ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮೇ 4 ರವರೆಗೆ ನಡೆಯಲಿರುವ 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಗುರುವಾರ ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಎರಡು ಸಾವಿರ ಬಲೂನುಗಳನ್ನು ಆಗಸಕ್ಕೆ ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇಶಪಾಂಡೆ ಅವರು ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಂಗಳೂರಿನಲ್ಲಿ ಈ ರಾಷ್ಟ್ರೀಯ ಕ್ರೀಡಾಕೂಟ ಆಯೋಜನೆಗೆ ಸಹಕಾರ ನೀಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪೂರ್ವನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ತಾವು ಈ ಕ್ರೀಡಾ ಕೂಟ ಉದ್ಘಾಟಿಸುತ್ತಿರುವುದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಬಾಲಿವುಡ್ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರು ಮಾತನಾಡಿ, ತುಳುನಾಡಿನ ಮಣ್ಣಿನ ಮಗನಾಗಿರುವ ನಾನು ಇಂತಹ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಕ್ರೀಡಾ ರಂಗದಲ್ಲಿ ಮಂಗಳೂರಿನ ಕೀರ್ತಿ ಇನ್ನಷ್ಟು ಎತ್ತರಕ್ಕೇರಲಿ ಎಂದರು.
ರಾಜ್ಯದ ಕ್ರೀಡಾ ಮತ್ತು ಯುವಜನ ಸೇವಾ ಸಬಲೀಕರಣ ಸಚಿವ ಅಭಯಚಂದ್ರ ಜೈನ್, ಅರಣ್ಯ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮುಖ್ಯ ಅತಿಥಿಗಳಾಗಿದ್ದರು.
ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ನಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅಥ್ಲೆಟಿಕ್ಸ್ ಫೆಡರೇಶನ್ ಅಫ್ ಇಂಡಿಯಾದ ಅಧ್ಯಕ್ಷ ಆದಿಲ್ ಜೆ.ಸುಮಾರಿವಾಲಾ ಪ್ರಸ್ತಾವನೆಗೈದರು. ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ನಿನ ಅಧ್ಯಕ್ಷ ಮಂಜುನಾಥ ಭಂಡಾರಿ, ಯುವ ಸಬಲೀಕರಣ- ಕ್ರೀಡಾ ಇಲಾಖೆ ನಿರ್ದೇಶಕ ಎಚ್.ಎಸ್.ವೆಂಕಟೇಶ್, ಶಾಸಕ ಮೊಯಿದ್ದೀನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಂಗಳೂರು ಮಹಾನಗರಪಾಲಿಕೆ ಮೇಯರ್ ಜೆಸಿಂತಾ ಮೊದಲಾದವರಿದ್ದರು.
ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಸಹನಾ ಕುಮಾರಿ ಪ್ರತಿಜ್ಞಾ ವಿಧಿ ಬೋಧಿಸಿದರು. ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಆಕರ್ಷಕ ಮೆರವಣಿಗೆ..
ಕ್ರೀಡಾಕೂಟದ ಉದ್ಘಾಟನೆಗಿಂತ ಮೊದಲು ಆಕರ್ಷಕ ಮೆರವಣಿಗೆ ನಡೆಯಿತು. ಮೈಸೂರಿನ ಪೊಲೀಸ್ ಬ್ಯಾಂಡ್, ತಟ್ಟಿರಾಯ, ಕೊಂಬು-ಚೆಂಡೆ, ಬಣ್ಣದ ಕೊಡೆಗಳು, ಆಟಿ ಕಳೆಂಜ, ಕೇರಳದ ಚೆಂಡೆ, ಥೆಯ್ಯಂ, ಕುಡುಬಿ, ಯಕ್ಷಗಾನ, ಹುಲಿವೇಷ, ಕಲ್ಲಡ್ಕ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ವೀರಗಾಸೆ, ನಗಾರಿ ಮುಂತಾದುವುಗಳು ಜನಮನ ಸೆಳೆದವು.
ಹೆಚ್ಚಿನ ವಿವರ ಹಾಗೂ ಚಿತ್ರಗಳನ್ನು ನಿರೀಕ್ಷಿಸಿರಿ…