ಮಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮಕ್ಷಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಬಹಿರಂಗ ವಾಕ್ಸಮರ ನಡೆಸಿದ ಘಟನೆ ಕಾಂಗ್ರೆಸ್ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ನಡೆದಿದೆ.
ಆ ಮೂಲಕ ಕಾಂಗ್ರೆಸ್ ಪಾಳಯದ ಭಿನ್ನಾಭಿಪ್ರಾಯ ಬಹಿರಂಗವಾದಂತಾಗಿದೆ. ಆರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿಲ್ಲೆಯಲ್ಲಿ ಪಕ್ಷದ ಪ್ರತಿಷ್ಠೆಯನ್ನು ಮರು ಸ್ಥಾಪಿಸ ಬೇಕಾಗಿದೆ. ಅದಕ್ಕೆ ಶಿಸ್ತು ಮುಖ್ಯ. ಪಕ್ಷದ ಶಿಸ್ತು ಮೀರುವವರು ಎಷ್ಟೇ ದೊಡ್ಡ ನಾಯಕರಾದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಪಕ್ಷದ ವಿರುದ್ಧ ಮಾತನಾಡುವವರಿಗೆ ಸಹಾನುಭೂತಿ ಬೇಡ. ಪಕ್ಷದೊಳಗಿನ ಅಭಿಪ್ರಾಯ ಭೇದವನ್ನು ಮಾಧ್ಯಮ ದವರ ಎದುರು ತರುವ ಬದಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕೆಂದರು.
ರೈ ಮಾತಿನ ಬಳಿಕ ಕಾರ್ಯಕ್ರಮ ನಿರೂಪಕರು ಸಮಯದ ಅಭಾವ ಇರುವುದರಿಂದ ನೇರವಾಗಿ ಮುಖ್ಯ ಮಂತ್ರಿಗಳು ಮಾತನಾಡುತ್ತಾರೆ ಎಂದು ಘೋಷಣೆ ಮಾಡಿದ್ದರು. ಇದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಕೆರಳಿಸಿತು.
ಹೀಗಾಗಿ ತಾನಾಗಿಯೇ ಎದ್ದು ಬಂದು ಮಾತಿಗೆ ಶುರುವಿಟ್ಟ ಪೂಜಾರಿ, ರೈ ಮಾತಿಗೆ ತಿರುಗೇಟು ನೀಡಿದರು.
ನನ್ನನ್ನು ಮಾತನಾಡು ವಂತೆ ವೇದಿಕೆಯಲ್ಲಿದ್ದ ಯಾರೂ ಹೇಳಿಲ್ಲ. ಮುಖ್ಯಮಂತ್ರಿಯವರು ಹೇಳಿದ್ದಾರೆ. ರಮಾನಾಥ ರೈಯವರು ಸರಿಯಾಗಿ ಮಾತನಾಡಿದ್ದಾರೆ. ಪಕ್ಷದಲ್ಲಿ ಶಿಸ್ತು ಮುಖ್ಯ. ಮೊದಲು ಹಣ ಮಾಡುವವರಿಗೆ, ಹಿಂದೆ ಮುಂದೆ ಸುತ್ತುವವರಿಗೆ ಶಿಸ್ತಿನ ಪಾಠ ಹೇಳಬೇಕು. ರೈಯವರು ಶಿಸ್ತಿನ ಬಗ್ಗೆ ಯಾಕೆ ಹೇಳಿದರು ಎಂಬುದು ಗೊತ್ತಿದೆ. ಐಎಎಸ್ ಅಧಿಕಾರಿ ಡಿ. ಕೆ. ರವಿ ಅಸಹಜ ಸಾವು ಕೊಲೆಯೋ, ಸಾವೋ ಗೊತ್ತಿಲ್ಲ. ಆದರೆ ಸಾವಿನ ಹಿನ್ನೆಲೆಯಲ್ಲಿ ಜನತೆ ಹಾಗೂ ಮಾಧ್ಯಮ ಸರಕಾರದ ವಿರುದ್ಧ ತಿರುಗಿ ಬಿದ್ದಿತ್ತು. ಈ ಸಂದರ್ಭದಲ್ಲಿ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದೇ ಸತ್ಯ ಹೊರ ಬೀಳಲಿ ಎಂದು. ಮುಖ್ಯಮಂತ್ರಿಯವರು ಪ್ರಾಮಾಣಿಕ ವಾಗಿದ್ದಾರೆ, ಅವರಿಗೇನು ತೊಂದರೆ ಯಾಗುವುದಿಲ್ಲ. ಆದ್ದರಿಂದ ಸಿಬಿಐ ತನಿಖೆಗೆ ಒತ್ತಾಯಿಸಿದ್ದು ಶಿಸ್ತು ಉಲ್ಲಂಘನೆಯೇ? ಎಂದು ಪ್ರಶ್ನಿ ಸಿದರು. ಯಾರೇ ಆಗಲೀ ತಪ್ಪು ಮಾಡಿದರೆ, ತಪ್ಪನ್ನು ತಿದ್ದಿ ಸರಿ ದಾರಿಗೆ ತರಬೇಕು. ಆ ಕೆಲಸವನ್ನು ಈ ಪೂಜಾರಿ ಮಾಡುತ್ತಿದ್ದಾನೆ. ನಾನು ಸಾಯುವ ತನಕ ಜನರ ಪರವಾಗಿ ಮಾತನಾಡುತ್ತೇನೆ, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.
