ಮಂಗಳೂರು,ಎ.24 : ಆನಂದ್ ಫಿಲಂಸ್ ಲಾಂಛನದಲ್ಲಿ ಆಡ್ಯಾರು ಮಾಧವ ನಾಯ್ಕ್ರವರ ನಿರ್ಮಾಣ ಸಹಕಾರದೊಂದಿಗೆ ರಾಮ್ ಶೆಟ್ಟಿಯವರು ನಿರ್ಮಿಸಿ, ನಿರ್ದೇಶಿಸಿರುವ “ಸೂಪರ್ ಮರ್ಮಯೆ ತುಳು ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಶುಕ್ರವಾರ ನಗರದ ಫ್ರೆಸ್ ಕ್ಲಬ್ ನಲ್ಲಿ ನಡೆಯಿತು. ದ.ಕ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಳ್ಳಾಲ್ ಅವರು “ಸೂಪರ್ ಮರ್ಮಯೆ” ತುಳು ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ರಾಮ್ ಶೆಟ್ಟಿ ಯವರು ಮಾತನಾಡಿ, ಉತ್ತಮ ಹಾಡುಗಳಿರುವ ಈ ಚಿತ್ರವು ಇತ್ತೀಚೆಗಷ್ಟೆ ಚಿತ್ರೀಕರಣಗೊಂಡು, ತಾಂತ್ರಿಕ ಕೆಲಸ ಕಾರ್ಯ ಮುಗಿದು, ಸೆನ್ಸಾರ್ ಸರ್ಟೀಫಿಕೇಟು ಅನುಮತಿ ಪಡೆದುಕೊಂಡು. ಇದೀಗ ಈ ತುಳುಚಿತ್ರ ಶೀಘ್ರದಲ್ಲೇ ತುಳುನಾಡಿನ ಬೆಳ್ಳಿತೆರೆಯ ಮೇಲೆ ಬಿಡುಗಡೆಗೊಳ್ಳಲು ಸಿದ್ಧಗೊಂಡಿದೆ ಎಂದರು.
ಕಡಲಮಗೆ ಖ್ಯಾತಿಯ ಎಸ್.ಪಿ.ಚಂದ್ರಕಾಂತ್ ರವರು ಸಂಗೀತ ನಿರ್ದೇಶನ ನೀಡಿರುವ ಈ ಚಿತ್ರದ 5 ಹಾಡುಗಳಿಗೆ ಹಿಟ್ ಗೀತೆಗಳನ್ನು ಕೊಟ್ಟ ಶಶಿರಾಜ್ ಕಾವೂರುರವರು ಗೀತಾ ಸಾಹಿತ್ಯ ಬರೆದಿರುತ್ತಾರೆ. ಹಿನ್ನೆಲೆ ಗಾಯಕರಾಗಿ – ರಾಜೇಶ್ ಕೃಷ್ಣನ್, ಅನುರಾಧ ಭಟ್, ಸಂತೋಷ್, ಎ.ಆರ್ ಪ್ರತಿಮಾ, ಹೇಮಂತ್, ಎಸ್.ಪಿ ಚಂದ್ರಕಾಂತ್, ಸುನಿಧಿ ಶೆಟ್ಟಿ, ಡಾ ಶಮಿತಾ ಮಲ್ನಾಡ್, ಆಕಾಶ್ ಇವರೆಲ್ಲರು ಹಾಡಿರುತ್ತಾರೆ ಎಂದರು.
