದಾನದಲ್ಲಿ ಟ್ರಾಕ್ ಅಳವಡಿಕೆ, ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆ ಸುಧಾರಿಸಲು ಸೂಕ್ತ ಯೋಜನೆಯ ಮೂಲಕ ಸುಸಜ್ಜಿತಗೊಳಿಸಲು ಸರಕಾರಕ್ಕೆ ವರದಿ ನೀಡಲಾಗುವುದು ಎಂದು ಅವರು ಹೇಳಿದರು.
ಕ್ರೀಡಾಪಟುಗಳಿಗೆ ಅಡ್ಡಿಯಾದ ಮಂಗಳೂರಿನ ಬಿಸಿಲು :
ಕ್ರೀಡಾಕೂಟಕ್ಕೆ ನಿಗದಿಪಡಿಸಿದ ಸಮಯ ಕ್ರೀಡಾ ಳುಗಳಿಗೆ ಸೂಕ್ತವಾಗಿರಲಿಲ್ಲ. ಇಲ್ಲಿನ ಸೆಖೆ ಹೆಚ್ಚಿನ ಕ್ರೀಡಾಳುಗಳು ತಮ್ಮ ದಾಖಲೆಗಳನ್ನು ಉತ್ತಮಪಡಿಸಿಕೊಳ್ಳಲು ಅಡ್ಡಿಯಾಯಿತು. ಇಲ್ಲಿ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಇಂತಹ ಕ್ರೀಡಾ ಕೂಟ ನಡೆಸುವುದು ಸೂಕ್ತವಾಗಿತ್ತು ಎಂದು ಕ್ರೀಡಾ ಕೂಟದ ತಾಂತ್ರಿಕ ಸಮಿತಿಯ ಸದಸ್ಯರು ಪತ್ರಿಕೆಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಪ್ರೇಕ್ಷಕರ ಸಂಖ್ಯೆ ಕಡಿಮೆ:
ಈ ಬಾರಿ ಕ್ರೀಡಾಕೂಟಕ್ಕೆ ಪ್ರೇಕ್ಷಕರ ಸಂಖ್ಯೆ ಬಹಳ ಕಡಿಮೆ ಇತ್ತು. ಈ ಹಿಂದೆ ಮಂಗಳೂರಿನಲ್ಲಿ 1987ರಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಾಗ ಹೆಚ್ಚಿನ ಪ್ರೇಕ್ಷಕರಿದ್ದರು. ಆಗ ಟಿ.ವಿ.ಪ್ರಭಾವ ಕಡಿಮೆ ಇತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮೈದಾನದಲ್ಲಿ ಸೇರಿದ್ದರು ಎಂದು ಸಂಘಟನಾ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಅಂತಿಮ ದಿನ ಚಿನ್ನ ಗೆದ್ದ ಪೂವಮ್ಮ : ಬಹು ನಿರೀಕ್ಷೆಯಲ್ಲಿದ್ದ ಕೇರಳದ ಟಿಂಟು ಲುಕಾಗೆ ತೃತೀಯ ಸ್ಥಾನ
19ನೇ ರಾಷ್ಟ್ರೀಯ ಫೆಡರೇಶನ್ ಕಪ್ ಹಿರಿಯರ ಆ್ಯಥ್ಲೆಟಿಕ್ ಕ್ರೀಡಾಕೂಟದ ಕೊನೆಯ ದಿನದ 400 ಮೀ. ಓಟದಲ್ಲಿ ಕರ್ನಾಟಕದ ಪೂವಮ್ಮ(53.41) ಚಿನ್ನದ ಪದಕ ಪಡೆದಿದ್ದಾರೆ.
ಕೇರಳದ ಅನು ಆರ್.(54.27) ದ್ವಿತೀಯ, ಕೇರಳದ ಟಿಂಟು ಲುಕಾ(54.31) ತೃತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಪುರುಷರ ವಿಭಾಗದ 400 ಮೀ. ಓಟದಲ್ಲಿ ಆರ್ಮಿಯ ಆರೋಕ್ಯ ರಾಜೀವ್(46.24)ಪ್ರಥಮ, ವಾಯು ಸೇನೆಯ ವಿ.ಸಜೀನ್(46.94) ದ್ವಿತೀಯ, ತಮಿಳುನಾಡಿನ ಎ. ಧರುಣ್(47.25) ತೃತೀಯ ಸ್ಥಾನ ಪಡೆದಿದ್ದಾರೆ.
ಪುರುಷರ ವಿಭಾಗದ ಡಿಸ್ಕಸ್ ಥ್ರೋ ನಲ್ಲಿ ಟಾಟಾ ಮೋಟಾರ್ಸ್ ನ ಅರ್ಜುನ್ ಸಿಂಗ್ (58.51ಮೀ.) ಪ್ರಥಮ, ಇಂಡಿಯನ್ ಆರ್ಮಿಯ ಧರ್ಮರಾಜ್ ಯಾದ ( 58.41ಮೀ.) ದ್ವಿತೀಯ, ಒಎನ್ ಜಿಸಿ ಯ ಕೃಪಾಲ್ ಸಿಂಗ್(53.54ಮೀ.)ತೃತೀಯ ಸ್ಥಾನ ಪಡೆದಿದ್ದಾರೆ.
