ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ರಂಗಭೂಮಿಯ ಹೆಸರಾಂತ ತಂಡವಾಗಿರುವ ಮಂಗಳೂರಿನ ಲಕುಮಿ ಕಲಾವಿದರು ಮತ್ತು ಶ್ರೀ ಲಲಿತೆ ಕಲಾವಿದರು ಇದರ ಸಂಸ್ಥಾಪಕ ಹಾಗೂ ಲೀಡ್ಸ್ ಗ್ರೂಪ್ ಆಫ್ ಕಂಪೆನೀಸ್ನ ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಣದಲ್ಲಿ, ಕೆ. ಸೂರಜ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿದ ಲಕುಮಿ ಸಿನಿ ಕ್ರಿಯೇಶನ್ಸ್ರವರ “ಎಕ್ಕಸಕ” ತುಳು ಸಿನಿಮದ ಬಿಡುಗಡೆ ಸಮಾರಂಭ ಶುಕ್ರವಾರ ಬೆಳಿಗ್ಗೆ ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ಜರಗಿತು.
ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಜನಪದ ವಿದ್ವಾಂಸ ಡಾ| ಬಿ.ಎ. ವಿವೇಕ್ ರೈ ಅವರು ದೀಪ ಪ್ರಜ್ವನಗೊಳಿಸುವ ಮೂಲಕ “ಎಕ್ಕಸಕ” ತುಳು ಸಿನಿಮವನ್ನು ಬಿಡುಗಡೆಗೊಳಿಸಿದರು. ತುಳು ಚಿತ್ರರಂಗದ 44 ವರ್ಷಗಳ ಇತಿಹಾಸದಲ್ಲಿ ತುಳು ಚಿತ್ರಗಳ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಅದರಲ್ಲೂ ಇತ್ತೀಚಿನ2-3 ವರ್ಷಗಳಲ್ಲಿ ತುಳು ಚಿತ್ರಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ತುಳು ಚಿತ್ರರಂಗದಲ್ಲಿ ಇದೊಂದು ಉತ್ತಮ ಬೆಳವಣಿಯಾಗಿದ್ದು, ತುಳು ಭಾಷೆ, ತುಳು ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಡಾ| ಬಿ.ಎ. ವಿವೇಕ್ ರೈ ಅವರು ಎಕ್ಕಸಕ ಚಿತ್ರದ ಯಶಸ್ಸಿಗೆ ಶುಭಾ ಹಾರೈಸಿದರು.
ಎಕ್ಕಸಕ ಚಿತ್ರ ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾಸ್, ಪಿ.ವಿ.ಆರ್., ಸಿನಿಪೊಲಿಸ್, ಉಡುಪಿಯ ಕಲ್ಪನ, ಮಣಿಪಾಲದ ಐನೋಕ್ಸ್, ಮೂಡಬಿದ್ರೆಯ ಅಮರಶ್ರೀ, ಕಾರ್ಕಳದ ರಾಧಿಕಾ, ಬಿ.ಸಿ.ರೋಡ್ ನಕ್ಷತ್ರ, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್ ಈ ಎಲ್ಲಾ ಚಿತ್ರಮಂದಿರಗಳಲ್ಲಿ ಇಂದು ಏಕಕಾಲದಲ್ಲಿ ಬಿಡುಗಡೆಗೊಳ್ಳುತ್ತಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದ್ದು, ಎಲ್ಲರೂ ಸಿನಿಮಾವನ್ನು ನೋಡಿ ಆಶೀರ್ವದಿಸಬೇಕೆಂದು ಚಿತ್ರದ ನಿರ್ಮಾಪಕರಾದ ಲಯನ್ ಕಿಶೋರ್ ಡಿ.ಶೆಟ್ಟಿ ಹೇಳಿದರು.
