ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಪ್ರಥಮ ಸಾಧನೆಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್) ಶತಮಾನೋತ್ಸವದ ಸವಿನೆನಪಿಗಾಗಿ ನಿರ್ಮಿಸಿರುವ ನೂತನ ಬಹುಮಹಡಿ ಕಟ್ಟಡ “ಉತ್ಕೃಷ್ಟ’ ಸಹಕಾರಿ ಸೌಧ ಎ. 30ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಸೋಮವಾರ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೊಡಿಯಾಲ್ಬೈಲ್ನಲ್ಲಿ ಅತ್ಯಾಧುನಿಕ ವಿನ್ಯಾಸದೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ 5 ಅಂತಸ್ತಿನ ಈ ಭವ್ಯ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಪರಾಹ್ನ 3 ಗಂಟೆಗೆ ಉದ್ಘಾಟಿಸುವರು. ಜಿಲ್ಲಾ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಉದ್ದೇಶದಿಂದ ಕೊಡಿಯಾಲ್ಬೈಲ್ ಕೇಂದ್ರ ಶಾಖೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿದ್ದು, ನಬಾರ್ಡ್ನ ಚೇರ್ವೆುನ್ ಹರ್ಷಕುಮಾರ್ ಭನ್ವಾಲಾ ಉದ್ಘಾಟಿಸುವರು. ಬ್ಯಾಂಕ್ನ ಯೋಜನೆಗಳಿಗೆ ಪೂರಕವಾಗಿ, ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲಾಗಿರುವ ಐ.ಟಿ. ಸೆಂಟರ್ನ್ನು ಸಹಕಾರ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ಉದ್ಘಾಟಿಸುವರು. ಸಹಕಾರಿ ಕ್ಷೇತ್ರದ ಪಿತಾಮಹ, ಈ ಬ್ಯಾಂಕ್ನ ನಿರ್ಮಾಣ ಶಿಲ್ಪಿ ದಿ| ಮೊಳಹಳ್ಳಿ ಶಿವರಾವ್ ಅವರ ಸ್ಮರಣೆಗಾಗಿ ನಿರ್ಮಿಸಿರುವ ಸಭಾಭವನವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಬ್ಯಾಂಕ್ನ ಆಡಳಿತ ಮಂಡಳಿ ಸಭಾಂಗಣವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಅತಿಥಿಗೃಹವನ್ನು ಯುವ ಸಬಲೀಕರಣ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಉದ್ಘಾಟಿಸುವರು ಎಂದು ಅವರು ತಿಳಿಸಿದರು.
ಬ್ಯಾಂಕ್ನ ಸಾಲ ವಿಭಾಗದ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನೆರವೇರಿಸಲಿದ್ದು, ಕಾರ್ನಾಡ್ ಸದಾಶಿವ ರಾವ್ ತರಬೇತಿ ಕೇಂದ್ರವನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬ್ಯಾಂಕ್ನ ಎಟಿಎಂ ಅನ್ನು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು. ಬ್ಯಾಂಕ್ನ ಇತಿಹಾಸ ಪುಸ್ತಕವನ್ನು ಬೆಂಗಳೂರು ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಚೇರಿ ಮುಖ್ಯ ಮಹಾಪ್ರಬಂಧಕ ಎಂ.ಐ. ಗಣಗಿ ಬಿಡುಗಡೆಗೊಳಿಸುವರು ಎಂದರು.
ಸಮಾರಂಭದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮೇಯರ್ ಜೆಸಿಂತಾ ವಿಜಯ್ ವಿಜಯ ಅಲ್ಫ್ರೆಡ್, ಕಾರ್ಪೊರೇಟರ್ ಎ.ಸಿ. ವಿನಯರಾಜ್ ಅವರು ಅತಿಥಿಗಳಾಗಿರುತ್ತಾರೆ ಎಂದು ಅವರು ತಿಳಿಸಿದರು.