ಉತ್ತಮ ಗುಣಮಟ್ಟದ ಪ್ರಶಂಸೆ ಪಡೆದ, ಹಾಗೂ 10 ಪ್ರಶಸ್ತಿಗಳನ್ನು ಬಾಚಿಕೊಂಡಿರುವ ” ಬಂಗಾರ್ದ ಕುರಲ್” ತಂಡದ ಅಡ್ಯಾರು ಮಾಧವ ನಾಯ್ಕ್ ಆರ್ಪಿಸುವ . ರಾಮ್ ಶೆಟ್ಟಿ ನಿರ್ಮಾಣದ ನಾಲ್ಕನೇಯ ಈ ತುಳುಚಿತ್ರದಲ್ಲಿ ಅನುಭವಸ್ಥ ತಂತ್ರಜ್ಞರ ಸಮೂಹವೇ ಇದೆ. ಮುಂಬಾಯಿ ಯುಜಿನ್ ಡಿ.ಸೋಜಾರ ಛಾಯಗ್ರಾಹಣ, ನಾಸಿರ್ ಹಕೀಂ ಅನ್ಸಾರಿಯವರ ಸಂಕಲನ, ಮದನ್ – ಹರಿಣಿಯವರ ನೃತ್ಯ ನಿರ್ದೇಶನ, ತಮ್ಮ ಲಕ್ಷಣರ್ ಕಲಾ ನಿರ್ದೇಶನ , ನವೀನ್ ಶೆಟ್ಟಿ ಆಳಕೆಯವರ ಸಂಭಾಷಣೆ, ಸಚಿನ್ ಶೆಟ್ಟಿಯವರ ಸಹ ನಿರ್ದೇಶನವಿದೆ ಎಂದು ಅವರು ವಿವರಿಸಿದರು.
ಕುಟುಂಬ ಕುಟುಂಬಗಳೊಳಗೆ ನಡೆಯುವ ಕಥೆ :” ಫುಲ್ ಕಾಮಿಡಿ ಫಿಲ್ಮ್”
ಮಾವ , ಆಳಿಯ, ಮಗಳು, ಮಡದಿ, ಹೀಗೆ ಕುಟುಂಬ ಕುಟುಂಬಗಳೊಳಗೆ ನಡೆಯುವ ಕಥೆಯನ್ನು ಹಾಸ್ಯರೂಪದ ಸನ್ನಿವೇಶಗಳೊಂದಿಗೆ ತೆರೆಯಲ್ಲಿ ಕಾಣಲಿರುವ ಈ ಸಿನೆಮಾದಲ್ಲಿ ಗೋಪಿನಾಥ್ ಭಟ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಮೀನನಾಥ್ ರಾಘವೇಂದ್ರ ರೈ, ಶೋಭಾ ರೈ, ದಿವ್ಯಾಶ್ರೀ ಸಾಲಿಯಾನ್ ಮುಂಬಾಯಿ, ಹರೀಶ್ ವಾಸು ಶೆಟ್ಟಿ, ಪ್ರದೀಪ್ ಆಳ್ವ. ಸತೀಶ್ ಬಂದಲೆ, ದೀಪಕ್ ರೈ, ಗಣೇಶ್ ಮಲ್ಲಿ ಮೊದಲಾದವರ ಜೊತೆ ಗೌರವ ನಟರಾಗಿ ಶಿವದ್ವಜ್ ಶೆಟ್ಟಿಯವರು ಕೂಡ ನಟಿಸಿದ್ದರೆ ಎಂದು ರಾಮ್ ಶೆಟ್ಟಿ ತಿಳಿಸಿದರು.
750 ಕ್ಕೂ ಮಿಕ್ಕಿದ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಮುಂಬಾಯಿಯ ರಾಮ್ ಶೆಟ್ಟಿಯವರು ಕಥೆ, ಚಿತ್ರಕಥೆ, ನಿರ್ಮಾಣ, ನಿರ್ದೇಶನ ಮಾಡಿ ಈ ತುಳುಚಿತ್ರವನ್ನು ಪ್ರಥಮ ಭಾರಿಗೆ ವಿಭಿನ್ನ ರೀತಿಯಲ್ಲಿ ” ಫುಲ್ ಕಾಮಿಡಿ ಫಿಲ್ಮ್” ಆಗಿ ಬೆಳ್ಳಿ ಪರದೆಯಲ್ಲಿ ನೀಡಲಿದ್ದಾರೆ.
ಚಿತ್ರದ ನಿರ್ಮಾಪಕ ಅಡ್ಯಾರು ಮಾಧವ ನಾಯ್ಕ್, ಸಂಗೀತ ನಿರ್ದೇಶಕ ಎಸ್.ಪಿ.ಚಂದ್ರಕಾಂತ್, ಕಲಾವಿದರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ, ಗೋಪಿನಾಥ್ ಭಟ್, ಸಂಭಾಷಣೆ ಬರೆದ ನವೀನ್ ಶೆಟ್ಟಿ ಅಳಕೆ, ಗೀತೆ ಸಾಹಿತ್ಯ ಬರೆದ ಶಶಿರಾಜ್ ಕಾವೂರ್, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಮುಂತಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.