ಸಾಹಿತಿ ಸೀತಾರಾಮ್ ರೈ, ಚಲನಚಿತ್ರ ನಿರ್ಮಾಪಕ ಸಂಜೀವ ದಂಡಕೇರಿ, ದ.ಕ.ಜಿಲ್ಲಾ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮನಾಥ ಕೋಟ್ಯಾನ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಆಶೋಕ್ ಡಿ.ಕೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಷ ಜಗನಾಥ ಶೆಟ್ಟಿ ಬಾಳ, ಉದ್ಯಮಿ ಪ್ರಕಾಶ್ ಪಾಂಡೇಶ್ವರ್, ಕಲಾಪೋಷಕ ಮೋಹನ್ ರೈ ಕರ್ನೂರು, ಶ್ರೀಮತಿ ಕವಿತಾ ಶಾಸ್ತ್ರಿ ಮೊದಲಾದವರು ಅತಿಥಿಗಳಾಗಿದ್ದರು.
ನಿರ್ಮಾಪಕರಾದ ಲಯನ್ ಚಂದ್ರಹಾಸ್ ಶೆಟ್ಟಿ, ಲಯನ್ ಗಿರೀಶ್ ಶೆಟ್ಟಿ, ಚಿತ್ರದ ನಿರ್ದೇಶಕರಾದ ಕೆ. ಸೂರಜ್ ಶೆಟ್ಟಿ, ಹಾಡುಗಳಿಗೆ ಸಾಹಿತ್ಯ ಬರೆದಿರುವ ಮಯೂರ್ ಆರ್. ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ಮೋಹನ್ ಕೊಪ್ಪಲ ಕದ್ರಿ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಲಾವಿದರಾದ ಹಿತೇಶ್ ನಾಯ್ಕ್ ಮತ್ತು ಸೋನಲ್ ಮೊಂತೆರೋ, ಸಹನಟರಾದ ಅರವಿಂದ್ ಬೋಳಾರ್, ಶೋಭಾರಾಜ್ ಮುಂತಾದವರು ಉಪಸ್ಥಿತರಿದ್ದರು.
ಹೆಸರಾಂತ ಗಾಯಕ ಸುಮಧುರ ಕಂಠದಿಂದ ಆರು ಹಾಡುಗಳು…
ಮಂಗಳೂರಿನವರೇ ಆದ ಹಿತೇಶ್ ನಾಕ್ ಹಾಗೂ ಸೋನಲ್ ಮೊಂತೇರೊ ಪ್ರಮುಖ ಭೂಮಿಕೆಯಲ್ಲಿದ್ದು ತುಳುನಾಡಿನ ಖ್ಯಾತ ಕಲಾವಿದರಾದ ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಸತೀಶ್ ಬಂದಲೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ಶೋಭರಾಜ್ ಪಾವೂರು, ಹರೀಶ್ ವಾಸು ಶೆಟ್ಟಿ, ರಾಘವೇಂದ್ರ ರೈ, ಉಮನಾಥ್ ಕೋಟ್ಯಾನ್, ಚೈತ್ರ ಶೆಟ್ಟಿ, ರವಿ ಸುರತ್ಕಲ್, ಪ್ರದೀಪ್ ಆಳ್ವ, ಜಯಶೀಲ, ಮೋಹನ್ ಕೊಪ್ಪಲ, ಗೋಕುಲ್ ಕದ್ರಿ, ಚಿದಾನಂದ ದುಬೈ ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಅಚ್ಯುತ ರಾವ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ ಪದ್ಮಜಾ ರಾವ್, ಶೋಭಾ ರೈ, ಕವಿತಾ ರೈ ಮತ್ತು ಬಾಲಿವುಡ್ ನಟಿ ಶ್ವೇತಾ ಶರ್ಮಾ ಮತ್ತಿತರರು ನಟಿಸಿದ್ದಾರೆ.