100 ಮೀ.ಮಹಿಳೆಯರ ಹಾರ್ಡಲ್ಸ್ ನಲ್ಲಿ ತಮಿಳುನಾಡಿನ ಗಾಯತ್ರಿ(13.67)ಪ್ರಥಮ, ತಮಿಳುನಾಡಿನ ದಿಪೀಕಾ(13.76) ದ್ವಿತೀಯ, ಕರ್ನಾಟಕದ ಮೇಘನಾ ಶೆಟ್ಟಿ(13.88) ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗದ 110 ಮೀ. ಹಾರ್ಡಲ್ಸ್ ನಲ್ಲಿ ಒಎನ್ ಜಿಸಿ ಯ ಸಿದ್ಧಾರ್ಥ್ ಥಿಂಗಾ (13.92) ಪ್ರಥಮ, ತಮಿಳುನಾಡಿನ ಸುರೇಂದರ್(14.17)ದ್ವಿತೀಯ, ತೆಲಂಗಾಣದ ಕೆ. ಪ್ರೇಮ್ ಕುಮಾರ್(14.26)ತೃತೀಯ ಸ್ಥಾನ ಪಡೆದಿದ್ದಾರೆ.
1500 ಮೀ. ಓಟದ ಪುರುಷರ ವಿಭಾಗದಲ್ಲಿ ಆರ್ಮಿಯ ಜೀನ್ಸನ್ ಜೋನ್ಸನ್(3:4698)ಪ್ರಥಮ, ಆರ್ಮಿಯ ಸಂದೀಪ್ ಕುಮಾರ್(3:47.71)ದ್ವಿತೀಯ, ಅಸ್ಸಾಂ ನ ಅಜಯ್ ಕೆ.ಆರ್. ಸರೋಜ್(3:48.86)ತೃತೀಯ ಸ್ಥಾನ ಪಡೆದಿದ್ದಾರೆ. ಮಹಿಳೆಯರ 1500 ಮೀ. ಓಟದಲ್ಲಿ ಹರಿಯಾಣದ ಸುಷ್ಮಾ ದೇವಿ(4:27.50) ಪ್ರಥಮ, ಕೇರಳದ ಚೈತ್ರಾ ಪಿ.ಯು(4:27.50)ದ್ವಿತೀಯ, ಪಶ್ಚಿಮ ಬಂಗಾಳದ ಸಿಪ್ರಾ ಸರ್ಕಾರ್(4:28.62) ತೃತೀಯ ಸ್ಥಾನ ಪಡೆದಿದ್ಧಾರೆ.
100 ಮೀ ರಿಲೇ ಮಹಿಳೆಯರ ವಿಭಾಗದಲ್ಲಿ ಕರ್ನಾಟಕಕ್ಕೆ ಚಿನ್ನ , ತಮಿಳುನಾಡಿಗೆ ಬೆಳ್ಳಿ, ಮಹಾರಾಷ್ಟ್ರಕ್ಕೆ ಕಂಚಿನ ಪದಕ ದೊರೆತಿದೆ. ಅಂತೆಯೇ ಪುರುಷರ ವಿಭಾಗದಲ್ಲಿ ಆರ್ಮಿಗೆ ಚಿನ್ನ, ತಮಿಳುನಾಡಿಗೆ ಬೆಳ್ಳಿ, ಕರ್ನಾಟಕಕ್ಕೆ ಕಂಚು ದೊರೆತಿದೆ.
ಪುರುಷರ ವಿಭಾಗ್ ಟ್ರಿಪಲ್ ಜಂಪ್ ನಲ್ಲಿ ಒಎನ್ ಜಿ.ಸಿ ಯ ಅರ್ಪಿಂದರ್ ಸಿಂಗ್ (16.13ಮೀ.) ಪ್ರಥಮ, ಟಾಟಾ ಮೋಟಾರ್ಸ್ ನ ಎಸ್. ಎನ್. ಮೊಹಮ್ಮದ್(15.86)ದ್ವಿತೀಯ, ವಾಯುಸೇನೆಯ ಯು.ಕಾರ್ತಿಕ್(15.82ಮೀ.) ತೃತೀಯ ಸ್ಥಾನ ಪಡೆದಿದ್ದಾರೆ.
400 ಮೀ. ಪುರುಷರ ವಿಭಾಗದ ರಿಲೇಯಲ್ಲಿ ಆರ್ಮಿಗೆ ಚಿನ್ನ, ವಾಯುಸೇನೆಗೆ ಬೆಳ್ಳಿ, ಹರಿಯಾಣಗೆ ಕಂಚು ದೊರೆತಿದೆ. ಮಹಿಳೆಯರ ವಿಭಾಗದಲ್ಲಿ ಪಶ್ಚಿಮ ಬಂಗಾಳಕ್ಕೆ ಚಿನ್ನ, ತಮಿಳುನಾಡಿಗೆ ಬೆಳ್ಳಿ, ಕೇರಳಕ್ಕೆ ಕಂಚು ದೊರೆತಿದೆ.