ಇಬ್ಬರ ವಾಕ್ಸಮರದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ವಾಕ್ಚಾತುರ್ಯ ಪ್ರದರ್ಶಿಸಿದರು. ರಾಜ್ಯದಲ್ಲಿ ಆರು ಸಾವಿರ ಗ್ರಾಮ ಪಂಚಾಯತ್ಗಳಿದ್ದು, ಹೆಚ್ಚಿನ ಗ್ರಾಮ ಪಂಚಾಯತ್ಗಳು ಕಾಂಗ್ರೆಸ್ ವಶದಲ್ಲಿದೆ. ಈ ಚುನಾವಣೆ ಯಾವುದೇ ಪಕ್ಷದ ಚಿಹ್ನೆಯಡಿ ನಡೆಯದಿದ್ದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಗೆದ್ದರೆ ಮುಂದಿನ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಗೆ ಉತ್ತಮ ಅಡಿಪಾಯ ಹಾಕಿದಂತಾಗುತ್ತದೆ. ಈ ದಿಸೆಯಲ್ಲಿ ಕಾರ್ಯಕರ್ತರು ಒಗ್ಗೂಡಿ, ಕಾಂಗ್ರೆಸ್ಸಿನ ಜನಪರ ಕೆಲಸಗಳನ್ನು ಪ್ರತೀ ಮನೆ, ಮನಸ್ಸುಗಳಿಗೆ ತಿಳಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕೆಂದರು.
ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ, ಆದರೆ ಬಿಜೆಪಿಯವರು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸುತ್ತೇವೆ ಎಂದು ಹೊರಟಿದ್ದಾರೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಚುನಾವಣೆಗೆ ನಿಲ್ಲುತ್ತೇನೆ. ಮಾತ್ರವಲ್ಲ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತೇನೆ,
ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಹಿಂದಿನ ಬಿಜೆಪಿ ಸರಕಾರ ಏನೂ ಕೆಲಸ ಮಾಡಿಲ್ಲ. ಬರೇ ರಾಜ್ಯವನ್ನು ಲೂಟಿ ಮಾಡುವುದರಲ್ಲಿಯೇ ತಮ್ಮ ಅಧಿಕಾರವನ್ನು ಕಳೆದರು ಎಂದು ಟೀಕಿಸಿದರು.