ಕನ್ನಡ ಸಿನಿಮಾದಲ್ಲಿ ಮಿಂಚಿರುವ ಉಗ್ರಂ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶಕ ಎಕ್ಕಸಕ ಸಿನಿಮಾಕ್ಕೆ ಕನ್ನಡ ಸಿನಿಮಾ ಜಗತ್ತಿನ ಹಿರಿಯ ಛಾಯಾಗ್ರಾಹಕ ಕೃಷ್ಣ ಸಾರಥಿ ಅದ್ಭುತವಾಗಿ ತನ್ನ ಪ್ರತಿಭೆಯನ್ನು ತೋರಿದ್ದಾರೆ. ನಟ ಕಿಚ್ಚ ಸುದೀಪ್ರವರ ಹಲವು ಸಿನಿಮಾಗಳಿಗೆ ಸಂಕಲನ ಮಾಡಿರುವ ಕೆ.ಆರ್. ಲಿಂಗರಾಜು ಇಲ್ಲಿಯೂ ತಮ್ಮ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ನಟ ರವಿಚಂದ್ರನ ಸಿನಿಮಾಗಳಿಗೆ ಖಾಯಂ ಸೌಂಡ್ ಇಂಜಿನಿಯರ್ ಆಗಿರುವ ಹುಲಿವನ ನಾಗರಾಜ್ ಎಕ್ಕಸಕ ಸಿನಿಮಾದ ಧ್ವನಿ ತಾಂತ್ರಕತೆಯನ್ನು ಕೈಯಾಡಿಸಿದ್ದು ಕೊಚಾಡಿಯಾನ್ ತಮಿಳ್ ಸೂಪರ್ ಹಿಟ್ ಸಿನಿಮಾಕ್ಕೆ ಗ್ರಾಫಿಕ್ಸ್ ಕೆಲಸ ಮಾಡಿರುವ ಪ್ರಣವ್ ಲಿಯೋರವರು ಗ್ರಾಫಿಕ್ಸ್ ಕೆಲಸವನ್ನು ಮುಂಬೈನ ಹಾಗೂ ಬೆಂಗಳೂರಿನ ತಂತ್ರಜ್ಞರಿಂದ ಸಿನಿಮಾದ ವಿವಿಧ ಕೆಲಸ ಕಾರ್ಯ ನಡೆಸಲಾಗಿದೆ. ಧನು ಕುಮಾರ್ ಕೋರಿಯೋಗ್ರಫಿ ಮಾಡಿದ್ದು, ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಮಯೂರ್ ಆರ್. ಶೆಟ್ಟಿ ಹಾಡುಗಳ ಸಾಹಿತ್ಯ ಬರೆದಿದ್ದು. ವಸಂತ್ ಅಮಿನ್ ಹಾಗೂ ಡಿಬಿಸಿ ಶೇಖರ್ ಎರಡು ಹಾಡುಗಳನ್ನು ಬರೆದಿದ್ದಾರೆ.
ಸಿನಿಮಾದಲ್ಲಿ ಆರು ಹಾಡುಗಳಿವೆ. ಕನ್ನಡ ಸಿನಿಮಾದ ಹೆಸರಾಂತ ಗಾಯಕರಾದ ಚಂದನ್ ಶೆಟ್ಟಿ, ಅನುರಾದ ಭಟ್, ಸಂತೋಷ್ ವೆಂಕಿ, ತೆಲುಗು ಸಿನಿಮಾ ರೇಸ್ ಗುರ್ರಮ್ನ ಗಾಯಕ ಸಿಂಹರವರು ಒಂದು ಹಾಡಿಗೆ ಧ್ವನಿಗೂಡಿದ್ದಾರೆ. ಮತ್ತು ದುಬೈನ ಹೆಸರಾಂತ ಯುವ ಉದ್ಯಮಿ, ಗಾಯಕರೂ ಆಗಿರುವ ಹರಿಶ್ ಶೇರಿಗಾರ್ ಹಾಗೂ ಅಕ್ಷತಾ ರಾವ್ ದುಬೈ ಇವರು ಹಾಡಿದ್ದಾರೆ. ದಿನಕರ ಶೆಟ್ಟಿ ಮತ್ತು ಮೋಹನ್ ಕೊಪ್ಪಲ ಕದ್ರಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಹಲವಾರು ಕನ್ನಡ ಹಾಗೂ ತುಳು ಸಿನಿಮಾದ ಪ್ರಚಾರವಿನ್ಯಾಸದಲ್ಲಿ ಕೈಯಾಡಿಸಿರುವ ದೇವಿ ರೈಯವರು ಈ ಸಿನಿಮಾದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಒಟ್ಟಾರೆ ಈ ಸಿನಿಮಾವು ಪ್ರೀತಿ-ಪ್ರೇಮದ ಜೊತೆಗೆ ಹಾಸ್ಯ-ಮನೋರಂಜನೆಯಿಂದ ಕೂಡಿದೆ.
1 Comment
CONGRATULATIONS TO TEAM “EKKA SAKA” & BEST OF LUCK FOR SUPER SUCCESS….