ಐದು ಅಂತಸ್ತಿನ ಭವ್ಯ ಉತ್ಕೃಷ್ಟ ಸಹಕಾರಿ ಸೌಧ :
ಐದು ಅಂತಸ್ತಿನ ಭವ್ಯ ಉತ್ಕೃಷ್ಟ ಸಹಕಾರಿ ಸೌಧ 92,000 ಚದರ ಅಡಿ ವಿಸ್ತೀರ್ಣವಿದ್ದು, ಸುಮಾರು 28 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಬ್ಯಾಂಕ್ನ ಕೊಡಿಯಾಲ್ಬೈಲ್ ಕೇಂದ್ರ ಶಾಖೆ, ಬ್ಯಾಂಕ್ನ ಯೋಜನೆಗಳಿಗೆ ಪೂರಕವಾದ ಐಟಿ ಸೆಂಟರ್, ದಿ| ಮೊಳಹಳ್ಳಿ ಶಿವರಾವ್ ಸ್ಮಾರಕ ಸಭಾಭವನ, ಆಡಳಿತ ಮಂಡಳಿ ಸಭಾಂಗಣ, ಸಾಲದ ವಿಭಾಗ, ಅತಿಥಿಗೃಹ, ಕಾರ್ನಾಡ್ ಸದಾಶಿವ ರಾವ್ ತರಬೇತಿ ಕೇಂದ್ರ, ಎಟಿಎಂ ಅನ್ನು ಹೊಂದಿದೆ. ರಾಜ್ಯದಲ್ಲೇ ಈ ರೀತಿಯ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕಟ್ಟಡವನ್ನು ಜಿಲ್ಲಾ ಸಹಕಾರಿ ಬ್ಯಾಂಕ್ ಹೊಂದಿರುವುದು ರಾಜ್ಯದಲ್ಲೇ ಪ್ರಥಮವಾಗಿದೆ. 21 ವರ್ಷಗಳ ಹಿಂದೆ 42 ಕೋ. ರೂ. ಇದ್ದ ಸಾಲ ವ್ಯವಹಾರ ಇಂದು 1,920 ಕೋ. ರೂ. ಹಾಗೂ ಠೇವಣಿ 64 ಕೋ. ರೂ.ನಿಂದ 2,620 ಕೋ. ರೂ.ಗೇರಿ ಅತ್ಯುನ್ನತ ಸಾಧನೆ ದಾಖಲಿಸಿದೆ ಎಂದು ಡಾ| ಎಂ.ಎನ್. ರಾಜೇಂದ್ರ ಕುಮಾರ್ ವಿವರಿಸಿದರು.
ರೈತರಿಗಾಗಿ ನೂತನ ಕೊಡುಗೆ
ಎಸ್ಸಿಡಿಸಿಸಿ ಬ್ಯಾಂಕ್ನ ಶತಮಾನೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ ಅಂಗವಾಗಿ ಬ್ಯಾಂಕ್ ರೈತರಿಗಾಗಿ ದೇಶದಲ್ಲೇ ವಿನೂತನ ಯೋಜನೆಯೊಂದನ್ನು ರೂಪಿಸಿದ್ದು, ಕಟ್ಟಡದ ಉದ್ಘಾಟನ ಸಮಾರಂಭದಲ್ಲಿ ಪ್ರಕಟಿಸಲಾಗುವುದು. ಎಲ್ಲರೂ ಮನೆ ಹೊಂದುವ ಕನಸು ಸಾಕಾರಕ್ಕೆ ಪೂರಕವಾಗಿ ಶೇ. 9.5ರಿಂದ 10.5ರ ವರೆಗೆ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ಯೋಜನೆ ಅನುಷ್ಠಾನಗೊಳ್ಳಲಿದೆ. ಉದ್ಘಾಟನ ಸಮಾರಂಭಕ್ಕೆ ಉಭಯ ಜಿಲ್ಲೆಗಳ ಪ್ರತಿ ಗ್ರಾಮದಿಂದ ಕೃಷಿಕರು ಆಗಮಿಸಲಿದ್ದು, ಈಗಾಗಲೇ 4,000 ಸದಸ್ಯರು ಹೆಸರು ನೋಂದಾಯಿಸಿದ್ದಾರೆ. ಎಲ್ಲರಿಗೂ ಉಪಹಾರ, ಭೋಜನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಾ| ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಎಂ.ವಾದಿರಾಜ್, ಸದಾಶಿವ್ ಉಳ್ಳಾಲ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಬು ಬಿಲ್ಲವ.ಬಿ ಮುಂತಾದವರು ಉಪಸ್ಥಿತರಿದ್ದರು.