ಕಪ್ಪುಹಣ ತರುತ್ತೇನೆ, ಎಲ್ಲರಿಗೂ ತಲಾ 15 ಲಕ್ಷ ನೀಡುತ್ತೇವೆ ಎಂದ ಮೋದಿಯವರು ಈಗ ಆ ಬಗ್ಗೆ ಮಾತನಾಡುತ್ತಲೇ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಬಿಜೆಪಿಯವರಷ್ಟು ಸುಳ್ಳುಗಾರರನ್ನು ನಾನು ನೋಡಿಲ್ಲ. ಬಿಜೆಪಿಗೆ ಅನ್ವರ್ಥ ನಾಮವೇ ಸುಳ್ಳು. ಸುಳ್ಳನೇ ನೂರು ಸಲ ಹೇಳಿ ಸತ್ಯವೆಂದು ಬಿಂಬಿಸುವುದು ಬಿಜೆಪಿ ಕರಗತವಾದ ಕಲೆ. ಇವರಿಗೆ ಮಾನ, ಮಾರ್ಯದೆ, ಲಜ್ಜೆ ಯಾವುದೂ ಇಲ್ಲ. ಬಿಜೆಪಿಯ ನಾಯಕರಲ್ಲಿ ಎಷ್ಟೋ ಮಂದಿ ಜೈಲಿಗೆ ಹೋಗಿದ್ದಾರೆ, ಕೆಲವರು ಇನ್ನೂ ಜೈಲಿನಲ್ಲಿದ್ದಾರೆ. ಸದನದಲ್ಲಿ ಅಶ್ಲೀಲ ಚಿತ್ರ ನೋಡಿರುವುದನ್ನು ಜನತೆ ಇನ್ನೂ ಮರೆತಿಲ್ಲ. ಇಷ್ಟೆಲ್ಲಾ ತಪ್ಪು ಮಾಡಿದರೂ ನಾವು ಹರಿಶ್ಚಂದ್ರ ಎಂದೇ ಮಾತನಾಡುತ್ತಾರೆ ಎಂದು ಬಿಜೆಪಿಗರನ್ನು ಕುಟುಕಿದರು.
ನೇತ್ರಾವತಿ ನದಿ ತಿರುವು ಯೋಜನೆ ಇಲ್ಲ ;
ನೇತ್ರಾವತಿ ನದಿ ತಿರುವು …ಯೋಜನೆ ಅಂತ ಯಾಕೆ ಯಾವಾಗಲೂ ಅದನ್ನೇ ಹೇಳುತ್ತಿದ್ದೀರಿ. ನೇತ್ರಾವತಿ ನದಿ ತಿರುವು ಯೋಜನೆ ಎಂಬುದೇ ಇಲ್ಲ. ಕೈಗೆತ್ತಿಕೊಂಡಿರುವುದು ಎತ್ತಿನ ಹೊಳೆ ಯೋಜನೆ. ಇದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನದಿ ತಿರುವು ಯೋಜನೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೀತಿ. ನೇತ್ರಾವತಿ ತಿರುವು ಯೋಜನೆ ಎಂಬುದೇ ಇಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಕೈಗೆತ್ತಿಕೊಂಡಿರುವ ಎತ್ತಿನ ಹೊಳೆ ಯೋಜನೆ ಎಂಬುದು ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಮುಂತಾದೆಡೆ ಕುಡಿಯುವ ನೀರು ಒದಗಿಸುವ ಯೋಜನೆ ಎಂದರು.
ಮೇಕೆದಾಟು ಯೋಜನೆ ಕೈಗೆತ್ತಿಕೊಂಡರೆ ಎತ್ತಿನ ಹೊಳೆಯ ಅಗತ್ಯವಿಲ್ಲ ಎನ್ನಲಾಗುತ್ತಿದೆಯಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಮೇಕೆದಾಟು ಯೋಜನೆಯೇ ಬೇರೆ. ಅದು ಬೆಂಗಳೂರು ಗ್ರಾಮಾಂತರ ಪ್ರದೇಶ, ಕೋಲಾರದ ಕೆರೆಗಳನ್ನು ತುಂಬಿಸುವ ಮೂಲಕ ಕುಡಿಯುವ ನೀರಿಗಾಗಿನ ಯೋಜನೆ ಎಂದರು.
ಖಾಲಿ ಖಾಲಿ ಕುರ್ಚಿಗಳು : 4.30ಕ್ಕೆ ನಡೆಯಬೇಕಿದ್ದ ಕಾರ್ಯಕ್ರಮ ಸುಮಾರು ಒಂದೂ ವರೆ ತಾಸು ವಿಳಂಬವಾಗಿ ಆರಂಭ ಗೊಂಡಿತು. ಕದ್ರಿಯ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಕಾಂಗ್ರೆಸ್ ಸಮಾವೇಶ ಎಂದೇ ಹೇಳಲಾಗಿ ದ್ದರೂ ಹಾಕಲಾಗಿದ್ದ ಕುರ್ಚಿಗಳು ಹಿಂದುಗಡೆ ಖಾಲಿಯೇ ಉಳಿದಿ ದ್ದವು.